'ಒತ್ತಡ ಇದೆ, ಆದ್ರೆ ಯಾರ ಕಡೆಯಿಂದ ಗೊತ್ತಿಲ್ಲ': ಉಲ್ಟಾ ಹೊಡೆದ 'ಜೇಮ್ಸ್' ನಿರ್ಮಾಪಕ
ಪುನೀತ್ ರಾಜ್ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ರಾಜ್ಯದಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಆದರೆ ಈ ನಡುವೆ 'ಜೇಮ್ಸ್' ಸಿನಿಮಾ ತೆಗೆದು ಬೇರೆ ಸಿನಿಮಾ ಪ್ರದರ್ಶನ ಮಾಡಬೇಕು ಎಂದು ಬಿಜೆಪಿ ಶಾಸಕರು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ 'ಜೇಮ್ಸ್' ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದೂರು ಹೇಳಿದ್ದಾರೆ. ಸಹಾಯ ಮಾಡುವಂತೆ ಮನವಿಯನ್ನೂ ಮಾಡಿದ್ದಾರೆ ಎನ್ನಲಾಗಿತ್ತು.
'ಜೇಮ್ಸ್' ಸಿನಿಮಾ ತೆಗೆದು ಅದರ ಬದಲಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶಿಸುವಂತೆ ಬಿಜೆಪಿ ಶಾಸಕರು, ಸಚಿವರು ಒತ್ತಾಯ ಮಾಡುತ್ತಿರುವ ಬಗ್ಗೆ ನಿನ್ನೆ ವಿಪಕ್ಷ ಸಿದ್ದರಾಮಯ್ಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದರು, ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಬೇಸರ ಹೇಳಿಕೊಂಡಿದ್ದಾಗಿಯೂ ಹೇಳಿದರು. ಆದರೆ ನಿನ್ನೆ ರಾತ್ರಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಕಿಶೋರ್ ಪತ್ತಿಕೊಂಡ, ತಾವು ಸಿದ್ದರಾಮಯ್ಯ ಬಳಿ ದೂರು ಹೇಳಿಲ್ಲ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಕಾರಣವೇ ಬೇರೆ ಎಂದಿದ್ದಾರೆ.

ಒತ್ತಡ ಇದೆ, ಆದರೆ ಯಾರಿಂದ ಗೊತ್ತಿಲ್ಲ: ಕಿಶೋರ್ ಪತ್ತಿಕೊಂಡ
'ಜೇಮ್ಸ್' ಸಿನಿಮಾದ ಪ್ರಚಾರಾರ್ಥ ತೆಲುಗು ನಟ ಶ್ರೀಕಾಂತ್ ಜೊತೆ ರಾಜ್ಯ ಪ್ರವಾಸದಲ್ಲಿರುವ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿನ್ನೆ ಗಂಗಾವತಿಯ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು, ''ನನ್ನ ಮೇಲೆ ನೇರವಾಗಿ ಯಾರೂ ಒತ್ತಡ ಹಾಕಿಲ್ಲ ಆದರೆ ಚಿತ್ರಮಂದಿರಗಳ ಓನರ್ಗಳು ಕರೆ ಮಾಡಿ, ನಾವು ಒಂದು ಶೋ ಹಾಕಿಕೊಳ್ತೇವೆ, ಎರಡು ಶೋ ಹಾಕಿಕೊಳ್ತೇವೆ ಎನ್ನುತ್ತಿದ್ದಾರೆ. ಆದರೆ ಆ ಚಿತ್ರಮಂದಿರ ಮಾಲೀಕರಿಗೆ ಯಾರು ಒತ್ತಡ ಹಾಕುತ್ತಿದ್ದಾರೊ ನನಗೆ ಗೊತ್ತಿಲ್ಲ'' ಎಂದು ಮಾಹಿತಿ ನೀಡಿದರು.

ಸಿನಿಮಾ ತೆಗೆಸಲು ಯತ್ನಿಸುತ್ತಿರುವವರಿಗೆ ಕಿಶೋರ್ ಮನವಿ
''ನನಗೆ ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆಯಲು ಇಷ್ಟವಿಲ್ಲ. ಅಪ್ಪು ಅವರ ಕೊನೆಯ ಸಿನಿಮಾ ಇದು. ಸಿನಿಮಾ ಬಿಡುಗಡೆ ಆಗಿ 100, 50 ಕನಿಷ್ಟ ಪಕ್ಷ ಒಂದು ವಾರವೂ ಇನ್ನೂ ಆಗಿಲ್ಲ. ಜೊತೆಗೆ ಸಿನಿಮಾ ಕಲೆಕ್ಷನ್ ಸಹ ಚೆನ್ನಾಗಿ ಆಗುತ್ತಿದೆ. ಸಿನಿಮಾದ ಕಲೆಕ್ಷನ್ ಸರಿಯಾಗಿ ಆಗಿಲ್ಲವೆಂದರೆ ಪರ್ವಾಗಿಲ್ಲ. ಆದರೆ ಚೆನ್ನಾಗಿ ಪ್ರದರ್ಶನ ಆಗುತ್ತಿರುವಾಗ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದೇನೆ. ನಮ್ಮ ಸಿನಿಮಾ ತೆಗೆದು ಬೇರೆ ಸಿನಿಮಾ ಹಾಕಬೇಕು ಎಂದು ಪ್ರಯತ್ನಿಸುತ್ತಿರುವ ವಿತರಕರಿಗೆ ನಾನು ಮನವಿ ಮಾಡುತ್ತೇನೆ. ಅಣ್ಣನ ಕೊನೆಯ ಸಿನಿಮಾ ಓಡಲು ಅವಕಾಶ ಮಾಡಿಕೊಡಿ'' ಎಂದರು ಕಿಶೋರ್ ಪತ್ತಿಕೊಂಡ.

ಸಿದ್ದರಾಮಯ್ಯ ಅವರ ಬಳಿ ದೂರು ಹೇಳಿಲ್ಲ: ಕಿಶೋರ್
''ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ನಿಜ ಆದರೆ, ನಾನು ಅವರನ್ನು ಭೇಟಿಯಾಗಿ ಸಿನಿಮಾಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ಮಾತನಾಡಲಿಲ್ಲ, ಬದಲಿಗೆ ಅವರನ್ನು ಸಿನಿಮಾಕ್ಕೆ ಆಹ್ವಾನ ಮಾಡಲು ಹೋಗಿದ್ದೆ'' ಎಂದರು ಕಿಶೋರ್ ಪತ್ತಿಕೊಂಡ. ಆದರೆ ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸಿದ್ದರಾಮಯ್ಯ, 'ಜೇಮ್ಸ್' ನಿರ್ಮಾಪಕ ಬಂದು ತಮ್ಮ ಸಿನಿಮಾಕ್ಕೆ ಸಮಸ್ಯೆ ಆಗುತ್ತಿದೆ ಎಂದು ಬೇಸರ ಹೇಳಿಕೊಂಡರು ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಆದರೆ ಈಗ 'ಜೇಮ್ಸ್' ನಿರ್ಮಾಪಕ ಉಲ್ಟಾ ಹೊಡೆದಿದ್ದಾರೆ. ಅಂದಹಾಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಸ್ವತಃ ಬಿಜೆಪಿ ಸದಸ್ಯರಾಗಿದ್ದಾರೆ.

ಕೆಲವು ಕಡೆ ಸಿನಿಮಾ ತೆಗೆದಿದ್ದಾರೆ: ಕಿಶೋರ್
''ಕೆಲವು ಕಡೆಗಳಲ್ಲಿ ಎರಡು ಚಿತ್ರಮಂದಿರಗಳಲ್ಲಿ ಇದ್ದ 'ಜೇಮ್ಸ್' ಸಿನಿಮಾವನ್ನು ತೆಗೆದಿದ್ದಾರೆ'' ಎಂದರು ಕಿಶೋರ್ ಪತ್ತಿಕೊಂಡ. ಅಸಲಿಗೆ ಹುಬ್ಬಳ್ಳಿಯಲ್ಲಿ 'ಜೇಮ್ಸ್' ಓಡುತ್ತಿದ್ದ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆದು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶಿಸಲಾಗುತ್ತದೆ. ಆದರೆ ಈ ಬಗ್ಗೆ ನೇರ ಉತ್ತರ ನೀಡಲು ನಿರಾಕರಿಸಿದ ಕಿಶೋರ್, ರಾಜ್ಯದ ಒಂದು ಭಾಗದಲ್ಲಿ ಹೀಗೆ ಆಗಿರುವುದು ನಿಜ, ಆ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ'' ಎಂದರು.

ದಿನಕ್ಕೆ ನಾಲ್ಕು ಶೋ ಬೇಡಿಕೆ: ಕಿಶೋರ್ ಪತ್ತಿಕೊಂಡ
''ಒಟ್ಟಾರೆ ಈಗ ರಾಜ್ಯದಾದ್ಯಂತ 'ಜೇಮ್ಸ್' ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆಯೋ ಅದೆ ಚಿತ್ರಮಂದಿರಗಳನ್ನು ಮುಂದುವರೆಸಿಕೊಂಡು ಹೋಗಲು ನಾನು ಸಿದ್ಧನಿದ್ದೇನೆ. ನನಗೆ ದಿನಕ್ಕೆ ನಾಲ್ಕು ಶೋ ಕೊಡಿ ಸಾಕು. ಅದರ ಮೇಲೆ ಎಷ್ಟಾದರೂ ಶೋ ಅನ್ನು ಬೇರೆ ಸಿನಿಮಾಗಳವರು ಹಾಕಿಕೊಳ್ಳಲಿ. ಕೆಲವು ಕಡೆ ಒಂದೇ ಊರಿನ ಎರಡು ಚಿತ್ರಮಂದಿರಗಳಲ್ಲಿ 'ಜೇಮ್ಸ್' ಹಾಕಲಾಗಿತ್ತು, ಅದರಲ್ಲಿ ಒಂದು ಚಿತ್ರಮಂದಿರ ತೆಗೆದುಕೊಳ್ಳಲಿ ಅಡ್ಡಿಯಿಲ್ಲ. ಅಪ್ಪು ಅಣ್ಣನ ಕೊನೆಯ ಸಂಪೂರ್ಣ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಹೆಚ್ಚು ಮಂದಿ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಅವಕಾಶ ಮಾಡಿಕೊಡಿ'' ಎಂದು ಕಿಶೋರ್ ಮನವಿ ಮಾಡಿದ್ದಾರೆ.


Click it and Unblock the Notifications











