ಜನಾರ್ದನ ರೆಡ್ಡಿ ಪುತ್ರನಿಗೆ ಅಪ್ಪು ಸ್ಪೂರ್ತಿ: ಕೆಲವೇ ದಿನದಲ್ಲಿ ಶೂಟಿಂಗ್ ಶುರು!
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಾರೆ ಎಂಬ ಸುದ್ದಿ ಬಹಳ ವರ್ಷದಿಂದ ಕೇಳಿಬರುತ್ತಿದೆ. ಆದರೆ ಈ ಸುದ್ದಿ ಹೊರ ಬಂದ ಮೇಲೆ, ಯಾವುದೇ ಮಾಹಿತಿ ಇರಲಿಲ್ಲ ಅಂದರೆ ಯಾವ ಸಿನಿಮಾ, ನಿರ್ದೇಶಕ ಯಾರು, ಕಥೆ ಹೇಗೆ ಇರಲಿದೆ ಎನ್ನುವ ಬಗ್ಗೆ ಎಲ್ಲಾ ಮಾತನಾಡಿರಲಿಲ್ಲ. ತಂದೆ ಮತ್ತು ಮಗ. ಆದರೆ ತೆರೆ ಮರೆಯಲ್ಲಿ ಎಲ್ಲಾ ತಯಾರಿ ನಡೆದಿತ್ತು.
ಜನಾರ್ದನ ರೆಡ್ಡಿ ಪುತ್ರ ಈ ಮೊದಲು, ತಮಗೆ ಜನರ ಸೇವೆ ಮಾಡ್ಬೇಕು ಎಂಬ ಬಯಕೆಯ ಜೊತೆಗೆ ಸಿನಿಮಾ ಹೀರೋ ಆಗಿ ಜನರಿಗೆ ಮನರಂಜನೆ ನೀಡಬೇಕು ಎನ್ನುವ ಆಸೆ ಇದೆ ಎಂದು ಮಾತ್ರ ಹೇಳಿ ಕೊಂಡಿದ್ದರು. ಪೊಲಿಟಿಕಲ್ ಸೈನ್ಸ್ ಓದುವುದರ ಜೊತೆಗೆ, ಸಿನಿಮಾಗೆ ಬೇಕಾದ ಕಲೆಗಳನ್ನೂ ಕೂಡ ಕೀರಿಟಿ ರೆಡ್ಡಿ ಕಲಿತು ಬಂದಿದ್ದಾರೆ.
ಹಾಗಿದ್ದರೆ ಕಿರೀಟಿ ರೆಡ್ಡಿ ಮೊದಲ ಸಿನಿಮಾ ಹೇಗೆ ಇರಲಿದೆ. ಅವರು ಯಾವ ರೀತಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಯಾರು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ.

ಸಿನಿಮಾಗಾಗಿ ಸಂಪೂರ್ಣ ತಯಾರಿ ಮಾಡಿ ಕೊಂಡ ಕಿರೀಟಿ ರೆಡ್ಡಿ!
ಜನಾರ್ದನ ರೆಡ್ಡಿ ಪುತ್ರ ಸಿನಿಮಾಗಳಲ್ಲಿ ಅಭಿನಯಿಸುವುದು ಅನುಮಾನ ಅವರು ರಾಜಕೀಯಕ್ಕೆ ಎಂಟ್ರಿ ಕೊಡ ಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಎಲ್ಲಾ ಊಹಾ ಪೋಹಗಳಿಗೂ ತೆರೆ ಬಿದ್ದಿದೆ. ಕಿರೀಟಿ ರೆಡ್ಡಿ ಈಗ ತಯಾರಿ ಮಾಡಿಕೊಂಡು ಚಿತ್ರ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಸದ್ಯದಲ್ಲಿಯೇ ಚಿತ್ರದ ಶೂಟಿಂಗ್ ಕೂಡ ಆರಂಭ ಆಗಲಿದೆ. ಚಿತ್ರ ರಂಗಕ್ಕೆ ಎಂಟ್ರಿ ಕೊಡುವ ಸಲುವಾಗಿ ಯುಕೆನಲ್ಲಿ ಕೀರಿಟಿ ರೆಡ್ಡಿ ಅಭಿನಯದವನ್ನು ಕಲಿತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಅವರು ಸಂದರ್ಶನ ಒಂದರಲ್ಲಿ ಹೇಳಿ ಕೊಂಡಿದ್ದಾರೆ.

ಸಿನಿಮಾ ಮಾಡಲು ಅಪ್ಪು ಸ್ಪೂರ್ತಿ: ಕಿರೀಟಿ ರೆಡ್ಡಿ!
ಅಷ್ಟಕ್ಕೂ ಜನಾರ್ದನ ರೆಡ್ಡಿ ಪುತ್ರನಿಗೆ ಸಿನಿಮಾ ಮಾಡುವ ಇಂಗಿತ ಮೊದಲಿನಿಂದಲು ಹುಟ್ಟಿದ್ದಲ್ಲವಂತೆ. ಅವರು ಸಿನಿಮಾ ರಂಗಕ್ಕೆ ಬರಲು ಕಾರಣ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್. ಒಮ್ಮೆ ಪುನೀತ್ ರಾಜ್ಕುಮಾರ್ ಅವರನ್ನು ಕಿರೀಟಿ ರೆಡ್ಡಿ ಭೇಟಿ ಮಾಡಿದ್ದರಂತೆ. ಆಗ ಅಪ್ಪು ಅವರ ಹೆಗಲ ಮೇಲೆ ಕೈ ಹಾಕಿ, ಒಂದಷ್ಟು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದ್ದಾರಂತೆ. ಸಿನಿಮಾ ಬಗ್ಗೆಯೂ ಮಾತನಾಡಿದ್ದರಂತೆ. ಆಗ ಅಪ್ಪು ಮಾತು ಕೇಳಿದ ಬಳಿಕ ಕಿರೀಟಿ ಅವರು ಅಪ್ಪು ಅಭಿನಯದ ಜಾಕಿ ಚಿತ್ರವನ್ನು ನೋಡಿದ್ದಾರೆ. ಜಾಕಿ ಚಿತ್ರ ನೋಡಿದ ಬಳಿಕ ಸಿನಿಮಾ ಮಾಡಲೇ ಬೇಕು ಎಂದು ಕಿರೀಟಿ ಅವರು ನಿರ್ಧರಿಸಿದರಂತೆ.

ಜನಾರ್ದನ ರೆಡ್ಡಿ ಪುತ್ರನ ಚಿತ್ರಕ್ಕೆ ರಾಧಕೃಷ್ಣ ನಿರ್ದೇಶಕ!
ಕನ್ನಡದಲ್ಲಿ 2016ರಲ್ಲಿ ತೆರೆ ಕಂಡ 'ಮಾಯಾ ಬಜಾರ್' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶಕ. ಮಾಯಾ ಬಜಾರ್ ಚಿತ್ರವನ್ನು ನೋಡಿ ಮನಸೋತ ಕಿರೀಟಿ ರೆಡ್ಡಿ, ತಮ್ಮ ಮೊದಲ ಚಿತ್ರಕ್ಕೆ ರಾಧಾ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರಂತೆ. ಚಿತ್ರದ ಕಥೆ ಯೂತ್ಫುಲ್ ಆಗಿ ಇರಲಿದೆಯಂತೆ. ಅಂದರೆ ಈ ಕಥೆಯನ್ನು ಯುವಕರಿಗೆ ಅರ್ಪಿಸಲಾಗುತ್ತದಂತೆ. ಚಿತ್ರಕ್ಕಾಗಿ ಅಭಿನಯದ ಜೊತಗೆ, ಡ್ಯಾನ್ಸ್, ಮಾರ್ಷಿಯಲ್ ಆರ್ಟ್, ಫೈಟ್ ಕೂಡ ಕಲಿತಿದ್ದಾರಂತೆ ಕಿರೀಟಿ. ಒಟ್ಟಾರೆ ಒಬ್ಬ ನಟನಾಗಿ ತೆರೆಯ ಮೇಲೆ ಬರಲು ಏನೆಲ್ಲಾ ಬೇಕೋ, ಎಲ್ಲಾ ತಯಾರಿ ಮಾಡಿ ಕೊಂಡಿದ್ದಾರಂತೆ.

ದೊಡ್ಡ ಬಜೆಟ್ನಲ್ಲಿ ಕನ್ನಡ, ತೆಲುಗಿನಲ್ಲಿ ಬರಲಿದೆ ಚಿತ್ರ!
ಈ ಚಿತ್ರಕ್ಕೆ 'ಈಗ' ಚಿತ್ರವನ್ನು ನಿರ್ಮಾಣ ಮಾಡಿದ ಅವರು ಬಂಡವಾಳ ಹೂಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಚಿತ್ರದ ರಿಲೀಸ್ ಆಗಲಿದೆ. ಹಾಗಾಗಿ ಎರಡು ಭಾಷೆಗಳಲ್ಲಿ ಒಟ್ಟಿಗೆ ಜನಾರ್ದನ ರೆಡ್ಡಿ ಪುತ್ರ ಲಾಂಚ್ ಆಗುತ್ತಿದ್ದಾರೆ. ಇನ್ನು ಚಿತ್ರದ ಬಜೆಟ್ ಕೂಡ ಅಷ್ಟೇ ಅದ್ದೂರಿಯಾಗಿ ಇರಲಿದೆ. ಇದು ಸದ್ಯಕ್ಕೆ ಕಿರೀಟಿ ರೆಡ್ಡಿ ಅವರ ಚಿತ್ರದ ಬಗ್ಗೆ ಅವರು ಹಂಚಿಕೊಮಡಿರುವ ಮಾಹಿತಿ. ಆದರೆ ಚಿತ್ರ ತಾರ ಬಳಗದಲ್ಲಿ ಯಾರು ಇರಲಿದ್ದಾರೆ ಎನ್ನುವ ಬಗ್ಗೆ ಮತ್ತಷ್ಟು ಮಾಹಿತಿ ಹೊರ ಬೀಳಬೇಕಿದೆ.


Click it and Unblock the Notifications











