ಜಯಣ್ಣ ನಿರ್ಮಾಣದಲ್ಲಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಶ್ರೀಮುರಳಿ
'ಉಗ್ರಂ' ಯಶಸ್ಸಿನ ನಂತರ ನಟ ಶ್ರೀಮುರಳಿ ಅವರು 'ರಥಾವರ' ಚಿತ್ರದ ಯಶಸ್ಸಿನಲ್ಲಿ ಬೀಗುತ್ತಿದ್ದಾರೆ. ಸದ್ಯಕ್ಕೆ 'ರಥಾವರ' ಕೂಡ ಕೈ ಹಿಡಿದು ನಡೆಸುತ್ತಿರುವುದರಿಂದ ನಟ ಶ್ರೀಮುರಳಿ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಉತ್ತುಂಗ ಸ್ಥಾನದಲ್ಲಿದ್ದಾರೆ.
ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ 'ರಥಾವರ' ಚಿತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ಜಯಣ್ಣ ಅವರು 'ರಥಾವರ' ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು ಎರಡು ವಾರಗಳಲ್ಲಿ ಸುಮಾರು 10 ಕೋಟಿ ಗಳಿಸಿದೆ' ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]
ಇದೀಗ ನಟ ಶ್ರೀಮುರಳಿ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದಿದ್ದರೂ ಕೂಡ ಸಿಕ್ಕಿದ್ದನ್ನು ಕೈಗೆತ್ತಿಕೊಳ್ಳದೇ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ನಟ ಮುಂದಿನ ಚಿತ್ರವನ್ನು ಜಯಣ್ಣ-ಭೋಗೇಂದ್ರ ಅವರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಒಪ್ಪಿಕೊಂಡಿದ್ದು, ವಿವರಗಳು ಡಿಸೆಂಬರ್ 17 ರಂದು ನಟ ಮುರಳಿ ಅವರ ಹುಟ್ಟುಹಬ್ಬದ ದಿನದಂದು ಗೊತ್ತಾಗಲಿದೆ.
ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ, 'ಉಗ್ರಂ' ಸಿನಿಮಾ ಮಾಡಿದ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿರುವ ಅನುಭವಿ ನಾರ್ಥನ್ ಅವರು ಈ ಮೂಲಕ ನಿರ್ದೇಶಕನ ಪಟ್ಟ ಹೊತ್ತುಕೊಳ್ಳುತ್ತಿದ್ದಾರೆ. ಅಲ್ಲದೇ ನಾರ್ಥನ್ ಅವರು ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರಕ್ಕೂ ಗೀತೆರಚನೆ ಮಾಡಿದ್ದಾರೆ.[ಮಿಸ್ ಮಾಡ್ಬೇಡಿ: 'ರಥಾವರ' ಟ್ರೈಲರ್ ನ 10 ಕುತೂಹಲ ದೃಶ್ಯಗಳು]
ಈಗಾಗಲೇ ಹೊಸ ಪ್ರಾಜೆಕ್ಟ್ ನ ಒಂದು ಸಾಲಿನ ಕಥೆ ಸಿದ್ಧವಾಗಿದ್ದು ಜಯಣ್ಣ ಅವರು ಹೇಳುವ ಪ್ರಕಾರ 'ಮುಂದಿನ ಎರಡು ತಿಂಗಳುಗಳಲ್ಲಿ ಕಥೆ ಸಿದ್ದವಾಗುತ್ತೆ, ಜೊತೆ ಜೊತೆ ತಾರಾಗಣದ ಆಯ್ಕೆ ಕೂಡ ನಡೆಯುತ್ತದೆ' ಎನ್ನುತ್ತಾರೆ.
ಸದ್ಯಕ್ಕೆ ನಟ ಶ್ರೀಮುರಳಿ ಅವರು 'ರಥಾವರ' ಪ್ರಚಾರ ಕಾರ್ಯಕ್ಕೆಂದು ತುಮಕೂರು, ಚಿತ್ರದುರ್ಗ ಮುಂತಾದೆಡೆ ಪ್ರವಾಸ ಕೈಗೊಂಡಿದ್ದಾರೆ.


Click it and Unblock the Notifications













