'ಸಂಗೊಳ್ಳಿರಾಯಣ್ಣ' ನಂತರ ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಬಹುಭಾಷಾ ನಟಿ ಜಯಪ್ರದಾ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ತೆರೆಕಂಡು 6 ವರ್ಷ ಆಗಿದೆ. ಇಲ್ಲಿಯವರೆಗೂ ಜಯಪ್ರದಾ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ, ಆರು ವರ್ಷದ ಬಳಿಕ ಕನ್ನಡಕ್ಕೆ ಮರಳಿದ್ದಾರೆ.
ಹೌದು, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರುವ ಈ ಭರ್ಜರಿ ಬಜೆಟ್ಟಿನ 'ಸುವರ್ಣ ಸುಂದರಿ' ಚಿತ್ರದ ಮೂಲಕ ಬಹುಭಾಷಾ ತಾರೆ ಜಯಪ್ರದಾ ಕನ್ನಡಕ್ಕೆ ಮತ್ತೆ ಮರಳಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸುವ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವೂ ಇದೆ.

'ಬಾಹುಬಲಿ' ಚಿತ್ರದಂತೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.
ಈಗಾಗಲೇ ಈ ಚಿತ್ರದ ಮೋಷನ್ ಪೋಸ್ಟರ್ ನ್ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ. ಶಿವಣ್ಣ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್ 'ಸುವರ್ಣ ಸುಂದರಿ'ಯ ಅಸಲೀ ಅದ್ದೂರಿತನವನ್ನು ಧ್ವನಿಸುವಂತಿದೆ. ಟೀಸರ್ ಮತ್ತು ಟ್ರೈಲರ್ ಗಳನ್ನು ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅದೂ ಕೂಡಾ ಬಿಡುಗಡೆಯಾಗಲಿದೆ.

ಎವರ್ ಗ್ರೀನ್ ಸುಂದರಿಯಾಗಿರುವ ಜಯಪ್ರದಾ ಈ ಚಿತ್ರದ ಮುಖ್ಯ ಆಕರ್ಷಣೆ. ಈ ಚಿತ್ರಕ್ಕೆ ತೆಲುಗು ಸಿನಿಮಾಗಳಿಗೆ ಕಥೆಯ ರಚನೆಯಲ್ಲಿ ಅನುಭವ ಪಡೆದಿರುವ ಎಂ ಎಸ್ ಎನ್ ಸೂರ್ಯ ಕಥೆ ಬರೆದು ನಿರ್ದೇಶಿಸಿದ್ದಾರೆ. ಸರಿಸುಮಾರು ನಲವತ್ತು ಭಾಗದಷ್ಟು ಅದ್ದೂರಿ ಫ್ಲ್ಯಾಶ್ಬ್ಯಾಕ್ನೊಂದಿಗೆ ಅದ್ಭುತ ಗ್ರಾಫಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ಚಿತ್ರದಲ್ಲಿ ರಾಮ್, ಸಾಕ್ಷಿ, ಪೂರ್ಣ, ಡಾ ಜಯಪ್ರದಾ, ಮಹಮ್ಮದ್ ಖಾನ್, ಸಾಯಿಕುಮಾರ್, ಅವಿನಾಶ್ ಮತ್ತಿತರರು ನಟಿಸಿದ್ದಾರೆ. ಚಿತ್ರಕ್ಕೆ ಸಾಯಿ ಕಾರ್ತಿಕ್ ಅವರ ಸಂಗೀತ, ಯಲ್ಲುಮಹಂತಿ ಈಶ್ವರ್ ಅವರ ಛಾಯಾಗ್ರಹಣ, ಎಸ್ ಟೀಮ್ ನಿರ್ಮಾಣ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ. ಎಂ.ಎಲ್ ಲಕ್ಷ್ಮಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.


Click it and Unblock the Notifications











