ಪ್ರತಿ 6 ತಿಂಗಳಿಗೆ ಟ್ರೆಂಡ್ ಬದಲಾಗ್ತಿದೆ.. ರಿಷಬ್ ಶೆಟ್ಟಿ ನಟನೆಯ 'ಬೆಲ್ಬಾಟಂ-2' ಬಗ್ಗೆ ಜಯತೀರ್ಥ ಮಾತು
'ಕಾಂತಾರ' ಸಿನಿಮಾ ಮಾಡಿ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಆ ಬಳಿಕ 'ಕಾಂತಾರ' ಪ್ರೀಕ್ವೆಲ್ಗೆ ಕೈಹಾಕಿದ್ದರು. ಈ ನಡುವೆ ಅದಕ್ಕೂ ಮುನ್ನ ಒಪ್ಪಿಕೊಂಡಿದ್ದ ಸಿನಿಮಾಗಳ ಕತೆ ಏನಾಯ್ತು? ಎಂದು ಕೆಲವರು ಕೇಳುತ್ತಿದ್ದಾರೆ. ಮುಖ್ಯವಾಗಿ 'ಬೆಲ್ಬಾಟಂ'-2 ಏನಾಯ್ತು? ಎನ್ನುವುದು ಹಲವರ ಪ್ರಶ್ನೆಯಾಗಿದೆ.
ರಿಷಬ್ ಶೆಟ್ಟಿ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾದ ಸಿನಿಮಾ 'ಬೆಲ್ಬಾಟಂ'. ಜಯತೀರ್ಥ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಿಷಬ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. 'ಕಾಂತಾರ' ಸಕ್ಸಸ್ ಆಗುವುದಕ್ಕೂ ಮುನ್ನ ರಿಷಬ್ ನಟನೆಯ 'ಬೆಲ್ಬಾಟಂ' ಹಾಗೂ 'ಹೀರೊ' ಸಿನಿಮಾ ತೆಲುಗಿಗೆ ಡಬ್ ಆಗಿ ಅಲ್ಲಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು.

'ಕಾಂತಾರ' ಸಿನಿಮಾ ಮಾಡಿ ರಿಷಬ್ ಶೆಟ್ಟಿ ಈಗ ಅಕ್ಕ ಪಕ್ಕದ ಇಂಡಸ್ಟ್ರಿ ಮಂದಿಗೂ ಪರಿಚಿತರಾಗಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ 'ಕಾಂತಾರ' ಪ್ರೀಕ್ವೆಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಟೀಸರ್ ರಿಲೀಸ್ ಮಾಡಿ ಮುಹೂರ್ತ ಕೂಡ ನೆರವೇರಿಸಲಾಗಿದೆ. ಜನವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ರಿಷಬ್ ಶೆಟ್ಟಿ ಈ ಬಾರಿ ಕೂಡ ಸಿನಿಮಾ ನಿರ್ದೇಶಿಸಿ, ನಟಿಸುತ್ತಿದ್ದಾರೆ. 'ಕಾಂತಾರ' ಚಾಪ್ಟರ್-1 ಬಳಿಕ ರಿಷಬ್ ಈಗಾಗಲೇ ಒಪ್ಪಿಕೊಂಡು ಪಕ್ಕಕ್ಕಿಟ್ಟಿರುವ ಸಿನಿಮಾಗಳನ್ನು ಮಾಡುತ್ತರಾ? ಇಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಾರಾ? ಎನ್ನುವ ಅನುಮಾನ ಮೂಡುವುದು ಸಹಜ. ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಚಿತ್ರಕ್ಕೂ ರಿಷಬ್ ಆಯ್ಕೆ ಆಗಿದ್ದರು. 'ಕಾಂತಾರ' ಬಳಿಕ ಆ ಸಿನಿಮಾದಿಂದ ಹೊರ ಬಂದಿದ್ದರು.
'ಬೆಲ್ಬಾಟಂ'-2 ಸಿನಿಮಾ ಮುಹೂರ್ತ ಕೂಡ ನಡೆದಿತ್ತು. ಆದರೆ ಚಿತ್ರೀಕರಣ ಆರಂಭವಾಗುವ ಮುನ್ನ 'ಕಾಂತಾರ' ಸಿನಿಮಾ ಬಂದು ಬ್ಲಾಕ್ಬಸ್ಟರ್ ಹಿಟ್ ಆಗಿಬಿಡ್ತು. 'ಬೆಲ್ಬಾಟಂ'-2 ಸಿನಿಮಾ ಬಗ್ಗೆ ಇದೀಗ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ. ನಮ್ಮ KFI ಯೂಟ್ಯೂಬ್ ಸಂದರ್ಶನದದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

"ಸದ್ಯಕ್ಕೆ ಕಾಂತಾರ-1 ಸಿನಿಮಾ ಮುಗಿಯಬೇಕು. ಆ ಸಿನಿಮಾ ಮುಗಿದ ಬಳಿಕ ರಿಷಬ್ ಶೆಟ್ಟಿ ಬರ್ತೀನಿ ಎಂದು ಹೇಳಿದ್ದಾರೆ. ಅವರು ಬಂದ ಮೇಲೆ ಚರ್ಚೆ ಶುರುವಾಗಿ ಸಿನಿಮಾ ಮಾಡಬೇಕು. ಡೈಲಾಗ್ಸ್ ಸಮೇತ 'ಬೆಲ್ಬಾಟಂ'-2 ಸಿನಿಮಾ ಸ್ಕ್ರಿಪ್ಟ್ ಸಿದ್ಧವಾಗಿದೆ. ಆದರೆ ಯಾವಾಗ ಈ ಸಿನಿಮಾ ಶುರುವಾಗುತ್ತೋ ಆವಾಗ ಆ ಕಾಲಕ್ಕೆ, ಆ ಟ್ರೆಂಡ್ಗೆ ಸ್ಕ್ರೀನ್ಪ್ಲೇ ನಾನು ಒಮ್ಮೆ ಚೆಕ್ ಮಾಡಬೇಕು. ಯಾಕಂದರೆ ಪ್ರತಿ 6 ತಿಂಗಳಿಗೆ ಟ್ರೆಂಡ್ ಬದಲಾಗುತ್ತದೆ. ಹಾಗಾಗಿ ಒಮ್ಮೆ ನೋಡಿ ಸರಿ ಮಾಡಿಕೊಂಡು ಸಿನಿಮಾ ಮಾಡಬೇಕು" ಎಂದಿದ್ದಾರೆ.
ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ರಿಷಬ್ ಶೆಟ್ಟಿ ಬಳಿಕ 'ರಿಕ್ಕಿ' ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. 'ಕಿರಿಕ್ ಪಾರ್ಟಿ' ರೀತಿಯ ಬ್ಲಾಕ್ಬಸ್ಟರ್ ಹಿಟ್ ಕೊಟ್ಟು ಗೆದ್ದರು. 'ಬೆಲ್ಬಾಟಂ' ಚಿತ್ರದಲ್ಲಿ ನಟಿಸಿ ಹೀರೋ ಆಗಿದ್ದರು. ಬಳಿಕ 'ಹೀರೊ', 'ಗರುಡ ಗಮನ ವೃಷಭ ವಾಹನ' ಹಾಗೂ 'ಹರಿಕತೆ ಅಲ್ಲ ಗಿರಿಕತೆ' ಸಿನಿಮಾಗಳಲ್ಲಿ ಮಿಂಚಿದರು. ನಡುವೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದರು.
ಕೋವಿಡ್ ಸಮಯದಲ್ಲಿ 'ಕಾಂತಾರ' ಸಿನಿಮಾ ಕೈಗೆತ್ತಿಕೊಂಡಿದ್ದರು. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡಿತ್ತು. ಕೇವಲ 15 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬರೋಬ್ಬರಿ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.


Click it and Unblock the Notifications











