ರೋಹಿಣಿ ಸಿಂಧೂರಿ ಕುರಿತ ಸಿನಿಮಾಕ್ಕೆ ವಿರುದ್ಧ ಡಿ.ಕೆ.ರವಿ ಸಿನಿಮಾ: ಸಾ.ರಾ.ಮಹೇಶ್ ಘೋಷಣೆ
ರಾಜಕಾರಣಿಗಳು ಸಿನಿಮಾ ನಿರ್ಮಾಣ ಮಾಡುವುದು, ನಟರು ರಾಜಕಾರಣಿಗಳಾಗುವುದು ಹೊಸದೇನೂ ಅಲ್ಲ. ಆದರೆ ಸಿನಿಮಾ ಮೂಲಕವೇ ರಾಜಕಾರಣ ಮಾಡುವ ಹೊಸ ಪದ್ಧತಿ ಇತ್ತೀಚೆಗೆ ಆರಂಭವಾಗಿದೆ. ಕರ್ನಾಟಕಕ್ಕೂ ಅದು ನಿಧಾನಕ್ಕೆ ಕಾಲಿಡುತ್ತಿದೆ.
Recommended Video
ತಾಜಾ ಉದಾಹರಣೆಯೆಂದರೆ ಎರಡು ದಿನಗಳ ಹಿಂದಷ್ಟೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜೀವನ ಕುರಿತು 'ಭಾರತ ಸಿಂಧೂರಿ' ಹೆಸರಿನ ಸಿನಿಮಾ ಮಾಡುವುದಾಗಿ ತಂಡವೊಂದು ಘೋಷಿಸಿದೆ. ಅದರ ಬೆನ್ನಲ್ಲೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಾವು ಸಹ ಡಿ.ಕೆ.ರವಿ ಕುರಿತಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
ಮಾಧ್ಯಮದೊಟ್ಟಿಗೆ ಮಾತನಾಡಿರುವ ಸಾ.ರಾ.ಮಹೇಶ್, 'ಆಂಧ್ರಪ್ರದೇಶ ಮೂಲದ ಐಎಎಸ್ ಅಧಿಕಾರಿ ಬಗ್ಗೆ ಸಿನಿಮಾ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಂದ ಗೊತ್ತಾಗಿದೆ. ಆ ಸಿನಿಮಾ ಬಿಡುಗಡೆ ಆಗಲಿ ನಂತರ ನಾವೂ ಸಿನಿಮಾ ನಿರ್ಮಾಣ ಮಾಡುತ್ತೇವೆ. ಬಡ ರೈತನ ಮಗನೊಬ್ಬ ಕಷ್ಟಪಟ್ಟು ಐಎಎಸ್ ಅಧಿಕಾರಿ ಆದದ್ದು, ಆ ನಂತರ ಅವರ ಜೀವನ ಹೇಗೆ ದುರಂತ ಅಂತ್ಯ ಕಂಡಿತು ಎಂದು ಸಿಬಿಐ ವರದಿ ಆಧರಿಸಿ ಸಿನಿಮಾ ಮಾಡುತ್ತೇವೆ' ಎಂದಿದ್ದಾರೆ ಸಾ.ರಾ.ಮಹೇಶ್.

ಡಿ.ಕೆ.ರವಿ ಬಗ್ಗೆ ಸಾ.ರಾ.ಮಹೇಶ್ ಸಿನಿಮಾ
ಸಾ.ರಾ.ಮಹೇಶ್ ಯಾರ ಬಗ್ಗೆ ಸಿನಿಮಾ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಹಾಗೂ ಯಾಕಾಗಿ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟ. ಸಾ.ರಾ.ಮಹೇಶ್ ನಿರ್ಮಾಣ ಮಾಡಲು ಹೊರಟಿರುವುದು ದಿವಂಗತ ಡಿ.ಕೆ.ರವಿ ಬಗ್ಗೆ. ಡಿ.ಕೆ.ರವಿ ಸಾವು ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಆಗ ಮಂಡ್ಯ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ಅವರನ್ನು ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಡಿ.ಕೆ.ರವಿ, ರೋಹಿಣಿ ಸಿಂಧೂರಿ ನಡುವೆ ನಡೆದಿದ್ದ ವಾಟ್ಸ್ಆಪ್ ಸಂದೇಶಗಳು ಹೊರಬಿದ್ದಿದ್ದವು.

ರೋಹಿಣಿ ಸಿಂಧೂರಿ v/s ಪ್ರತಾಪ್ ಸಿಂಹ, ಸಾ.ರಾ.ಮಹೇಶ್ etc
ಇದೀಗ ಮೈಸೂರಿನಲ್ಲಿ ರೋಹಿಣಿ ಹಾಗೂ ಅಲ್ಲಿನ ಕೆಲವು ಪ್ರಮುಖ ಜನಪ್ರತಿನಿಧಿಗಳ ನಡುವೆ ದೊಡ್ಡ ಜಟಾಪಟಿಯೇ ನಡೆದು ಕೊನೆಗೆ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದ್ದಾರೆ. ಅದರಲ್ಲೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅಂತೂ ರೋಹಿಣಿ ವಿರುದ್ಧ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದರು. ಇದೀಗ ವರ್ಗಾವಣೆ ಆಗಿರುವ ರೋಹಿಣಿ ಸಿಂಧೂರಿ ಸಹ ಸಾ.ರಾ.ಮಹೇಶ್ ವಿರುದ್ಧ ಭೂ ಒತ್ತುವರಿ, ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಾಣದ ಆರೋಪ ಹೊರಿಸಿದ್ದಾರೆ.

ರೋಹಿಣಿ ಸಿಂಧೂರಿಗೆ ವಿರುದ್ಧವಾಗಿ ಡಿ.ಕೆ.ರವಿ ಸಿನಿಮಾ
ತಮ್ಮ ಮೇಲೆ ಆರೋಪ ಮಾಡಿರುವ ರೋಹಿಣಿ ಸಿಂಧೂರಿ ಮೇಲೆ ಸಿಟ್ಟಾಗಿರುವ ಸಾ.ರಾ.ಮಹೇಶ್, ಅವರಿಗೆ ವಿರುದ್ಧವಾಗಿ ಡಿ.ಕೆ.ರವಿ ಕುರಿತು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಡಿ.ಕೆ.ರವಿ ಜೀವನದ ಕುರಿತು ಸಿನಿಮಾ ಮಾಡಿ ರೋಹಿಣಿ ಅವರನ್ನು ನೆಗೆಟಿವ್ ಶೇಡ್ನಲ್ಲಿ ಬಿಂಬಿಸಲು ಯೋಜಿಸಿದಂತಿದೆ ಸಾ.ರಾ.ಮಹೇಶ್. ಇದನ್ನು 'ಸಿನಿಮಾ ರಾಜಕೀಯ' ಎಂದೆನ್ನದೇ ಇನ್ನೇನೆನ್ನಲು ಸಾಧ್ಯ?

ರೋಹಿಣಿ ಸಿಂಧೂರಿ ಆಗಿ ಅಕ್ಷತಾ ಪಾಂಡವಪುರ
'ಭಾರತ ಸಿಂಧೂರಿ' ಸಿನಿಮಾ ಮಾಡುವುದಾಗಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಮ್ಸ್ ಸಂಸ್ಥೆಯು ಚಿತ್ರ ನಿರ್ಮಿಸಲು ಮುಂದಾಗಿದೆ. ರೋಹಿಣಿ ಸಿಂಧೂರಿ ಪಾತ್ರದಲ್ಲಿ ನಟಿ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಚಿತ್ರಕ್ಕೆ ಸಾಹಿತಿ, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಡಿ.ಕೆ.ರವಿ ಜೀವನಕ್ಕೆ ಹೋಲುವಂತಿದ್ದ 'ಚಂಬಲ್' ಹೆಸರಿನ ಸಿನಿಮಾ ಈಗಾಗಲೇ ಕನ್ನಡದಲ್ಲಿ ಬಂದಿದೆ.


Click it and Unblock the Notifications











