ಜೆಟ್ಲ್ಯಾಗ್ ಪಬ್ 'ಕಾಟೇರ' ಸಕ್ಸಸ್ ಪಾರ್ಟಿ ಪ್ರಕರಣದಲ್ಲಿ ದರ್ಶನ್ ಸೇರಿ 8 ಜನಕ್ಕೆ ರಿಲೀಫ್
'ಕಾಟೇರ' ಸಿನಿಮಾ ಸಕ್ಸಸ್ ಹಿನ್ನೆಲೆ ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಟ ದರ್ಶನ್ ಸೇರಿ 8 ಜನ ಬೆಳಗಿನ ಜಾವದವರೆಗೂ ಪಾರ್ಟಿಯಲ್ಲಿ ಇದ್ದರು. ಅವರಿಗೆಲ್ಲಾ ಮದ್ಯ ಸರಬರಾಜು ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಜೆಟ್ಲ್ಯಾಗ್ ಪಬ್ ಮಾಲೀಕ, ಮ್ಯಾನೇಜರ್ ಮೇಲೆ ಕೇಸ್ ದಾಖಲಾಗಿತ್ತು.
ಪ್ರಕರಣದ ಸಂಬಂಧ ದರ್ಶನ್, ರಾಕ್ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಧನಂಜಯ್, ನೀನಾಸಂ ಸತೀಶ್, ವಿ. ಹರಿಕೃಷ್ಣ, ಚಿಕ್ಕಣ್ಣ, ತರುಣ್ ಸುಧೀರ್ರನ್ನು ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಎಲ್ಲರೂ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದರು. ಆದರ ತಮ್ಮ ಮೇಲಿನ ಆರೋಪ ಎಲ್ಲರೂ ಅಲ್ಲಗಳೆದಿದ್ದರು. ಅಂದು "ಊಟ ಮಾಡಿದ್ದೇವೆ ಅಷ್ಟೆ, ಪಾರ್ಟಿ ಮಾಡಿಲ್ಲ" ಎಂದು ಹೇಳಿದ್ದರು.

8 ಜನರ ಹೇಳಿಕೆಯನ್ನು ಪರಿಗಣಿಸಿ ಇದು ಕೇವಲ ಊಟದ ಪಾರ್ಟಿ ಅಷ್ಟೆ. ಓವರ್ ನೈಟ್ ಪಾರ್ಟಿ ಆಗಿರಲಿಲ್ಲ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ. ಸದ್ಯ ಇದರಿಂದ ಎಲ್ಲರಿಗೂ ರಿಲೀಫ್ ಸಿಕ್ಕಂತಾಗಿದೆ. ಈಗಾಗಲೇ ಸುಬ್ರಹ್ಮಣ್ಯನಗರ ಪೊಲೀಸರಿಂದ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ.
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆಯಾಗಿ ಸಕ್ಸಸ್ ಕಂಡಿತ್ತು. ಜನವರಿ 3ರಂದು ನಗರದ ಒರಾಯನ್ ಮಾಲ್ನಲ್ಲಿ ಚಿತ್ರದ ಸೆಲೆಬ್ರೆಟಿ ಶೋ ಏರ್ಪಡಿಸಲಾಗಿತ್ತು. 11.30ರ ವೇಳೆಗೆ ಶೋ ಮುಗಿದಿತ್ತು. ಉಪೇಂದ್ರ, ಧನಂಜಯ್, ನೀನಾಸಂ ಸತೀಶ್ ಸೇರಿದಂತೆ ಸಾಕಷ್ಟು ನಟ- ನಟಿಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಬಳಿಕ ಅಲ್ಲೇ ಪಕ್ಕದಲ್ಲಿ ಇದ್ದ ಜೆಟ್ಲ್ಯಾಗ್ ಪಬ್ನಲ್ಲಿ ಚಿತ್ರತಂಡ ಕೇಕ್ ಕತ್ತರಿಸಿ 'ಕಾಟೇರ' ಸಕ್ಸಸ್ ಸಂಭ್ರಮಿಸಿತ್ತು.
ಕೇಕ್ ಕತ್ತರಿಸಿದ ಬಳಿಕ ಬೆಳಗಿನ ಜಾವ 3 ಗಂಟೆಯವರೆಗೂ ಪಾರ್ಟಿ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಅನ್ವಯ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು. ಒಂದು ಗಂಟೆ ಒಳಗೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು. ಆದರೆ ಅಂದು ಅವಧಿ ಮೀರಿ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ದೂರು ದಾಖಲಾಗುತ್ತಿದ್ದಂತೆ ಪಾರ್ಟಿಯಲ್ಲಿ ಇದ್ದವರಿಗೆ ನೋಟಿಸ್ ನೀಡಲಾಗಿತ್ತು. ಅಷ್ಟರಲ್ಲಿ ದರ್ಶನ್, ತರುಣ್ ಸುಧೀರ್ 'ಕಾಟೇರ' ಚಿತ್ರದ ದುಬೈ ಪ್ರೀಮಿಯರ್ ಶೋಗಾಗಿ ಅಲ್ಲಿಗೆ ತೆರಳಿದ್ದರು.

ಜನವರಿ 12ರಂದು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ 8 ಜನ ಹಾಜರಾಗಿ ಹೇಳಿಕೆ ನೀಡಿದ್ದರು. ಇದೀಗ ಅದೇ ಹೇಳಿಕೆ ಆಧರಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಚಿತ್ರದ ಕಥೆಯನ್ನು ಕಟ್ಟಿಕೊಡಲಾಗಿತ್ತು.
ಸದ್ಯ ನಟ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಕಾಶ್ ವೀರ್ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಶುರುವಾಗಿದೆ. ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ.


Click it and Unblock the Notifications











