ತೆರೆಗೆ ಬಂದ 101% ಕಾಮಿಡಿ ‘ಜಿತೇಂದ್ರ’
ಉಪೇಂದ್ರನ 'ನಾನು"ಗೆ ಬುದ್ಧಿ ಹೇಳಲು ಈ ಶುಕ್ರವಾರಕ್ಕೆ ಒಂದು ದಿನ ಮೊದಲು ಬಂದವನೇ 'ಜಿತೇಂದ್ರ". ಆತ ನಿರುದ್ಯೋಗಿ, ಆದರೂ ಹೊತ್ತ ಆಸೆಗಳೋ ನೂರಾರು. ಉಪೇಂದ್ರ ಚಿತ್ರದ ನಾಯಕನಂತೆ ತಾನೂ ಪ್ರಯತ್ನಿಸಿದರೆ ಏನಾದರೂ ಸಿಕ್ಕರೂ ಸಿಗಬಹುದು ಎಂಬ ದೊಡ್ಡ ಕಲ್ಪನೆ.
ಆದರೆ, ಈ ಸಮಾಜದಲ್ಲಿ ಸಿಗುವ ಪ್ರತಿಫಲ ಬರೀ ಒದೆ. ಹಿರೋ ಆಗಿಯೂ ಸಕತ್ತಾಗಿ ಚಚ್ಚಿಸಿಕೊಳ್ಳುವ ಜೀರೋ. ಸಮಾಜದಲ್ಲಿರೋರೆಲ್ಲಾ ಪೆದ್ದರಲ್ಲ, ದಡ್ಡರಲ್ಲ. ನಾನು ಎನ್ನೋದು ಬಿಟ್ಟು, ನಾವು ಎಂದಾಗ ಮಾತ್ರ ಪ್ರತಿಯಾಬ್ಬರ ಪ್ರಯತ್ನಕ್ಕೂ ಬೆಲೆ ಬರೋದು ಎನ್ನುವ ತತ್ವ. ಒಟ್ಟಿನಲ್ಲಿ ಉಪೇಂದ್ರನ ವಧಿಸುವ ಜಿತೇಂದ್ರ 101% ಕಾಮಿಡಿ ಒದಗಿಸಲು (ನಿರ್ಮಾಪಕರು ನೀಡಿರುವ ಜಾಹೀರಾತಿನ ರೀತ್ಯ) ರಾಜ್ಯಾದ್ಯಂತ ಚಿತ್ರಮಂದಿರ ಹೊಕ್ಕಿದ್ದಾನೆ.
ಗಲಾಟೆ ಅಳಿಯಂದಿರು ಖ್ಯಾತಿಯ ಕುಮಾರ ಸ್ವಾಮಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಕೇವಲ ಮನರಂಜನೆಗಾಗಿ ಮಾತ್ರ ಎಂಬ ಕ್ಲಾರಿಫಿಕೇಷನನ್ನೂ ನೀಡಿದ್ದಾರೆ. ಉಪೇಂದ್ರನ 'ನಾನು" ಪಾತ್ರಕ್ಕೆ ಸಂಪೂರ್ಣ ಉಲ್ಟಾ ಪಾತ್ರದಲ್ಲಿ 'ಜಿತೇಂದ್ರ" ನಾಗಿ ಜಗ್ಗೇಶ್ ನಟಿಸಿದ್ದಾರೆ.
ನಿರ್ದೇಶನ ವಿಶ್ವನಾಥ್, ಛಾಯಾಗ್ರಹಣ ರಾಜೇಂದ್ರ, ಸಂಗೀತ ದೇವಾ. ಜಗ್ಗೇಶ್ ಜತೆ ತಾರಾಬಳಗದಲ್ಲಿ ಶಿಲ್ಪಿ, ರಮೇಶ್ಭಟ್, ಮಾಲತಿ ಸರೋಜ, ಪದ್ಮಾ ವಾಸಂತಿ, ದೊಂಬರಕೃಷ್ಣ ಸುರೇಶ್, ವೆಂಕಟೇಶ್ ಪ್ರಸಾದ್, ಎಂ.ಎನ್. ಸುರೇಶ್, ಗುಬ್ಬಿ ನಟರಾಜ್ ಮೊದಲಾದವರಿದ್ದಾರೆ.
ಉಪೇಂದ್ರನಿಗೆ ಬುದ್ಧಿ ಹೇಳಲು ಬಂದಿರುವ ಜಿತೇಂದ್ರನ ನೋಡಲು ಚಿತ್ರಮಂದಿರಕ್ಕೆ ಬರುತ್ತಿರುವ ಅರ್ಧದಷ್ಟು ಮಂದಿ ಇಂಟರ್ವಲ್ಗೇ ಎದ್ದು ಕಾಲಿಗೆ ಬುದ್ಧಿ ಹೇಳ್ತಿದ್ದಾರೆ ಅನ್ನೋದು ತಾಜಾ ಸುದ್ದಿ.


Click it and Unblock the Notifications