ಕೋವಿಡ್ ಸಂಕಷ್ಟ: ಜೆಕೆ 'ಐರಾವನ್' ಚಿತ್ರತಂಡದಿಂದ ಆಕ್ಸಿಜನ್ ಆಂಬುಲೆನ್ಸ್ ನೆರವು
ಮಾರಕ ಕೊರೊನಾ ವೈರಸ್ಗೆ ಇಡೀ ದೇಶವೆ ತತ್ತರಿಸಿ ಹೋಗಿದೆ. ಸೋಂಕಿತರು ಆಕ್ಸಿಜನ್, ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಮಂದಿ ನೆರವು ನೀಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಸಿನಿ ಸೆಲೆಬ್ರಿಟಿಗಳು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲೂ ಅನೇಕ ಮಂದಿ ಕೊರೊನಾ ಸಂಕಷ್ಟಕ್ಕೆ ನೆರವಾಗಿದ್ದಾರೆ. ಇದೀಗ ಸ್ಯಾಂಡಲ್ವುಡ್ನ ಐರಾವನ್ ತಂಡ ಕೂಡ ಸಹಾಯಕ್ಕೆ ನಿಂತಿದೆ. ನಟ ಜೆಕೆ ಮತ್ತು ಅದ್ವಿತಿ ಶೆಟ್ಟಿ ನಟನೆಯ ಐರಾವನ್ ತಂಡ ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಅಕ್ಸಿಜನ್ ಸಹಿತ ಅಂಬುಲೆನ್ಸ್ ನೀಡಿದ್ದಾರೆ.
ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಐರಾವನ್ ಚಿತ್ರತಂಡ ಸೇವೆಗೆ ಇಳಿದಿದೆ. ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್ ಮತ್ತು ಚಿತ್ರ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್ ವಾಹನವನ್ನು ಭಾನುವಾರ ಬ್ಯಾಟರಾಯನಪುರ ವ್ಯಾಪ್ತಿಗೆ ನೀಡಿದ್ದಾರೆ.

10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಮತ್ತು ಔಷಧಿಗಳನ್ನೂ ವಿತರಣೆ ಮಾಡಿದ್ದಾರೆ. 'ಇಂಥ ಕಷ್ಟದ ಸಮಯದಲ್ಲಿ ಸಮಾಜಕ್ಕೆ ನಾವು ಮಾಡಬೇಕಾದ ಜವಾಬ್ದಾರಿ ಇದು. ಎಲ್ಲೆಡೆ ಆಂಬುಲೆನ್ಸ್ ಕೊರತೆ ಕಾಡುತ್ತಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು ಬ್ಯಾಟರಾಯನಪುರ ವ್ಯಾಪ್ತಿಗೆ ಆಕ್ಸಿಜನ್ ಸಹಿತ ಆಂಬುಲೆನ್ಸ್ ನೀಡಿದ್ದೇವೆ' ಎಂದು ನಿರ್ಮಾಪಕ ನಿರಂತರ ಗಣೇಶ್ ಹೇಳಿದ್ದಾರೆ.
ಕೋವಿಡ್ ಮೆಡಿಕಲ್ ಕಿಟ್ ಕೂಡ ವಿತರಣೆ ಮಾಡಿದ್ದು, ಸೋಂಕಿನ ಲಕ್ಷಣ ಕಾಣುತ್ತಿದ್ದಂತೆ ಕಿಟ್ನಲ್ಲಿ ನೀಡಿದ ಔಷಧಗಳನ್ನು ತೆಗೆದುಕೊಳ್ಳಬಹುದು. ಯಾವ್ಯಾವುದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ನೀಡಿರುವುದಾಗಿ ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಕನ್ನಡದ ಚಿತ್ರರಂಗದ ಅನೇಕ ಮಂದಿ ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ತಂಡ ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ಅಗತ್ಯ ವಸ್ತುಗಳು ಮತ್ತು ಆಹಾರ ಕಿಟ್ ನೀಡುತ್ತಿದ್ದಾರೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ತನ್ನ ತಂಡದ ಜೊತೆ ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಕಷ್ಟದಲ್ಲಿರೋರಿಗೆ ನೆರವಾಗುತ್ತಿದ್ದಾರೆ. ನಟ ಶ್ರೀಮುರಳಿ, ಜಗ್ಗೇಶ್, ಸುದೀಪ್, ಶುಭಾ ಪೂಂಜಾ ಸೇರಿದಂತೆ ಅನೇಕರು ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸಹಾಯ ಹಸ್ತ ಚಾಚಿದ್ದಾರೆ.


Click it and Unblock the Notifications











