'ದಿ ವಿಲನ್' ಸಕ್ಸಸ್ ನಂತರ ಪ್ರೇಮ್ ವಿರುದ್ಧ 10 ಲಕ್ಷ ವಂಚನೆ ಬಾಂಬ್.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ಜೊತೆ 'ದಿ ವಿಲನ್' ಎಂಬ ಮೆಗಾ ಸಿನಿಮಾ ಮಾಡಿ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ನಿರ್ದೇಶಕ 'ಜೋಗಿ' ಪ್ರೇಮ್ ವಿರುದ್ಧ ಈಗ ವಂಚನೆ ಆರೋಪ ಕೇಳಿಬಂದಿದೆ.
9 ವರ್ಷಗಳ ಹಿಂದೆ ಸಿನಿಮಾ ಮಾಡೋದಾಗಿ ದುಡ್ಡು ತೆಗೆದುಕೊಂಡು, ಈ ಕಡೆ ಸಿನಿಮಾನೂ ಮಾಡಿಲ್ಲ, ಹಣ ವಾಪಸ್ ಕೊಡ್ತಿಲ್ಲ ಎಂದು ಕನ್ನಡದ ಖ್ಯಾತ ನಿರ್ಮಾಪಕರೊಬ್ಬರು ಆರೋಪ ಮಾಡಿದ್ದಾರೆ.
ಇತ್ತೀಚಿಗಷ್ಟೆ 'ತಾರಕಾಸುರ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಜೋಗಿ ಪ್ರೇಮ್ ನನಗೆ ಮೋಸ ಮಾಡಿದ್ದಾರೆ, ಅವರು ಜೋಗಿ ಪ್ರೇಮ್ ಅಲ್ಲ, ಟೋಪಿ ಪ್ರೇಮ್ ಎಂದು ಕಿಡಿಕಾರಿದ್ದಾರೆ. ಅಷ್ಟಕ್ಕೂ, ಪ್ರೇಮ್ ಮತ್ತು ಕನಕಪುರ ಶ್ರೀನಿವಾಸ ಮಧ್ಯೆ ನಡೆದ ಆ ವ್ಯವಹಾರ ಏನು.? ಯಾವ ಚಿತ್ರ ಮಾಡಬೇಕು ಎಂದು ಪ್ಲಾನ್ ಆಗಿತ್ತು.? ಮುಂದೆ ಓದಿ......

10 ಲಕ್ಷ ಅಡ್ವಾನ್ಸ್ ನೀಡಿದ್ರಂತೆ
'ದನಕಾಯೋನು', 'ಭರ್ಜರಿ', 'ಟೋಪಿವಾಲ' ಅಂತಹ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು, ಸುಮಾರು 9 ವರ್ಷದ ಹಿಂದೆ ಜೋಗಿ ಪ್ರೇಮ್ ಅವರಿಗೆ ಒಂದು ಸಿನಿಮಾ ಮಾಡಿ ಅಂತ ಹೇಳಿ 10 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರಂತೆ. ಇಲ್ಲಿಯವರೆಗೂ ಸಿನಿಮಾನೂ ಮಾಡಿಕೊಟ್ಟಿಲ್ಲ, ದುಡ್ಡು ವಾಪಸ್ ಕೊಡ್ತಿಲ್ಲ ಎಂದು ಶ್ರೀನಿವಾಸ್ ಈಗ ಬಾಂಬ್ ಸಿಡಿಸಿದ್ದಾರೆ.

ಯಾವ ಸಿನಿಮಾ ಮಾಡಬೇಕಿತ್ತು.?
ಜೋಗಿ ಪ್ರೇಮ್ ಜೊತೆ ಯಾವ ಸಿನಿಮಾ ಮಾಡೋಕೆ ಅಡ್ವಾನ್ಸ್ ಕೊಟ್ಟಿದ್ದೀರಿ ಅಂತ ಕೇಳಿದ್ರೆ, ''ಯಾವ ಸಿನಿಮಾ ಅಂತ ಪ್ಲಾನ್ ಆಗಿರಲಿಲ್ಲ. ಮಾತುಕತೆ ಕೂಡ ಆಗಿಲ್ಲ. ಕಥೆ ಕೂಡ ಕೇಳಿಲ್ಲ. ಜೋಗಿ ಸಿನಿಮಾ ನೋಡಿದ್ದೆ, ಒಳ್ಳೆ ಡೈರೆಕ್ಟರ್, ಒಳ್ಳೆ ಕಥೆ ಇರುತ್ತೆ, ಸಿನಿಮಾ ಮಾಡ್ತಾರೆ ಅಂತ ಅಡ್ವಾನ್ಸ್ ಕೊಟ್ಟಿದ್ದೆ ಅಷ್ಟೇ. ಈಗ ಕೇಳಿದ್ರೆ, ಆಗ ಕೊಡ್ತೀನಿ ಈಗ ಕೊಡ್ತೀನಿ ಅಂತ ಹೇಳ್ಕೊಂಡೆ ಬರ್ತಿದ್ದಾರೆ. ದುಡ್ಡ ಮಾತ್ರ ವಾಪಸ್ ಕೊಡ್ತಿಲ್ಲ' ಎಂದು ಆರೋಪ ಮಾಡ್ತಿದ್ದಾರೆ.

ಇನ್ನೂ 5 ಲಕ್ಷ ಕೊಡಬೇಕು
''ನನ್ನ ಆರೋಗ್ಯ ಸರಿಯಿಲ್ಲ ಅಂತ ಅವರ ಮನೆ ಹತ್ರ ಹೋಗಿ 2.5 ಲಕ್ಷ ಹಣ ತಗೊಂಡಿದ್ದೆ. ಆಮೇಲೆ ಮತ್ತೆ ನಮ್ಮ ಹುಡುಗನ ಕಳುಹಿಸಿದ್ದಕ್ಕೆ 2.5 ಲಕ್ಷ ದುಡ್ಡು ಕೊಟ್ಟಿದ್ದರು. ಬಾಕಿ ಐದು ಲಕ್ಷ ಎಲ್ರಿ ಅಂದ್ರೆ, ಅದೇನೋ ಪೇಪರ್ ಗೆ ಹಾಕಿದ್ದೀನಿ ಅಂತಾರೆ. ಮತ್ತೆ ಅವರನ್ನ ಕೇಳ್ತೀನಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ಲಾನ್ ಮಾಡದೇ ದುಡ್ಡು ಯಾಕೆ ಕೊಟ್ರಿ.?
ಸಿನಿಮಾ ಯಾವುದು, ಯಾವ ನಟನ ಜೊತೆ ಮಾಡ್ಬೇಕು, ಯಾವಾಗ ಮಾಡ್ಬೇಕು ಎನ್ನುವುದನ್ನ ಏನೂ ಕೇಳದೆ ಯಾಕೆ ಅಡ್ವಾನ್ಸ್ ಕೊಟ್ರಿ ಅಂದಿದ್ದಕ್ಕೆ, ''ಅವರ ಸಿನಿಮಾಗಳನ್ನ ನೋಡಿದ್ದೆ, ತಲೆಯಲ್ಲಿ ಒಳ್ಳೆ ಕಥೆ ಇರುತ್ತೆ ಕೊಟ್ಟೆ, ನನಗೇನು ಗೊತ್ತಿತ್ತು ಆಮೇಲೆ ತಲೆಕೆಟ್ಟೋಗುತ್ತೆ ಅಂತ'' ಎಂದರು.

ಯಾವುದಕ್ಕೆ ಕಾರಣಕ್ಕೂ ಸಿನಿಮಾ ಮಾಡಲ್ಲ
'ಈಗೇನಾದರೂ ಜೋಗಿ ಪ್ರೇಮ್ ಅವರೇ ಬಂದು, ಸಿನಿಮಾ ಮಾಡೋಣ ಬಿಡಿ ಅಂದ್ರು ನಾನು ಮಾಡೋದಕ್ಕೆ ರೆಡಿಯಿಲ್ಲ. ನನಗೆ ನನ್ನ ದುಡ್ಡು ವಾಪಸ್ ಬೇಕು ಅಷ್ಟೇ. ಅವರೇ 2 ಕೋಟಿ ಸಂಭಾವನೆ ನನಗೂ ಕೊಟ್ರು ನಾನು ಅವರ ಜೊತೆ ಸಿನಿಮಾ ಮಾಡಲ್ಲ'' ಎಂದು ಕನಕಪುರ ಶ್ರೀನಿವಾಸ್ ಅವರು ಪ್ರೇಮ್ ವಿರುದ್ಧ ವಾಗ್ವಾದ ನಡೆಸಿದ್ದಾರೆ.


Click it and Unblock the Notifications











