ದರ್ಶನ್ ಎದುರು 'D58' ಚಿತ್ರದಲ್ಲಿ ಚಿರಂಜೀವಿ ನಟಿಸೋದು ಪಕ್ಕಾ; ಇಲ್ಲಿದೆ ಸುಳಿವು
ಯಾವ ಯಾವ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಅತಿಥಿ ಆಗುವಂತಾಯಿತು. 'ಡೆವಿಲ್' ಚಿತ್ರೀಕರಣದ ನಡುವೆಯೇ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲಿಂದ ಮುಂದೆ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಯಿತು. ಕಳೆದೆರಡು ತಿಂಗಳಿನಿಂದ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡುತ್ತಿರುವ 'ಡೆವಿಲ್' ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ನಟಿಸಬೇಕಿದೆ. ಇದು ದರ್ಶನ್ 58ನೇ ಸಿನಿಮಾ. ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಣ್ಣ ಡೈಲಾಗ್ ಜೊತೆಗೆ ಚಿತ್ರದ ಮೋಷನ್ ಪೋಸ್ಟರ್ ಸಹ ರಿಲೀಸ್ ಆಗಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ.

ಈ ಹಿಂದೆ ಪ್ರೇಮ್- ದರ್ಶನ್ ಕಾಂಬಿನೇಷನ್ನಲ್ಲಿ 'ಕರಿಯ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಸದ್ಯ ಇದೇ ಚಿತ್ರವನ್ನು ಆಗಸ್ಟ್ 30ಕ್ಕೆ ರೀ ರಿಲೀಸ್ ಮಾಡಲಾಗುತ್ತಿದೆ. ಪ್ರೇಮ್ ನಿರ್ದೇಶನದ ಸಿನಿಮಾಗಳ ಬಗ್ಗೆ ಸಹಜವಾಗಿಯೇ ಕುತೂಹಲ ಇರುತ್ತದೆ. ಇನ್ನು ಅವರೊಟ್ಟಿಗೆ ದರ್ಶನ್ ಜೈ ಜೋಡಿಸುತ್ತಾರೆ ಅಂದ್ಮೇಲೆ ಕೇಳಬೇಕಾ? ಆದರೆ 'ಡೆವಿಲ್' ತಡವಾಗುತ್ತಿರುವುದರಿಂದ 'D58' ಕೂಡ ಮತ್ತಷ್ಟು ತಡವಾಗಲಿದೆ.
ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಪ್ರೇಮ್ ನಡುವೆ ಸಣ್ಣ ಭಿನ್ನಾಭಿಪ್ರಾಯ ಮೂಡಿತ್ತು. ಆದರೆ ಕಹಿ ಗಳಿಗೆಯನ್ನು ಇಬ್ಬರೂ ಮರೆತು ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಹಣ ಹೂಡುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿತ್ತು. ಇನ್ನು ಚಿತ್ರದಲ್ಲಿ ದರ್ಶನ್ ಜೊತೆ ತೆಲುಗು ನಟ ಚಿರಂಜೀವಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆ ಸುದ್ದಿ ನಿಜ ಎನ್ನಲಾಗ್ತಿದೆ.
ನಟ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರು ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಸಹ ಚಿರುಗೆ ಹುಟ್ಟುಹಬ್ಬದ ಶುಭಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಚಿರಂಜೀವಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಪ್ರೇಮ್ ಹೈದರಾಬಾದ್ಗೆ ಹೋಗಿ ಚಿರಂಜೀವಿ ಅವರಿಗೆ ಕಥೆ ಹೇಳಿ D58 ಚಿತ್ರದಲ್ಲಿ ನಟಿಸುವಂತೆ ಒಪ್ಪಿಸಿದ್ದಾರೆ ಎನ್ನುವ ಮಾತುಗಳು ಹಿಂದೆ ಕೇಳಿಬಂದಿತ್ತು. ಸದ್ಯ ಈ ಫೋಟೊ ಆ ವಿಚಾರಕ್ಕೆ ಪುಷ್ಠಿ ನೀಡುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಚಿರಂಜೀವಿ ಸರ್. ನಿಮ್ಮ ಕೆಲಸ, ಸ್ಟೈಲ್ ಹಾಗೂ ವಿನಮ್ರತೆ ಈ ತಲೆಮಾರಿಗೆ ಪ್ರೇರಣೆ ಎಂದು ಪ್ರೇಮ್ ಬರೆದುಕೊಂಡಿದ್ದಾರೆ.
ಆ ಪೋಸ್ಟ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ರಕ್ಷಿತಾ ಪ್ರೇಮ್ ಹಾಗೂ ತಮ್ಮ ಇಡೀ ತಂಡದ ಸದಸ್ಯರ ಇನ್ಸ್ಟಾಗ್ರಾಮ್ ಖಾತೆಗಳನ್ನು ಜೋಗಿ ಪ್ರೇಮ್ ಟ್ಯಾಗ್ ಮಾಡಿದ್ದಾರೆ. ಅಲ್ಲಿದೆ D58 ಚಿತ್ರದಲ್ಲಿ ಚಿರು ನಟಿಸುವುದು ಗ್ಯಾರೆಂಟಿ ಎನ್ನುವ ಮಾತುಗಳು ಕೇಳಿಬರ್ತಿದೆ. ಅಂದಹಾಗೆ ಚಿರು ಈಗಾಗಲೇ ಕನ್ನಡದ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.
1996ರಲ್ಲಿ ರವಿಚಂದ್ರನ್ ನಿರ್ದೇಶಿಸಿ, ನಿರ್ಮಿಸಿ ನಟಿಸಿದ 'ಸಿಪಾಯಿ' ಚಿತ್ರದಲ್ಲಿ ಮೆಗಾಸ್ಟಾರ್ ಬಣ್ಣ ಹಚ್ಚಿದ್ದರು. ಕೊಂಚ ದೊಡ್ಡ ಪಾತ್ರದಲ್ಲೇ ಮಿಂಚಿದ್ದರು. ಕ್ರೇಜಿಸ್ಟಾರ್ ಜೊತೆ ಒಂದು ಹಾಡಿಗೂ ಹೆಜ್ಜೆ ಹಾಕಿದ್ದರು. ಇನ್ನು 'ಶ್ರೀಮಂಜುನಾಥ' ಚಿತ್ರದಲ್ಲಿ ಶಿವನ ಪಾತ್ರಕ್ಕೆ ಜೀವ ತುಂಬಿದ್ದರು. ಕೆಲ ದಿನಗಳ ಕಾಲ ರಾಜಕೀಯರಂಗದತ್ತ ಮುಖ ಮಾಡಿದ್ದ ಚಿರು ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರೇಮ್ ಪೋಸ್ಟ್ ನೋಡುತ್ತಿದ್ದರೆ ದರ್ಶನ್ ಜೊತೆ ಚಿರು ನಟಿಸೋದು ಬಹುತೇಕ ಖಚಿತ, ಅಧಿಕೃತ ಘೋಷಣೆ ಅಷ್ಟೇ ಬಾಕಿ ಎನ್ನಲಾಗ್ತಿದೆ.


Click it and Unblock the Notifications











