ಪ್ರೋ ಕಬ್ಬಡ್ಡಿಯಲ್ಲಿ ಜೂ ಎನ್ಟಿಆರ್ ಕನ್ನಡ ಕಾಮೆಂಟ್ರಿ!
ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಸಿನಿಮಾಗಳಿಂದ ದೊಡ್ಡ ಮಟ್ಟದ ಬೆಳೆದ ನಟ-ನಟಿಯರು ಕನ್ನಡವನ್ನು ಮರೆತಂತೆ ನಟಿಸುತ್ತಿರುವ ಉದಾಹರಣೆಗಳಿದ್ದಾಗ ತೆಲುಗು ನಟ ಜೂ.ಎನ್ಟಿಆರ್ ಅವರ ಕನ್ನಡ ಪ್ರೀತಿ ಕನ್ನಡಿಗರಿಗೆ ಮೆಚ್ಚುಗೆಯಾಗುತ್ತಿದೆ.
ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್ 'ಆರ್ಆರ್ಆರ್' ಸಿನಿಮಾದ ಪ್ರಚಾರಕ್ಕಾಗಿ ದೇಶದೆಲ್ಲೆಡೆ ಪ್ರವಾಸ ಮಾಡುತ್ತಿದ್ದು, ಬೆಂಗಳೂರಿಗೆ ಬಂದಾಗ ಕನ್ನಡದಲ್ಲಿಯೇ ಮಾತನಾಡಿ ಈಗಾಗಲೇ ಗಮನ ಸೆಳೆದಿದ್ದಾರೆ. 'ಆರ್ಆರ್ಆರ್' ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿಯಲ್ಲಿಯೂ ಜೂ ಎನ್ಟಿಆರ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
ಇದೀಗ ಮತ್ತೆ ಜೂ.ಎನ್ಟಿಆರ್ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದೀಗ ಪ್ರೋ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯುತ್ತಿದ್ದು, ನಿನ್ನೆಯ ಬೆಂಗಳೂರು ಬುಲ್ಸ್ v/s ಯು ಮುಂಬಾ ನಡುವಿನ ಆಟಕ್ಕೆ ಜೂ ಎನ್ಟಿಆರ್ ಸಾಕ್ಷಿಯಾದರು.

ಕೆಲ ಕಾಲ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಕಮೆಂಟರಿ ಬಾಕ್ಸ್ಗೆ ಆಗಮಿಸಿದ್ದ ಜೂ ಎನ್ಟಿಆರ್, ತಮ್ಮ 'ಆರ್ಆರ್ಆರ್' ಸಿನಿಮಾದ ಬಗ್ಗೆ ಮಾತನಾಡಿದರು.
ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ? ಎಂಬ ನಿರೂಪಕರ ಪ್ರಶ್ನೆಗೆ ಕನ್ನಡದಲ್ಲಿಯೇ ಉತ್ತರಿಸಿದ ಜೂ ಎನ್ಟಿಆರ್, ''ನಾನು ನನ್ನ ಪಾತ್ರ, ಸಿನಿಮಾದ ಬಗ್ಗೆ ಜಾಸ್ತಿ ಮಾತನಾಡಿದರೆ ರಾಜಮೌಳಿಯವರು ಬಂದು ನನ್ನ ಮೇಲೆ ರೇಡ್ ಮಾಡುತ್ತಾರೆ ಅಷ್ಟೆ'' ಎಂದಿದ್ದಾರೆ.
ಮುಂದುವರೆದು, ''ನೀವೆಲ್ಲ ಟ್ರೈಲರ್ ನೋಡಿದ್ದೀರಿ. ಟ್ರೈಲರ್ನಲ್ಲಿಯೇ ಕತೆಯೆಲ್ಲ ಹೇಳುವ ಪ್ರಯತ್ನವನ್ನು ರಾಜಮೌಳಿ ಮಾಡುತ್ತಾರೆ. ಇಲ್ಲೂ ಸಹ ಅದನ್ನೇ ಮಾಡಿದ್ದಾರೆ. ಟ್ರೈಲರ್ನಲ್ಲಿ ಹುಲಿ ಇದೆ, ರಾಮ್ ಚರಣ್ ಸರ್ ಅವರದ್ದು 2000 ಜನರ ಮೇಲೆ ಫೈಟ್ ಒಂದಿದೆ. ಸಿನಿಮಾದಲ್ಲಿ ಇನ್ನೂ ಸಾಕಷ್ಟು ವಿಷಯಗಳು ಇರಲಿವೆ'' ಎಂದರು ಜೂ.ಎನ್ಟಿಆರ್.
''ಟ್ರೈಲರ್ನಲ್ಲಿ ನಿಮ್ಮ ಧ್ವನಿಯಲ್ಲಿ ಕನ್ನಡ ಭಾಷೆಯ ಡೈಲಾಗ್ಗಳು ಕೇಳಿದ್ದು ಬಹಳ ಖುಷಿಯಾಯಿತು'' ಎಂದು ನಿರೂಪಕ ಹೇಳಿದಾಗ ನಕ್ಕ ಜೂ.ಎನ್ಟಿಆರ್, ''ನಿಮ್ಮನ್ನು ಬಿಡಿ ನನ್ನ ಅಮ್ಮ ಅದೆಷ್ಟು ಖುಷಿಯಾಗಿದ್ದಾರೆ ಗೊತ್ತ. ಅವರು ಮುಂಚೇನೆ ಹೇಳಿದ್ರು ನಂಗೆ ನೀನು ಚೆನ್ನಾಗಿ ಕನ್ನಡ ಮಾತನಾಡು, ನಾನು ತಲೆ ಬಗ್ಗಿಸೋ ಹಾಗೆ ಮಾಡ್ಬೇಡ'' ಎಂದಿದ್ದರು ಎಂದು ನಕ್ಕರು ಜೂ ಎನ್ಟಿಆರ್.
ಜೂ ಎನ್ಟಿಆರ್ ಅವರು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಾಗಲೂ ಸುದ್ದಿಗೋಷ್ಠಿ ಪೂರ್ತಿ ಕನ್ನಡದಲ್ಲಿಯೇ ಮಾತನಾಡಿದರು. ಅಂದೂ ಸಹ ತಮ್ಮ ತಾಯಿ ತಮಗೆ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದರು. ಜೂ ಎನ್ಟಿಆರ್ ತಾಯಿ ಕನ್ನಡತಿ.
ಜೂ ಎನ್ಟಿಆರ್ ಕನ್ನಡ ಪ್ರೀತಿಗೆ ಈ ಹಿಂದೆಯೂ ಹಲವು ಉದಾಹರಣೆ ಸಿಕ್ಕಿವೆ. ತೆಲುಗು ಬಿಗ್ಬಾಸ್ ನಿರೂಪಣೆ ಮಾಡಿದ್ದ ಜೂ ಎನ್ಟಿಆರ್ ಆ ಶೋನಲ್ಲಿಯೂ ಒಬ್ಬ ಸ್ಪರ್ಧಿಯೊಡನೆ ಕನ್ನಡದಲ್ಲಿ ಮಾತನಾಡಿದ್ದರು. ಆ ನಂತರ ಪುನೀತ್ ರಾಜ್ಕುಮಾರ್ ಅವರ 'ಚಕ್ರವ್ಯೂಹ' ಸಿನಿಮಾಕ್ಕೋಸ್ಕರ 'ಗೆಳೆಯ ಗೆಳೆಯ' ಕನ್ನಡ ಹಾಡನ್ನು ಹಾಡಿದ್ದರು.
ಇತ್ತೀಚೆಗೆ 'ಆರ್ಆರ್ಆರ್' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಾಗಲೂ ಭಾರವಾದ ಹೃದಯದಿಂದ ಪುನೀತ್ ಅವರನ್ನು ನೆನಪಿಸಿಕೊಂಡು, 'ಗೆಳೆಯ ಗೆಳೆಯ' ಹಾಡು ಹಾಡಿದರು. ನನ್ನ ಗೆಳೆಯನೇ ಇಲ್ಲ ಹಾಗಾಗಿ ಇನ್ನು ಮುಂದೆ ನಾನು ಎಲ್ಲಿಯೂ ಈ ಹಾಡು ಹಾಡುವುದಿಲ್ಲ. ಇದೇ ಕೊನೆ ಎಂದು ಹೇಳಿ 'ಗೆಳೆಯ, ಗೆಳೆಯ' ಹಾಡು ಹೇಳಿದರು ಜೂ ಎನ್ಟಿಆರ್.


Click it and Unblock the Notifications











