ವ್ಯಾಯಾಮ ಮಾಡುವಾಗ ಜೂ.ಎನ್ಟಿಆರ್ಗೆ ಗಾಯ, ಶಸ್ತ್ರಚಿಕಿತ್ಸೆ
'ಆರ್ಆರ್ಆರ್' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಜೂ.ಎನ್ಟಿಆರ್ ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಜಿಮ್ನಲ್ಲಿ ವರ್ಕ್ಔಟ್ ಮಾಡುವ ವೇಳೆ ಜೂ.ಎನ್ಟಿಆರ್ ಬೆರಳ ಮೂಳೆ ಮುರಿತವಾಗಿತ್ತು. ಅದರ ನೋವು ಹೆಚ್ಚಾದ ಕಾರಣ ಈಗ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಜೂ ಎನ್ಟಿಆರ್ ಹೈದರಾಬಾದ್ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.
ಕೆಲವು ದಿನಗಳ ಹಿಂದೆ ಜೂ.ಎನ್ಟಿಆರ್ ತಮ್ಮ ಮಕ್ಕಳೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಜೂ.ಎನ್ಟಿಆರ್ ಕೈಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವುದನ್ನು ಅಭಿಮಾನಿಗಳು ಗಮನಿಸಿ, ಏನಾಯಿತೆಂದು ಪ್ರಶ್ನಿಸಿದ್ದರು.
ಜೂ.ಎನ್ಟಿಆರ್ ಹೀಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕೆಲವು ದಿನಗಳ ಮುಂಚೆಯಷ್ಟೆ ಜೂ.ಎನ್ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೈದರಾಬಾದ್ನ ಕೇರ್ ಹೆಸರಿನ ಆಸ್ಪತ್ರೆಯಲ್ಲಿ ಬಾಲಕೃಷ್ಣಗೆ ಭುಜದ ಆಪರೇಷನ್ ಮಾಡಲಾಗಿದೆ. ಈಗ ಜೂ.ಎನ್ಟಿಆರ್ಗೆ ಕೈ ಬೆರಳುಗಳಿಗೆ ಆಪರೇಷನ್ ಮಾಡಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೆ ಜೂ.ಎನ್ಟಿಆರ್ ಅವರು ಪುನೀತ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು. ಪುನೀತ್ ಹಾಗೂ ಜೂ ಎನ್ಟಿಆರ್ ಅತ್ಯಾಪ್ತ ಗೆಳೆಯರಾಗಿದ್ದರು. ಅಪ್ಪುಗಾಗಿ 'ಗೆಳೆಯ-ಗೆಳೆಯ' ಹಾಡನ್ನು ಜೂ.ಎನ್ಟಿಆರ್ ಹಾಡಿದ್ದರು.
ಜೂ ಎನ್ಟಿಆರ್ ಪ್ರಸ್ತುತ ಯಾವ ಸಿನಿಮಾದಲ್ಲಿಯೂ ನಟಿಸುತ್ತಿಲ್ಲ. ಪ್ರಸ್ತುತ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ಜನವರಿ 07ಕ್ಕೆ ಬಿಡುಗಡೆ ಆಗಲಿದೆ. ಆ ಸಿನಿಮಾದ ಬಿಡುಗಡೆ ಬಳಿಕವಷ್ಟೆ ಹೊಸ ಸಿನಿಮಾದಲ್ಲಿ ಜೂ.ಎನ್ಟಿಆರ್ ತೊಡಗಿಸಿಕೊಳ್ಳಲಿದ್ದಾರೆ. ಇದರ ನಡುವೆ ಪ್ರಸ್ತುತ 'ಯವರು ಮೀಲೊ ಕೋಟಿಶ್ವರುಲು' ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ.
ಜೂ.ಎನ್ಟಿಆರ್ಗೆ ಆಗಾಗ್ಗೆ ಗಾಯಗಳಾಗುವುದು ಸಾಮಾನ್ಯ. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತವೇ ಆಗಿ ಗಂಭೀರ ಸ್ಥಿತಿಯಲ್ಲಿದ್ದರು. ಜೂ.ಎನ್ಟಿಆರ್ ಇನ್ನು ಮುಂದೆ ನಟಿಸಲಾರರು, ನರ್ತಿಸಲಾರರು ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅಪಘಾತದ ಗಾಯಗಳಿಂದ ಚೇತರಿಸಿಕೊಂಡ ಜೂ.ಎನ್ಟಿಆರ್ ಮುಂಚಿನ ಜೋಶ್ನೊಂದಿಗೆ ನರ್ತಿಸಲು ತೊಡಗಿದರು, ನಟಿಸಲು ತೊಡಗಿದರು.
ಕಿರುತೆರೆ ರಿಯಾಲಿಟಿ ಶೋ ನಿರೂಪಣೆಯಲ್ಲಿ ತೊಡಗಿರುವ ಜೂ.ಎನ್ಟಿಆರ್, 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಜೊತೆಗೆ ಸಿನಿಮಾ ಮಾಡುವ ಮುನ್ನ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದು ಜೂ ಎನ್ಟಿಆರ್ ಅವರ 30ನೇ ಸಿನಿಮಾ ಆಗಿರಲಿದೆ.


Click it and Unblock the Notifications











