ಹಾಸಿಗೆ ಹಿಡಿದ ಜ್ಯೂನಿಯರ್ ಅಪ್ಪು; ದಿಢೀರ್ ಈ ಕಲಾವಿದನಿಗೆ ಏನಾಯ್ತು?
ನಗುವಿನ ಒಡೆಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ 3 ವರ್ಷವಾಗುತ್ತಾ ಬಂತು. ಅಪ್ಪು ಇಲ್ಲದ ನೋವು ಇನ್ನು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇನ್ನು ಪುನೀತ್ ರಾಜ್ಕುಮಾರ್ ಅವರನ್ನೇ ಹೋಲುವ ಕೆಲ ಕಲಾವಿದರು ಜನರನ್ನು ರಂಜಿಸುತ್ತಿದ್ದಾರೆ. ವೇದಿಕೆಗಳಲ್ಲಿ ಅಪ್ಪು ಧ್ವನಿ, ಮ್ಯಾನರಿಸಂ, ಲುಕ್ ಪ್ರದರ್ಶಿಸಿ ಗಮನ ಸೆಳೆಯುತ್ತಾರೆ.
ಜ್ಯೂನಿಯರ್ ಅಪ್ಪು ಅಂತ್ಲೇ ಜನ ಇವರನ್ನು ಗುರ್ತಿಸುತ್ತಾರೆ. ಪವರ್ ಸ್ಟಾರ್ ವಾಯ್ಸ್ ಮಿಮಿಕ್ರಿ ಮಾಡುತ್ತಾ ಅವರದ್ದೇ ಸ್ಟೈಲ್ನಲ್ಲಿ ಅವರೆಲ್ಲಾ ಸದ್ದು ಮಾಡುತ್ತಿದ್ದಾರೆ. ಆನಂದ್ ಆರ್ಯ ಎಂಬುವವರು ಕೂಡ ಜ್ಯೂನಿಯರ್ ಅಪ್ಪು ಎಂದೇ ಖ್ಯಾತರಾಗಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಥೇಟ್ ಪುನೀತ್ ರಾಜ್ಕುಮಾರ್ ಅವರಂತೆ ಕಾಣಿಸಿಕೊಂಡು ಜನರ ಮನಗೆದ್ದಿದ್ದಾರೆ.

'ಛಾಯಾ' ಹಾಗೂ 'ಮಾರಕಾಸ್ತ್ರ' ಎನ್ನುವ ಎರಡು ಸಿನಿಮಾಗಳಲ್ಲಿ ಕೂಡ ಆನಂದ್ ಆರ್ಯ ಬಣ್ಣ ಹಚ್ಚಿ ನಟಿಸಿದ್ದಾರೆ. ಸದ್ಯ ಆನಂದ್ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಎರಡೂ ಕಿಡ್ನಿ ಫೇಲ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃತ್ತಿಯಲ್ಲಿ ಡ್ರೈವರ್ ಆಗಿದ್ದ ಇವರು ನೆಚ್ಚಿನ ನಟ ಅಪ್ಪು ಅವರಿಂದ ಪ್ರೇರಣೆಗೊಂಡು ಹಾಡು ಹಾಡುವುದನ್ನು ಕಲಿತಿದ್ದರು. ನಂತರ ಆರ್ಕೇಸ್ಟ್ರಾಗಳಲ್ಲಿ ಹಾಡಲು ಆರಂಭಿಸಿದ್ದರು.
ನೀವು ನೋಡಲು ಪುನೀತ್ ರಾಜ್ಕುಮಾರ್ ಎಂದು ಜನ ಹೇಳಲು ಆರಂಭಿಸಿದ ಬಳಿಕ ಅವರಂತೆಯೇ ಆನಂದ್ ಆರ್ಯ ವೇದಿಕೆಗಳಲ್ಲಿ ಮಿಂಚಲು ಮುಂದಾದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಸದ್ಯ ನಗರದ ವೈಟ್ಫೀಲ್ಡ್ ಬಳಿಯ ಆಸ್ಪತ್ರೆಯಲ್ಲಿ ಆನಂದ್ ಆರ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರು ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ.
"ನನಗೆ ನಾಲ್ಕು ವರ್ಷಗಳಿಂದ ಬಿಪಿ ಇತ್ತು. ಇತ್ತೀಚೆಗೆ ಚಿತ್ರೀಕರಣದ ನಡುವೆ ಮಾತ್ರೆ ತೆಗೆದುಕೊಳ್ಳುವುದು ಮಿಸ್ ಮಾಡಿಕೊಂಡಿದ್ದೆ. ಹಾಗಾಗಿ ನಾಲ್ಕೈದು ದಿನಗಳಿಂದ ಉಸಿರಾಟಕ್ಕೆ ತೊಂದರೆಯಾಗಿ ಐಸಿಯುನಲ್ಲಿದ್ದೆ. ಈಘ ನಾರ್ಮಲ್ ವಾರ್ಡ್ಗೆ ಶಿಫ್ಟ್ ಆಗಿದ್ದೀನಿ. ಎರಡು ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಕಿಡ್ನಿ ಕಸಿ ಮಾಡಿಸಬೇಕು. ಡಯಾಲಿಸಿಸ್ ಸಹ ಆರಂಭಿಸಿದ್ದಾರೆ" ಎಂದು ಆನಂದ್ ಆರ್ಯ ಹೇಳಿದ್ದಾರೆ.
ನನ್ನ ಅನಾರೋಗ್ಯದ ವಿಷಯ ತಿಳಿದು ಸಾಕಷ್ಟು ಜನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹಲವರು ಫೋನ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. ನೀವು ಚೇತರಿಸಿಕೊಂಡು ಬಂದು ಮತ್ತೆ ನಮ್ಮನ್ನು ರಂಜಿಸಬೇಕು ಎಂದು ಹೇಳುತ್ತಿದ್ದಾರೆ ಎಂದು ಆನಂದ್ ಎಲ್ಲರ ಹಾರೈಕೆಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಆನಂದ್ ಆರ್ಯ ಅವರಿಗೆ ಪತ್ನಿ ಹಾಗೂ ಒಬ್ಬ ಮಗಳು ಇದ್ದಾರೆ. ಚಿಕಿತ್ಸೆಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











