ದರ್ಶನ್ ಬರ್ತ್ಡೇ ದಿನವೇ ಪವಿತ್ರಾ ಗೌಡಗೆ ನಿರಾಸೆ ; ಜಾಮೀನು ನೀಡಲು ಕೋರ್ಟ್ ನಕಾರ
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ ಚುಕ್ತಾ ಮಾಡಲೇಬೇಕು. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತಿರುವವರು ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ.
ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್ನ ಘನತೆ, ಗೌರವವನ್ನು ಮಣ್ಣು ಪಾಲು ಮಾಡಿದ ಕುಖ್ಯಾತಿ ಪವಿತ್ರಾ ಗೌಡಗೆ ಸಲ್ಲುತ್ತೆ. ಕೇವಲ ದರ್ಶನ್ ಮಾತ್ರವಲ್ಲ ದರ್ಶನ್ ಜೊತೆ ಒಳ ಹೋದ ಇನ್ನು ಕೆಲ ಹುಡುಗರ ಬದುಕು ಕೂಡ ಬರ್ಬಾದ್ ಆಗಿದೆ. ಇದಕ್ಕೆಲ್ಲವೂ ಪ್ರಮುಖವಾದ ಕಾರಣ ಪವಿತ್ರಾ ಗೌಡ ಅಂದರೆ ಅದು ತಪ್ಪಾಗಲಿಕ್ಕಿಲ್ಲ.

ಇಂಥಾ ಪವಿತ್ರಾ ಗೌಡ ಎರಡನೇ ಬಾರಿ ಜೈಲು ಸೇರಿ ಒಂದಲ್ಲ ಎರಡಲ್ಲ ಇಂದಿಗೆ ಬರೋಬ್ಬರಿ 185 ದಿನಗಳಾಗಿವೆ. ಇನ್ನೂ ಕಳೆದ ವರ್ಷ ಜೈಲಿನಲ್ಲಿದ್ದ ಕಾಲವನ್ನು ಕೂಡ ಇಲ್ಲಿ ಲೆಕ್ಕ ಹಾಕಿದರೆ ಪವಿತ್ರಾ ಗೌಡ 374 ದಿನಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.
ಆದರೆ, ಈ ಬಾರಿ ಕಳೆದ ಬಾರಿ ಹೊರ ಬಂದಂತೆ ಬರಲು ಸಾಧ್ಯ ಇಲ್ಲ. ಹೊರ ಬರಲು ಸರಿಯಾದ ಸಮಯ ಇನ್ನೂ ಬರಬೇಕಿದೆ. ವಿಚಾರಣೆ ಪೂರ್ಣಗೊಳ್ಳಬೇಕಿದೆ. ಸಂಪೂರ್ಣ ವಿಚಾರಣೆ ನಡೆದ ನಂತರವಷ್ಟೇ ಪವಿತ್ರಾ ಗೌಡ ತಮ್ಮ ಮುಂದಿನ ದಿನಗಳನ್ನು ಜೈಲಿನಲ್ಲಿಯೇ ಕಳೆಯುತ್ತಾರಾ ಅಥವಾ ಮನೆಗೆ ಮರಳುತ್ತಾರಾ ಎನ್ನುವುದು ಗೊತ್ತಾಗಲಿದೆಯಾದರೂ ಸದ್ಯ ದರ್ಶನ್ ಹುಟ್ಟುಹಬ್ಬದ ದಿನವೇ ಪವಿತ್ರಾ ಗೌಡಗೆ ನಿರಾಸೆಯಾಗಿದೆ.
ಹೌದು, ರೇಣುಕಾಸ್ವಾಮಿ ಪ್ರಕರಣದಲ್ಲಿ ತಮಗೆ ಜಾಮೀನು ನೀಡಬೇಕೆಂದು ಪವಿತ್ರಾ ಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ನನ್ನ ಮಗಳು ಈಗ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿನ್ನೆಲೆ ಜಾಮೀನು ನೀಡಬೇಕೆಂದು 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬೋರ್ಡ್ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಗಳ ಜೊತೆಗಿದ್ದು ಅವಳಿಗೆ ಮಾನಸಿಕ ಸ್ಥೈರ್ಯ ತುಂಬಲು ತನಗೆ ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪವಿತ್ರಾ ಗೌಡ ಅವರ ಈ ಮನವಿಗೆ ಸರ್ಕಾರಿ ಅಭಿಯೋಜಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರೇಣುಕಾಸ್ವಾಮಿ ಪ್ರಕರಣ ಸಾಮಾನ್ಯ ಪ್ರಕರಣವಲ್ಲ, ಇಡೀ ದೇಶದೆಲ್ಲೆಡೆ ಚರ್ಚೆಯಾದ ಪ್ರಕರಣ, ಎಲ್ಲಕ್ಕಿಂತ ಹೆಚ್ಚಾಗಿ ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ಪ್ರಮುಖ ಆರೋಪಿಗೆ ಜಾಮೀನು ನೀಡುವುದು ತನಿಖೆ ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಎಂದು ವಾದ ಮಾಡಿದ್ದರು. ಪರೀಕ್ಷೆಯ ನೆಪವನ್ನಷ್ಟೇ ಮುಂದಿಟ್ಟುಕೊಂಡು ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತು.

ಎರಡು ಕಡೆ ವಾದ-ಪ್ರತಿವಾದವನ್ನು ಆಲಿಸಿದ 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಐ.ಪಿ. ನಾಯಕ್, ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ಜಾಮೀನು ನೀಡಲು ಮಗಳ ಪರೀಕ್ಷೆ ಬಲವಾದ ಕಾರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಧೀಶರಾದ ಐ.ಪಿ.ನಾಯಕ್ ರಿಲೀಫ್ ನೀಡದಿರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ದರ್ಶನ್ ಹುಟ್ಟುಹಬ್ಬದ ದಿನ ಪವಿತ್ರಾ ಗೌಡಗೆ ನಿರಾಸೆಯಾಗಿದ್ದು ಸದ್ಯ ಸುಬ್ಬಿಗೆ ಜೈಲೇ ಗತಿಯಾಗಿದೆ.
ಇನ್ನು ಇದಕ್ಕೂ ಮುನ್ನ ಪವಿತ್ರಾ ಗೌಡ ಮನೆಯೂಟಕ್ಕೆ ಮನವಿ ಮಾಡಿದ್ದರು.ಜೈಲಿನ ಊಟ ಸರಿ ಇಲ್ಲ ಎಂದು ಹೇಳಿದ್ದರು. ಜೈಲಿನಲ್ಲಿ ದಿನನಿತ್ಯ ಊಟ ಮಾಡಿ ಮೈಮೇಲೆ ಗುಳ್ಳೆಗಳಾಗಿವೆ, ಚರ್ಮರೋಗವಾಗಿದೆ ಎಂದು ಅಲವತ್ತುಕೊಂಡಿದ್ದರು. ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದರು.
ಆದರೆ ಆ ನಂತರ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.ಅರ್ಜಿಯ ವಿಚಾರಣೆಯನ್ನು ಜನವರಿ 20ರಂದು ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಎಷ್ಟೇ ದೊಡ್ಡವರಾದರು ಕೂಡ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬ ಅಭಿಪ್ರಾಯ ಪಟ್ಟಿತ್ತು. ಈ ಮೂಲಕ ಮನೆಯೂಟ ಕೂಡ ಪವಿತ್ರಾ ಗೌಡಗೆ ಮರಿಚೀಕೆಯಾಯ್ತು.


Click it and Unblock the Notifications











