ಆಕ್ಷನ್ ಕಟ್ ಗೆ ಗೀತಸಾಹಿತಿ ಕೆ ಕಲ್ಯಾಣ್ 'ಅಂಬೆಗಾಲು'

ಇದೇ ಮೊಟ್ಟ ಮೊದಲ ಬಾರಿಗೆ ಅವರು ಆಕ್ಷನ್ ಕಟ್ ಹೇಳಲು ಹೊರಟಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ 'ಅಂಬೆಗಾಲು' ಎಂದು ಹೆಸರಿಟ್ಟಿದ್ದಾರೆ. ಇದು ಭಾವನೆಗಳ ಅಂಬೆಗಾಲು, ಧ್ಯೇಯಗಳ ಅಂಬೆಗಾಲು.
ಕೇವಲ ನಿರ್ದೇಶನದ ಜವಾಬ್ದಾರಿ ಅಷ್ಟೇ ಅಲ್ಲದೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದಾರೆ. ಈ ಚಿತ್ರದ ನಿರ್ಮಾಪಕರು ಬೆಂ.ಕೋ.ಶ್ರೀ (ಬಿ.ಕೆ. ಶ್ರೀನಿವಾಸ್). ವರ್ಷದ ಹಿಂದೆಯೇ ಕಲ್ಯಾಣ್ ಅವರಿಗೆ ಚಿತ್ರಕತೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಕೋಶ್ರೀ ಹೇಳಿದ್ದರಂತೆ.
ಈಗ ಚಿತ್ರಕತೆ ಅಂತಿಮ ಹಂತಕ್ಕೆ ಬಂದಿದ್ದು ಬಹುಶಃ ಸೆಪ್ಟೆಂಬರ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಳಿವೆ ಎಂದಿದ್ದಾರೆ. ಚಿತ್ರಕತೆ ಪೂರ್ಣವಾಗುವವರೆಗೆ ಪಾತ್ರವರ್ಗದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲ ಆದ್ಯತೆ ಚಿತ್ರಕತೆಗೆ. ಆ ಬಳಿಕವಷ್ಟೇ ತಾಂತ್ರಿಕ ಹಾಗೂ ತಾರಾ ಬಳಗದ ಆಯ್ಕೆ ಎಂದಿದ್ದಾರೆ.
'ಅಮೃತ ವರ್ಷಿಣಿ' ಚಿತ್ರದ "ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ.." ಎಂಬ ಸಾಹಿತ್ಯದ ಮೂಲಕ ಅಮೃತ ಹನಿಸಿದ ಪ್ರೇಮಕವಿ ಕೆ ಕಲ್ಯಾಣ್. ನೆನಪುಗಳ ಮಾತು ಮಧುರಾ (ಚಂದ್ರಮುಖಿ ಪ್ರಾಣಸಖಿ), ಸವಿ ಸವಿ ನೆನಪು ಸಾವಿರ ನೆನಪು (ಮೈ ಆಟೋಗ್ರಾಫ್), ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ (ಆಕಾಶ್), ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ (ಆ ದಿನಗಳು)...ಹೀಗೆ ಸೂಪರ್ ಹಿಟ್ ಗೀತೆಗಳನ್ನು ಕೊಟ್ಟಂತಹ ಸಾಹಿತಿ ಕಲ್ಯಾಣ್. ಅವರ ನಿರ್ದೇಶನ ಎಂದ ಮೇಲೆ ಸಹಜವಾಗಿ ಕುತೂಹಲ ಇದ್ದೇ ಇರುತ್ತದೆ.
ಈ ಹಿಂದೊಮ್ಮೆ ಅವರು ಮಾತನಾಡುತ್ತಾ, ಚೊಚ್ಚಲ ಚಿತ್ರವಾದ ಕಾರಣ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ.ಸಂಗೀತ ನಿರ್ದೇಶಕನಾಗಿ ಈಗಾಗಲೆ ಯಶಸ್ಸು ಕಂಡಿದ್ದೇನೆ. ಚಿತ್ರನಿರ್ದೇಶನದಲ್ಲೂ ಗೆಲ್ಲಬೇಕೆಂಬ ಆಸೆ ಇದೆ " ಎಂದಿದ್ದರು. (ಏಜೆನ್ಸೀಸ್)


Click it and Unblock the Notifications











