ದರ್ಶನ್, ಸುದೀಪ್ಗೆ ಸಿಎಂ ಆಗೋ ಅರ್ಹತೆಯಿದೆ ; ಯಶ್ ರಾಜಕೀಯಕ್ಕೆ ಬರಲ್ಲ- ಗಂಡುಗಲಿ ಕೆ.ಮಂಜು
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಇಷ್ಟೇ ಅಲ್ಲ ವಿಜಯ್ ಐತಿಹಾಸಿಕ ಸಾಧನೆ ಕೂಡ ಕಣ್ಮುಂದೆಯೇ ಇದೆ.
ಆದರೆ ಈ ಮಾತು ಕನ್ನಡಕ್ಕೆ ಅನ್ವಯವಾಗುವುದಿಲ್ಲ. ನಿಜಾ .. ಅನಂತ್ ನಾಗ್.. ರಮ್ಯಾ .. ಸುಮಲತಾ ಅಂಬರೀಶ್.. ಉಮಾಶ್ರೀ..ಶಶಿಕುಮಾರ್.. ಜಗ್ಗೇಶ್.. ಬಿ.ಸಿ.ಪಾಟೀಲ್ ಹೀಗೆ ಹಲವರು ರಾಜಕೀಯಕ್ಕೆ ಧುಮುಕಿದ್ದಾರೆ. ಗುರುತಿಸಿಕೊಂಡಿದ್ದಾರೆ. ಆದರೆ.. ರಾಜಕೀಯದ ಪಡಸಾಲೆಯಲ್ಲಿ ಅಂಬರೀಶ್ ಗುಡುಗಿದಂತೆ, ಬೆಳೆದಂತೆ ಯಾರು ಕ್ರಾಂತಿಯನ್ನು ಮಾಡಲಿಲ್ಲ. ಪ್ರಾದೇಶಿಕ ಪಕ್ಷವನ್ನು ಕೂಡ ಕಟ್ಟಲಿಲ್ಲ. ಉಪೇಂದ್ರ ಈ ಕೆಲಸ ಮಾಡಿದ್ದಾರಾದರೂ ಅವರ ಲೆಕ್ಕಾಚಾರವೇ ಬೇರೆ.

ಹೀಗಿರುವಾಗ ಕನ್ನಡ ಚಿತ್ರರಂಗದಲ್ಲಿ ಮುಖ್ಯಮಂತ್ರಿಯ ಕುರ್ಚಿ ಮೇಲೆ ಕೂರುವ ಸಾಮರ್ಥ್ಯ ಯಾರಿಗೆ ಇದೆ ಎನ್ನುವುದನ್ನು ಕನ್ನಡದ ಗಂಡುಗಲಿ ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಈ ಕುರಿತು ''ಅಶ್ವವೇಗ ನ್ಯೂಸ್''ಗೆ ಪ್ರತಿಕ್ರಿಯೆ ನೀಡಿರುವ ಕೆ.ಮಂಜು ಜನ ಈಗ ಮೊದಲಿನಂತೆ ಇಲ್ಲ. ಬದಲಾಗಿದ್ದಾರೆ ಎಂದು ಹೇಳಿದ್ದಾರೆ. ಇಂದಿನ ನಾಯಕರನ್ನು ನೋಡಿ ನೋಡಿ ಜನರಿಗೂ ಸಾಕಾಗಿದೆ. ಎಂದು ಹೇಳಿರುವ ಕೆ.ಮಂಜು ಯುವಜನತೆಗೆ ಬುದ್ಧಿ ಇದೆ, ಅವರು ಹೊಸ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದಿದ್ದಾರೆ. ಸಿನಿಮಾದವರು ಮುಂದೆ ಬಂದರೆ ಖಂಡಿತವಾಗಿ ಜನ ಗೆಲ್ಲಿಸುತ್ತಾರೆ ಎನ್ನುವುದಕ್ಕೆ ವಿಜಯ್ ಅವರ ಗೆಲುವು ಉದಾಹರಣೆ ಎಂದಿದ್ದಾರೆ.
ಕೇವಲ ಎರಡು ವರ್ಷದಲ್ಲಿ ಪಕ್ಷ ಸ್ಥಾಪಿಸಿ ಈ ಹಂತಕ್ಕೆ ವಿಜಯ್ ಬರುತ್ತಾರೆ ಎಂದು ಯಾರಾದರೂ ಊಹೆ ಮಾಡಿದ್ದರಾ..? ಖಂಡಿತ ಇಲ್ಲ ಎಂದು ಹೇಳಿರುವ ಕೆ.ಮಂಜು ಈ ಗೆಲುವು ಪ್ರಾದೇಶಿಕ ಪಕ್ಷಗಳ ಶಕ್ತಿಗೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ಸಿಕ್ಕ ಈ ಸುವರ್ಣಾವಕಾಶವನ್ನು ಸದುಪಯೋಗ ಮಾಡಿಕೊಂಡು ಸಮರ್ಥವಾದ ಆಡಳಿತ ನೀಡಿದರೆ ಇನ್ನು ಹತ್ತು ವರ್ಷ ವಿಜಯ್ ಅವರೇ ಆಡಳಿತದಲ್ಲಿರುತ್ತಾರೆ ಎಂದು ಕೂಡ ಹೇಳಿರುವ ಕೆ.ಮಂಜು ಜನರ ಕಷ್ಟಕ್ಕೆ ಸ್ಪಂದಿಸಬೇಕು, ಸ್ಪಂದಿಸಿದರೆ ಜನ ಕೈ ಬಿಡುವುದಿಲ್ಲ ಎಂದಿದ್ದಾರೆ.

ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಕನಸು ಕಾಣುವುದಕ್ಕಿಂತ ಜನರ ಸೇವೆ ಮಾಡುತ್ತೇನೆ ಎಂಬ ಧೈರ್ಯದೊಂದಿಗೆ ಮುಂದೆ ಬರುವುದು ಮುಖ್ಯ ಎಂದು ಹೇಳಿರುವ ಕೆ. ಮಂಜು ಈ ಹಿಂದೆ ಪವನ್ ಕಲ್ಯಾಣ್ ಅಂತಹ ಸಾಹಸ ಮಾಡಿದ್ದರಿಂದಲೇ ಯಶಸ್ಸು ಕಂಡಿದ್ದಾರೆ ಎಂದು ಹೇಳಿದ್ದಾರೆ.
ಚಿರಂಜೀವಿ, ಕಮಲ್ ಹಾಸನ್ ಅವರಿಂದ ಯಾಕೆ ಸಾಧ್ಯ ಆಗಲಿಲ್ಲ ಅಂದರೆ ಅದಕ್ಕೆ ಧೈರ್ಯ ಬೇಕು ಅಷ್ಟೇ ಎಂದು ಹೇಳಿರುವ ಕೆ.ಮಂಜು ಆ ಕಾಲದಲ್ಲಿ ರಜನಿಕಾಂತ್ ಚೂರು ಧೈರ್ಯ ಮಾಡಿದ್ದರು ಸಾಕಿತ್ತು ಮುಖ್ಯಮಂತ್ರಿಯಾಗುತ್ತಿದ್ದರು ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ನಮ್ಮ ನಾಡಿನಲ್ಲಿ ಮುಖ್ಯಮಂತ್ರಿ ಗದ್ದುಗೆ ಏರುವ ಅರ್ಹತೆ ಮತ್ತು ಸಾಮರ್ಥ್ಯ ಯಾರಲ್ಲಿದೆ ಎಂಬ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಕೆ.ಮಂಜು ನನ್ನ ಪ್ರಕಾರ ದರ್ಶನ್ ಮತ್ತು ಸುದೀಪ್ ಅವರಿಗೆ ಸಿಎಂ ಆಗುವ ಎಲ್ಲ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ''ಪ್ರಜಾಕೀಯ'' ಪಕ್ಷದ ಮೂಲಕ ಗುರುತಿಸಿಕೊಂಡಿರುವ ಉಪೇಂದ್ರ ಅವರಿಗೂ ಕೂಡ ಆಡಳಿತ ನಡೆಸುವ ಅರ್ಹತೆ ಇದೆ ಎಂದು ಹೇಳಿರುವ ಕೆ.ಮಂಜು, ನಮ್ಮ ಯಶ್ ಅವರಿಗೆ ಕೂಡ ಆ ಸಾಮರ್ಥ್ಯ ಇದೆ ಆದರೆ ಅವರು ರಾಜಕೀಯಕ್ಕೆ ಬರುವವರಲ್ಲ ಅವರು ಚಿತ್ರರಂಗದಲ್ಲಿ ಬೇರೆಯದ್ದೇ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications