ಕರಾವಳಿ ಕುವರಿಯ ಜೊತೆ ಜ್ಯೂ.ಕಿಚ್ಚನ ರೊಮ್ಯಾನ್ಸ್...!
ಸಾಮಾನ್ಯವಾಗಿ ಚಿತ್ರರಂಗದಲ್ಲಿರುವವರ ಮಕ್ಕಳು, ಅವರ ಮನೆಯ ಸದಸ್ಯರು, ಆಪ್ತರು ಚಿತ್ರರಂಗಕ್ಕೆ ಬರುವುದು ವಾಡಿಕೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಚಿತ್ರರಂಗಕ್ಕೆ ಈ ವರ್ಷ ಕಿಚ್ಚ ಸುದೀಪ್ ಹೊಸ ಬ್ರ್ಯಾಂಡ್ನ ಪರಿಚಯ ಮಾಡುತ್ತಿದ್ದಾರೆ. ಆ ಬ್ರ್ಯಾಂಡ್ ಹೆಸರು ಸಂಚಿತ್ ಸಂಜೀವ್. ಮೊನ್ನೆ ಮೊನ್ನೆಯಷ್ಟೇ ಸಂಚಿತ್ ಅಭಿನಯದ ಚೊಚ್ಚಲ ಚಿತ್ರದ ಘೋಷಣೆ ಕೂಡ ಆಗಿದೆ. ಈ ಶುಕ್ರವಾರ ಚಿತ್ರದ ಮುಹೂರ್ತ ಕೂಡ ನೆರವೇರಲಿದೆ.
ಹೀಗಿರುವಾಗ ಈ ಚಿತ್ರಕ್ಕೆ ಕರಾವಳಿಯ ಕುವರಿ ಕಾಜಲ್ ಕುಂದರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲನ್ನೇರುತ್ತಿರುವ ಕಾಜಲ್ ಕುಂದರ್ ಕೆ.ಟಿ.ಎಮ್, ಬಾಂಡ್ ರವಿ , ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು. ಪೆಪೆ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇನ್ನು ಬಿಳಿಚುಕ್ಕಿ ಹಳ್ಳಿ ಹಕ್ಕಿ ಸೇರಿ ಇನ್ನು ಕೆಲ ಚಿತ್ರಗಳು ಕಾಜಲ್ ಕೈಯಲ್ಲಿವೆ. ಇದರ ನಡುವೆ ಈಗ ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಕಾಜಲ್ ಕುಂದರ್.

ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಾಜಲ್ ರಂಗಭೂಮಿ ಹಿನ್ನೆಲೆಯಿಂದ ಬಂದ ನಾನು ಸದಾ ಸವಾಲಿನ ಪಾತ್ರಗಳನ್ನೇ ಎದುರು ನೋಡುತ್ತಿರುತ್ತೇನೆ. ಈ ಚಿತ್ರದಲ್ಲಿ ನನಗೆ ನಾನು ಬಯಸಿದ ಪಾತ್ರವೇ ಸಿಕ್ಕಿದೆ ಎಂದು ಹೇಳಿದ್ದಾರೆ.
ಇನ್ನು ಹೊಸತಂಡದಲ್ಲಿ ಸದಾ ಸಾಧಿಸುವ ಕಿಚ್ಚು ಹೆಚ್ಚಿರುತ್ತೆ. ಆ ಕಿಚ್ಚು ನನಗೆ ಈ ತಂಡದಲ್ಲಿ ಕಂಡಿದೆ, ನನ್ನ ಪಾಲಿಗೆ ಇದೊಂದು ಸುವರ್ಣ ಅವಕಾಶ ಈ ಅವಕಾಶ ಸದುಪಯೋಗ ಪಡಿಸಿಕೊಂಡು ಹೆಚ್ಚು ಜನರನ್ನು ತಲುಪುವ ವಿಶ್ವಾಸ ನನಗೆ ಇದೆ ಎಂದು ಹೇಳಿರುವ ಕಾಜಲ್ ಒಂದೆರಡು ತಿಂಗಳ ಹಿಂದೆ ನಾನು ನಿರ್ದೇಶಕ ವಿವೇಕ್ ಅವರನ್ನು ಭೇಟಿಯಾದೆ, ಆಡಿಷನ್ ನೀಡಿದೆ ಚಿತ್ರಕ್ಕೆ ಅವರು ಮಾಡಿಕೊಂಡ ತಯಾರಿ ನನ್ನನ್ನೂ ಆಶ್ಚರ್ಯಚಕಿತಗೊಳಿಸಿತು ಎಂದಿದ್ದಾರೆ.
ಅಂದ್ಹಾಗೇ ಎಲ್ಲವೂ ಅಂದುಕೊಂಡತೆ ನಡೆದಿದ್ದರೆ 'ಜಿಮ್ಮಿ' ಸಂಚಿತ್ ಸಂಜೀವ್ ಅಭಿನಯದ ಚೊಚ್ಚಲ ಚಿತ್ರವಾಗಬೇಕಿತ್ತು. ಚಿತ್ರದ ನಿರ್ದೇಶನದ ಜವಾಬ್ಧಾರಿಯನ್ನು ಕೂಡ ಖುದ್ದು ಸಂಚಿತ್ ವಹಿಸಿಕೊಂಡಿದ್ದರು. ಪ್ರಿಯಾ ಸುದೀಪ್, ಕೆ.ಪಿ.ಶ್ರೀಕಾಂತ್ ಮತ್ತು ಲಹರಿ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಟೈಟಲ್ ಲಾಂಚ್ ಸಮಾರಂಭ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದರೆ ಆ ನಂತರ ಅದೇನಾಯ್ತೋ ಚಿತ್ರ ನಿಂತು ಹೋಯ್ತು.
ಸದ್ಯ. ಈ ಶುಕ್ರವಾರದಿಂದ ಶುರುವಾಗಲಿರುವ ಸಂಚಿತ್ ಸಂಜೀವ್ ಅಭಿನಯದ ಹೊಸ ಚಿತ್ರಕ್ಕೆ ಕೆ.ಆರ್.ಜಿ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ನಿರ್ಮಾಣದಲ್ಲಿ ಸಹಜವಾಗಿ ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ತೆಲುಗು-ತಮಿಳು ಮತ್ತು ಹಿಂದಿಯಲ್ಲಿ ತೆರೆಯ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿರುವ ಮೈಸೂರು ಮೂಲದ ವಿವೇಕ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಕಥೆ ಕ್ರೈಂ ಥ್ರಿಲ್ಲರ್ ಎಂದು ಹೇಳಲಾಗುತ್ತಿದ್ದು ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅಂದರೆ ಜನವರಿ 24ರಂದು ಅನಾವರಣಗೊಳ್ಳಲಿದೆ. ಇನ್ನುಳಿದಂತೆ ಸಂಚಿತ್ ಸಂಜೀವ್ ಮತ್ತು ಕಾಜಲ್ ಕುಂದರ್ ಅವರನ್ನು ಹೊರತು ಪಡಿಸಿ ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಇದ್ದಾರೆ, ಚಿತ್ರದ ಮಿಕ್ಕ ಟೆಕ್ನಿಷಿಯನ್ಸ್ ಯಾರು ಎನ್ನುವುದಕ್ಕೆ ಉತ್ತರ ಕೂಡ ಶುಕ್ರವಾರ ಸಿಗಲಿದೆ.


Click it and Unblock the Notifications











