'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದೆ. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೆಂಬಲ ಸೂಚಿಸಿದೆ.
ಆದ್ರೆ, 'ಕಾಲಾ' ಚಿತ್ರವನ್ನ ನಿಷೇಧ ಮಾಡಿರುವ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ''ಕಾವೇರಿ ವಿವಾದ ಬಂದ್ರೆ ತಮಿಳು ಚಿತ್ರಗಳನ್ನ ಬ್ಯಾನ್ ಮಾಡ್ತಾರೆ'' ಎಂಬ ವಾದವನ್ನ ಮುಂದಿಟ್ಟು ಚರ್ಚೆ ಮಾಡ್ತಿದ್ದಾರೆ.
ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಅವರು ಮಾತನಾಡಿದ್ದು, ''ನಾವು ನಾಡಿನ ಜನರ ಪರವಾಗಿ ಇದ್ದೇವೆ. ಜನ ಸಿನಿಮಾ ಬೇಡ ಅಂದ್ರೆ ನಾವು ಬೇಡ ಅಂತಿವಿ. ಇಲ್ಲಿ ನಮ್ಮ ವೈಯಕ್ತಿಕ ನಿರ್ಧಾರವಿಲ್ಲ'' ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ, ''ಅವರ್ ಮಾಡಿದ್ರೆ ತಪ್ಪಿಲ್ಲ, ನಾವ್ ಮಾಡಿದ್ರೆ ತಪ್ಪಾ.?''' ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ....

ಎಲ್ಲ ತಮಿಳು ಸಿನಿಮಾವನ್ನ ಬ್ಯಾನ್ ಮಾಡಿಲ್ಲ
ಇದು ಎಷ್ಟು ಸರಿ ಎಷ್ಟು ತಪ್ಪು ಎಂಬುದಕ್ಕಿಂತ ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ, ತಮಿಳಿನ ಎಲ್ಲ ಚಿತ್ರಗಳನ್ನ ಈಗ ಬ್ಯಾನ್ ಮಾಡಿಲ್ಲ. ಕರ್ನಾಟಕದ ವಿರುದ್ಧ ಹೇಳಿಕೆ ನೀಡಿರುವ ರಜನಿಕಾಂತ್ ಮತ್ತು ಕಮಲ್ ಹಾಸನ್ ಸಿನಿಮಾಗಳನ್ನ ಮಾತ್ರವೇ ನಿಷೇಧ ಮಾಡಲಾಗಿದೆ.

ಆಗ 'ನಾಗರಹಾವು' ನಿಷೇಧ ಮಾಡಿದ್ದೇಕೆ.?
2016ರಲ್ಲಿ ಡಾ ವಿಷ್ಣುವರ್ಧನ್ ಮತ್ತು ರಮ್ಯಾ ಅಭಿನಯಿಸಿದ್ದ 'ನಾಗರಹಾವು' ಚಿತ್ರದ ತಮಿಳು ವರ್ಷನ್ ತಮಿಳುನಾಡಿನಲ್ಲಿ ಪ್ರದರ್ಶನ ಕಾಣುತ್ತಿತ್ತು. ಅಂದು ಕಾವೇರಿ ವಿವಾದವನ್ನ ಮುಂದಿಟ್ಟು ಆ ಸಿನಿಮಾವನ್ನ ಪ್ರದರ್ಶನ ಮಾಡಲು ಬಿಡಲಿಲ್ಲ. ನಗರದ ಪೊಲೀಸ್ ಕಮಿಷನರ್ ಅವರೇ ಖುದ್ದು ಚಿತ್ರ ಪ್ರದರ್ಶನವನ್ನ ನಿಲ್ಲಿಸಿದ್ದರು. ಅದು ಕನ್ನಡ ಸಿನಿಮಾ ಅನ್ನೋದಕ್ಕಿಂತ ತಮಿಳು ಭಾಷೆಯಲ್ಲಿ ಡಬ್ ಆಗಿದ್ದ ಸಿನಿಮಾ ಆಗಿತ್ತು. ಆದ್ರೂ, ಪ್ರದರ್ಶನ ಆಗಲಿಲ್ಲ. ಆಗ, ಅದು ತಪ್ಪು ಆಗಿಲ್ವಾ.?

ಕನ್ನಡ ಜನರ ತೀರ್ಮಾನ
ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ಬಿಡುಗಡೆ ಮಾಡಲು ಅನುಮತಿ ನೀಡಬಾರದೆಂಬುದು ಕನ್ನಡಿಗರ ತೀರ್ಮಾನ. ಹೀಗಾಗಿ, ಜನರು ಹೇಗೆ ಹೇಳ್ತಾರೋ ಅದೇ ನಮ್ಮ ತೀರ್ಮಾನವೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ಅವರು ಕೂಡ ಈ ಬಗ್ಗೆ ಜನರ ಪರವಾಗಿ ತೀರ್ಮಾನ ಕೈಗೊಳ್ಳುತ್ತೇವೆ'' ಎಂದಿದ್ದಾರೆ.

ರಜನಿಕಾಂತ್ ಗೆ ಭರವಸೆ ಇದೆ
ಆದ್ರೆ, ನಟ ರಜನಿಕಾಂತ್ ಕರ್ನಾಟಕದಲ್ಲಿ 'ಕಾಲಾ' ಸಿನಿಮಾ ಬಿಡುಗಡೆಯಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ವಾಣಿಜ್ಯ ಮಂಡಳಿ ಮೇಲೆ ನನಗೆ ಭರವಸೆ ಇದೆ. ಸಿನಿಮಾವನ್ನ ಬಿಡುಗಡೆ ಮಾಡಲು ಸಹಕಾರ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದರು.


Click it and Unblock the Notifications











