ಕರ್ನಾಟಕದಲ್ಲಿ 'ಕಾಲಾ'ಗೆ ಹಿನ್ನಡೆ: ಇದರಿಂದ ಸಾಧಿಸಿದ್ದೇನು.?
ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ಭಾರಿ ಹಿನ್ನಡೆಯಾಗಿದೆ. ರಾಜ್ಯಾದ್ಯಂತ ಕೆಲವೇ ಕೆಲವು ಚಿತ್ರಮಂದಿರಗಳು ಬಿಟ್ಟರೇ ಬೇರೆ ಯಾವ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಿನಿಮಾ ಬಿಡುಗಡೆ ಮಾಡಲು ಮುಂದಾಗಲಿಲ್ಲ.
ಹಲವು ಕಡೆ ಜನರೇ ಸಿನಿಮಾ ನೋಡುವ ಆಸಕ್ತಿ ತೋರಿಸಲಿಲ್ಲ. ಚಿತ್ರಮಂದಿರದ ಮಾಲೀಕರು ಕೂಡ ಸಿನಿಮಾ ಪ್ರದರ್ಶನ ಮಾಡಬೇಕು ಎಂಬ ಹುಮ್ಮಸ್ಸು ತೋರಿಸಲಿಲ್ಲ.
ಶತಾಯಗತಾಯ ಕರ್ನಾಟಕದಲ್ಲಿ 'ಕಾಲಾ' ಚಿತ್ರವನ್ನ ರಿಲೀಸ್ ಮಾಡುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದ ಚಿತ್ರತಂಡಕ್ಕೆ ಈ ಮೂಲಕ ಭಾರಿ ಮುಖಭಂಗವಾಗಿದೆ. ಸರಿ, ಹಾಗಾದ್ರೆ, ಕಾಲಾ ಪ್ರದರ್ಶನ ರದ್ದು ಮಾಡಿದ್ದರಿಂದ ಕರ್ನಾಟಕ ಜನ ಹಾಗೂ ಕನ್ನಡ ಪರ ಸಂಘಟನೆಗಳು ಸಾಧಿಸಿದ್ದೇನು ಎಂಬ ಪ್ರಶ್ನೆ ಹಲವರದ್ದು. ಇದಕ್ಕೆ ಉತ್ತರ ಇಲ್ಲಿದೆ.

ರಜನಿಕಾಂತ್ ಗೆ ಇದು ದೊಡ್ಡ ಎಚ್ಚರಿಕೆ.!
ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನಿಕಾಂತ್ ಗೆ ಇದು ಬಹುದೊಡ್ಡ ಎಚ್ಚರಿಕೆ. ಈ ಹಿಂದೆ ಹಲವು ಬಾರಿ ವಿವಾದಾತ್ಮಕ ಹೇಳೀಕೆ ನೀಡಿದ್ದ ರಜನಿಕಾಂತ್, ಕೊನೆ ಘಳಿಗೆಯಲ್ಲಿ ಕ್ಷಮೆ ಕೇಳಿ ಸಿನಿಮಾ ರಿಲೀಸ್ ಮಾಡಿಸಿಕೊಳ್ಳುತ್ತಿದ್ದರು. ಆದ್ರೆ, ಈ ಸಲ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ರಜನಿಕಾಂತ್ ಮಾತನಾಡುವಾಗ ಬಹಳ ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ.

ತಮಿಳುನಾಡಿಗೂ ಎಚ್ಚರಿಕೆ
ಅಂದ್ಹಾಗೆ ಇದು ಕೇವಲ ರಜನಿಕಾಂತ್ ಗೆ ಮಾತ್ರವಲ್ಲ, ತಮಿಳುನಾಡಿಗೂ ಎಚ್ಚರಿಕೆ. ಸಿನಿಮಾ ಬೇರೆ, ರಾಜಕೀಯ ಬೇರೆ ಎನ್ನುತ್ತಿದ್ದವರಿಗೆ, ಕಾವೇರಿ ವಿಚಾರ ಅಂತ ಬಂದ್ರೆ ಸಿನಿಮಾ ಮಾತ್ರವಲ್ಲ ಬೇರೆ ಯಾವುದೇ ವಿಷ್ಯವಿದ್ರು ಅದನ್ನ ವಿರೋಧಿಸುತ್ತೇವೆ ಎಂದು ತೋರಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕವನ್ನ ಟಾರ್ಗೆಟ್ ಮಾಡುವ ತಮಿಳುನಾಡಿಗೂ ಈ ಹೋರಾಟ ಬಿಸಿಮುಟ್ಟಿಸಿದೆ.

ಕನ್ನಡ ಸಂಘಟನೆಗಳ ಒಗ್ಗಟ್ಟು
ಈ ಹಿಂದೆ 'ಕಬಾಲಿ', 'ಬಾಹುಬಲಿ', ಹಾಗೂ ಇನ್ನಿತರ ಸಿನಿಮಾ ಬಿಡುಗಡೆ ವೇಳೆ ಕನ್ನಡ ಸಂಘಟನೆಗಳು ದುಡ್ಡು ತೆಗೆದುಕೊಂಡು ಬಿಡುಗಡೆಗೆ ಅನುವು ಮಾಡಿಕೊಟ್ಟಿವೆ ಎಂಬ ಆರೋಪ ಕೇಳಿ ಬಂದಿತ್ತು. ಆರಂಭದಿಂದ ಬಿಡುಗಡೆ ಮಾಡುವುದಿಲ್ಲ ಎಂದು ಹೋರಾಟ ಮಾಡ್ತಾರೆ, ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ಎಲ್ಲರೂ ಡೀಲ್ ಮಾಡಿಕೊಳ್ತಾರೆ ಎಂಬ ಆರೋಪವಿತ್ತು. ಆದ್ರೆ, ಈ ಹೋರಾಟದಿಂದ ನಾಡು-ನುಡಿ ಅಂತ ಬಂದ್ರೆ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಸಾಬೀತು ಮಾಡಿವೆ.

ಕನ್ನಡ ಸಿನಿಮಾ ವಲಯದಲ್ಲೂ ಒಗ್ಗಟ್ಟು
ಕರ್ನಾಟಕಕ್ಕೆ ವಿರೋಧವಾಗಿ ಮಾತನಾಡಿದ ರಜನಿಕಾಂತ್ ಅವರ ಚಿತ್ರವನ್ನ ಸ್ವ ಇಚ್ಛೆಯಿಂದ ಯಾರೂ ಪ್ರದರ್ಶನ ಮತ್ತು ವಿತರಣೆ ಮಾಡಬಾರದು ಎಂದು ಒಮ್ಮತ ನಿರ್ಧಾರಕ್ಕೆ ಕರ್ನಾಟಕ ಫಿಲ್ಮ್ ಚೇಂಬರ್ ಬಂದಿತ್ತು. ಅದರಂತೆ ಅನೇಕ ಚಿತ್ರಮಂದಿರಗಳು ಕಾಲಾ ಚಿತ್ರನ್ನ ಬಿಡುಗಡೆ ಮಾಡಿಲ್ಲ. ಪ್ರದರ್ಶನವನ್ನ ರದ್ದು ಮಾಡಿತ್ತು. ವಿತರಕರು ಸಿನಿಮಾ ತೆಗೆದುಕೊಂಡಿಲ್ಲ. ಇದು ಕೂಡ ಕನ್ನಡ ಸಿನಿಮಾ ವಲಯಗಳೂ ಕೂಡ ಒಟ್ಟಾಗಿದೆ ಎಂದು ತೋರಿಸಿದೆ.

ಕನ್ನಡಿಗರ ಸ್ವಾಭಿಮಾನಕ್ಕೆ ಗೆಲುವು
ಇನ್ನು ಕನ್ನಡಿಗರು ವಿಶಾಲ ಹೃದಯದವರು. ಎಲ್ಲದಕ್ಕೂ ಅನುಸರಿಸಿಕೊಂಡು ಹೋಗುತ್ತಾರೆ ಎಂಬ ಅತೀಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ಗೊತ್ತಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬರುವುದಾದರೇ ಯಾವುದನ್ನ ಒಪ್ಪುವುದಿಲ್ಲ ಎಂಬುದಕ್ಕ ಕಾಲಾ ಚಿತ್ರಕ್ಕೆ ಆಗಿರುವ ಗತಿಯೇ ಕಾರಣ.


Click it and Unblock the Notifications











