ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ 'ಕಾಲಾ' ಶೋ ಶುರು.!
ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ, ಬೆಳಗ್ಗೆ ಮೈಸೂರಿನ ಯಾವುದೇ ಚಿತ್ರಮಂದಿರದಲ್ಲಿಯೂ 'ಕಾಲಾ' ಪ್ರದರ್ಶನ ಆಗಲಿಲ್ಲ. ಸ್ವಯಂ ಪ್ರೇರಣೆಯಿಂದ ಚಿತ್ರಮಂದಿರದ ಮಾಲೀಕರು 'ಕಾಲಾ' ಪ್ರದರ್ಶನ ಮಾಡದೇ ಒಗ್ಗಟ್ಟು ಪ್ರದರ್ಶಿಸಿದ್ದರು.
ಆದ್ರೆ, ಸೂರ್ಯ ನೆತ್ತಿ ಮೇಲೇರಿ ಮಧ್ಯಾಹ್ನ ಆಗುತ್ತಿದ್ದಂತೆಯೇ ಮೈಸೂರಿನಲ್ಲಿ 'ಕಾಲಾ' ಪ್ರದರ್ಶನ ಶುರುವಾಗಿದೆ. ಮೈಸೂರಿನ ಎರಡು ಮಲ್ಟಿಪ್ಲೆಕ್ಸ್ ಗಳಲ್ಲಿ 'ಕಾಲಾ' ಶೋ ಆರಂಭವಾಗಿದೆ.
ಮೈಸೂರಿನ ಡಿ.ಆರ್.ಸಿ ಹಾಗೂ ಐನಾಕ್ಸ್ ನಲ್ಲಿ 'ಕಾಲಾ' ಮ್ಯಾಟಿನಿ ಶೋ ಸ್ಟಾರ್ಟ್ ಆಗಿದ್ದು, ನೇರವಾಗಿ ಟಿಕೆಟ್ ಪಡೆದು ಜನ 'ಕಾಲಾ' ವೀಕ್ಷಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಒಳಗೆ ಹಾಗೂ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಪೊಲೀಸರ ಸರ್ಪಗಾವಲಿನ ನಡುವೆ ಜನರು ಸಿನಿಮಾ ನೋಡ್ತಿದ್ದಾರೆ.

'ಕಾಲಾ' ಚಿತ್ರಕ್ಕೆ ಕನ್ನಡ ಪರ ಸಂಘಟನೆಗಳ ಹೋರಾಟದ ಬಿಸಿ ಮುಟ್ಟಿದರಿಂದ, ಕರ್ನಾಟಕದಲ್ಲಿ ನಿರೀಕ್ಷಿಸಿದ ಮಟ್ಟಕ್ಕೆ ದೊಡ್ಡ ಓಪನ್ನಿಂಗ್ ಸಿಕ್ಕಿಲ್ಲ. ರಜನಿಕಾಂತ್ ಅಪ್ಪಟ ಭಕ್ತರು ಮಾತ್ರ ಸದ್ಯ 'ಕಾಲಾ' ಕಣ್ತುಂಬಿಕೊಳ್ಳಲು ಥಿಯೇಟರ್ ಗೆ ಹೋಗುತ್ತಿದ್ದಾರೆ. ಉಳಿದಂತೆ ಹಲವರು 'ಕಾಲಾ' ಬಗ್ಗೆ ನಿರಾಸಕ್ತಿ ತೋರಿದ್ದಾರೆ.
ಇತ್ತೀಚೆಗಷ್ಟೇ ರಾಜಕೀಯಕ್ಕೆ ಅಡ್ಡಿಯಿಟ್ಟ ರಜನಿಕಾಂತ್, ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕೊಟ್ಟ ಹೇಳಿಕೆ ಕನ್ನಡಿಗರನ್ನು ಕೆರಳಿಸಿತ್ತು. ಕಾವೇರಿ ನೀರು ಹಂಚಿಕೆ ವಿಷಯಕ್ಕೆ ರಾಜಕೀಯ ಬಣ್ಣ ಬಳಿಯದೇ, ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲಿ ಎನ್ನುವುದು ಕನ್ನಡ ಪರ ಹೋರಾಟಗಾರರ ಅಭಿಪ್ರಾಯ.


Click it and Unblock the Notifications











