Darshan: 'ಕಾಟೇರ' ಕೊನೆ ಶೆಡ್ಯೂಲ್ಗೂ ಮುನ್ನ ಮಹಾರಾಷ್ಟ್ರಕ್ಕೆ ದರ್ಶನ್ ಭೇಟಿ: ಕಾರಣ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ರವಿಶಂಕರ್ ಗುರುಜೀ ಆಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. 3 ಸಾಂಗ್ ಸೇರಿ 20 ದಿನಗಳ ಶೂಟಿಂಗ್ ಬಾಕಿ ಇರುವುದಾಗಿ ಹೇಳಿದ್ದರು. ಆದರೆ ಕೊನೆ ಶೆಡ್ಯೂಲ್ ಆರಂಭಿಸುವ ಮುನ್ನ ದರ್ಶನ್ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ.
ಸಿನಿಮಾ ಶೂಟಿಂಗ್ ಬಿಟ್ಟು ಬಿಡುವಿನ ಸಮಯವನ್ನು ಹೆಚ್ಚು ಸ್ನೇಹಿತರ ಜೊತೆ ದರ್ಶನ್ ಕಳೆಯುತ್ತಾರೆ. ಆಗಾಗ್ಗೆ ಸ್ನೇಹಿತರ ಜೊತೆ ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಹೊರ ರಾಜ್ಯ, ಹೊರ ದೇಶಗಳಿಗೂ ದರ್ಶನ್ ಟ್ರಿಪ್ ಹೋಗಿ ಬರ್ತಾರೆ. ಇತ್ತೀಚೆಗೆ ತಮ್ಮ ಗಜಪಡೆ ಜೊತೆ ಮಡಿಕೇರಿ ಹೋಗಿ ಬಂದಿದ್ದರು. ಬಳಿಕ ಸ್ನೇಹಿತರೊಟ್ಟಿಗೆ ಬ್ರಿಟನ್ಗೂ ಭೇಟಿ ಕೊಟ್ಟಿದ್ದರು. ಇದೀಗ ದಿಢೀರನೆ ಮಹಾರಾಷ್ಟ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಎರಡು ದಿನಗಳಿಂದ ತಮ್ಮ ಫೋಟೊಗ್ರಫಿ ಸ್ನೇಹಿತರ ಜೊತೆ ದರ್ಶನ್ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದಾರೆ. ದರ್ಶನ್ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆಗಿದ್ದಾರೆ. ವೈಲ್ಡ್ಲೈಫ್ ಫೋಟೊಗ್ರಫಿ ಗೀಳು ಕೂಡ ಇದೆ. ಹಾಗಾಗಿ ಫೋಟೊಗ್ರಫರ್ ಫ್ರೆಂಡ್ಸ್ ಜೊತೆ ದೇಶ ವಿದೇಶ ಸುತ್ತಾಡಿ ಫೋಟೊಗಳನ್ನು ಕ್ಲಿಕ್ಕಿಸುತ್ತಾರೆ. ಈ ಬಾರಿ ಅದೇ ಸ್ನೇಹಿತರ ತಂಡದೊಟ್ಟಿಗೆ ಮಹಾರಾಷ್ಟ್ರಗೆ ಭೇಟಿ ನೀಡಿದ್ದಾರೆ.
ಬೆಟ್ಟಗುಡ್ಡಗಳಲ್ಲಿ ದರ್ಶನ್ ಸ್ನೇಹಿತರ ಜೊತೆ ಇರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ನೇಹಿತರ ಜೊತೆ ದರ್ಶನ್ ಕಾಡು ಮೇಡು ಸುತ್ತಾಡುತ್ತಿರುವುದು ಗೊತ್ತಾಗುತ್ತಿದೆ. ಕೇಸರಿ ಬಣ್ಣದ ಟೀಶರ್ಟ್- ಶಾರ್ಟ್ಸ್ ಧರಿಸಿ ಸನ್ ಗ್ಲಾಸ್ ತೊಟ್ಟುದರ್ಶನ್ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ವೈಲ್ಡ್ಲೈಫ್ ಫೋಟೊಗ್ರಫಿಗಾಗಿ ಕಬಿನಿ, ಬಂಡೀಪುರ ಕಾಡಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಹಿಂದೆ ಉತ್ತರಕಾಂಡ ಅಭಯಾರಾಣ್ಯದಲ್ಲೂ ಸುತ್ತಾಡಿ ಬಂದಿದ್ದರು. ಅದಕ್ಕೂ ಮುನ್ನ ಕ್ಯಾಮರಾ ಹೆಗಲೇರಿಸಿಕೊಂಡು ಕೀನ್ಯಾಗೂ ಹೋಗಿ ಹೋಗಿದ್ದರು.

ಸದ್ಯ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗುತ್ತಿದೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಇನ್ನು ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಯಶಸ್ ಸೂರ್ಯ ಹೀರೊ ಆಗಿ ನಟಿಸಿದ್ದಾರೆ. ಆತನ ಸಹೋದರನ ಪಾತ್ರದಲ್ಲಿ ದರ್ಶನ್ ಮಿಂಚಿದ್ದಾರೆ. ಬಿ. ಸಿ ಪಾಟೀಲ್ 'ಗರಡಿ' ಸಿನಿಮಾ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಗರಡಿ', 'ಕಾಟೇರ' ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಈ ಹಿಂದೆ ಇದೇ ಕಾಂಬಿನೇಷನ್ನಲ್ಲಿ 'ತಾರಕ್' ಸಿನಿಮಾ ಬಂದು ಸಕ್ಸಸ್ ಕಂಡಿತ್ತು. ದುಷ್ಯಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಅದೇ ಬ್ಯಾನರ್ನಲ್ಲಿ ಹೊಸ ಸಿನಿಮಾ ನಿರ್ಮಾಣ ಆಗುವ ಸಾಧ್ಯತೆಯಿದೆ.
ಜೋಗಿ ಪ್ರೇಮ್ ಜೊತೆಗೂ ಚಾಲೆಂಜಿಂಗ್ ಸ್ಟಾರ್ ಸಿನಿಮಾ ಘೋಷಿಸಿದ್ದಾರೆ. 'ಕರಿಯ' ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಮೂಡಿ ಬರಲಿದೆ. ಸೂರಪ್ಪ ಬಾಬು ಸೇರಿ ಮತ್ತಷ್ಟು ನಿರ್ಮಾಪಕರು ದರ್ಶನ್ ಕಾಲ್ಶೀಟ್ಗಾಗಿ ಕಾಯುತ್ತಿದ್ದಾರೆ.


Click it and Unblock the Notifications











