Darshan- Tharun: ಕುಂಬಿಗೆ ಜಗ್ಗು ಬೊಂಬಾಟ್ ಬರ್ತ್ಡೇ ಗಿಫ್ಟ್: ಬೆಲೆ ಎಷ್ಟು ಗೊತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ನೇರ ನಡೆ ನುಡಿಯಿಂದಲೂ ಎಲ್ಲರಿಗೂ ಹತ್ತಿರವಾಗಿದ್ದಾರೆ. ಇನ್ನು ಸ್ನೇಹಿತರು ಅಂದ್ರೆ ಜೀವ ಬಿಡುತ್ತಾರೆ. ಒಮ್ಮೆ ಒಬ್ಬೊರ ಜೊತೆ ಸ್ನೇಹ ಹುಟ್ಟಿದ್ರೆ ಮುಗೀತು. ಅದೇ ರೀತಿ ದುಷ್ಮನಿಯನ್ನು ಕೂಡ ಕೊನೆಯವರೆಗೂ ಬಿಡೊಲ್ಲ, ಒಳಗೊಂದು ಹೊರಗೊಂದು ನನ್ನತ್ರ ಇರಲ್ಲ ಎಂದು ಹೇಳುತ್ತಿರುತ್ತಾರೆ.
ಆಪ್ತ ಬಳಗದ ಜೊತೆ ಊರೂರು ಸುತ್ತುತ್ತಾ ದರ್ಶನ್ ಎಂಜಾಯ್ ಮಾಡುತ್ತಾರೆ. ಗಜಪಡೆ ಬಹಳ ದೊಡ್ಡದಾಗಿಯೇ ಇದೆ. ದೇಶ ವಿದೇಶಗಳಲ್ಲಿ ದರ್ಶನ್ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ದರ್ಶನ್ಗೆ ಮಡಿಕೇರಿ ಸೇರಿದಂತೆ ನಾನಾ ಕಡೆಗಳಲ್ಲಿ ಸ್ನೇಹಿತರಿದ್ದಾರೆ. ಚಿತ್ರರಂಗದಲ್ಲೂ ಹಲವರು ದಾಸನ ಚಡ್ಡಿ ದೋಸ್ತ್ಗಳಾಗಿಬಿಟ್ಟಿದ್ದಾರೆ.

ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಸುಧೀರ್ ಬಹಳ ಆಪ್ತರು. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳನ್ನು ಒಟ್ಟಿಗೆ ಸೇರಿಸಿ 'ನವಗ್ರಹ' ಸಿನಿಮಾ ನಿರ್ಮಿಸಿ ನಟಿಸಿದ್ದರು. ತರುಣ್ ಸುಧೀರ್ ನಿರ್ದೇಶನದ 2 ಸಿನಿಮಾಗಳಲ್ಲಿ ಈಗಾಗಲೇ ದರ್ಶನ್ ನಟಿಸಿದ್ದಾರೆ. ಇದೀಗ 'ಕಾಟೇರ' ಚಿತ್ರಕ್ಕೂ ತರುಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ನಿರ್ದೇಶಕ-ನಟ ತರುಣ್ ಸುಧೀರ್ ಹುಟ್ಟಹಬ್ಬ ಆಚರಿಸಿಕೊಂಡಿದ್ದರು.
'ಕಾಟೇರ' ಸೆಟ್ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಗಿತ್ತು. ಇದೀಗ ಸ್ನೇಹಿತನಿಗೆ ಹಾರ್ಲೆ ಡೇವಿಡ್ಸನ್ - X440 ಬೈಕ್ ಅನ್ನು ಬರ್ತ್ಡೇ ಗಿಫ್ಟ್ ಆಗಿ ದರ್ಶನ್ ಕೊಟ್ಟಿದ್ದಾರೆ. ತಾವರೆಕೆರೆ ಬಳಿ 'ಕಾಟೇರ' ಸಿನಿಮಾ ಚಿತ್ರೀಕರಣ ನಡೀತಿದೆ. ಶೂಟಿಂಗ್ ಸೆಟ್ಗೆ ಬೊಂಬಾಟ್ ಗಿಫ್ಟ್ ಹೋಗಿದೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಾರ್ಲೆ ಡೇವಿಡ್ಸನ್ - X440 ಬೈಕ್ ಬೆಲೆ ಅಂದಾಜು 3 ಲಕ್ಷ ರೂ. ಇದೆ. ಸ್ನೇಹಿತನಿಗೆ ದರ್ಶನ್ ಭರ್ಜರಿ ಗಿಫ್ಟ್ ನೀಡಿದ್ದಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

ತೂಗುದೀಪ ಶ್ರೀನಿವಾಸ್ ಹಾಗೂ ಸುಧೀರ್ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ಅವರ ಮಕ್ಕಳ ನಡುವೆ ಸ್ನೇಹ ಮುಂದುವರೆಯಿತು. ತರುಣ್ ಸುಧೀರ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. 'ರಾಬರ್ಟ್' ಚಿತ್ರದಲ್ಲಿ ಇವರಿಬ್ಬರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಇದೀಗ 'ಕಾಟೇರ' ಚಿತ್ರದಲ್ಲಿ ಮತ್ತೆ ಈ ಜೋಡಿ ಜೊತೆಯಾಗಿದ್ದು ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
'ಕಾಟೇರ' ಸಿನಿಮಾ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ. ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳಲಾಗುತ್ತಿದೆ. ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸ್ತಿದ್ದಾರೆ. ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು, ಶ್ರುತಿ, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಹಿನ್ನೆಲೆ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಡಲಾಗುತ್ತಿದೆ.
ಚಿತ್ರದಲ್ಲಿ ಹಳ್ಳಿ ಹೈದನಾಗಿ ಲುಂಗಿ ಉಟ್ಟು ದರ್ಶನ್ ಕಾಣಿಸಿಕೊಂಡಿದ್ದಾರೆ. 70ರ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ಚಿತ್ರಕ್ಕೆ ಜಡೇಶ್ ಹಾಗೂ ತರುಣ್ ಕತೆ ಬರೆದಿದ್ದು ಸಾಕಷ್ಟು ಸೆಟ್ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ. ಸುಧಾಕರ್ ರಾಜ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ ಹಾಗೂ ಮಾಸ್ತಿ ಸಂಭಾಷಣೆ 'ಕಾಟೇರ' ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರ್ತಿದೆ. ದರ್ಶನ್ ಹುಟ್ಟುಹಬ್ಬದ ವೇಳೆಗೆ 'ಕಾಟೇರ' ತೆರೆಮೇಲೆ ದರ್ಬಾರ್ ನಡೆಸುವ ಸುಳಿವು ಸಿಗುತ್ತಿದೆ.


Click it and Unblock the Notifications











