ವೋಟ್ ಹಾಕಿ ಉತ್ತರಕಾಂಡಕ್ಕೆ ಹೋಗಿದ್ಯಾಕೆ ದರ್ಶನ್? ಮತ್ತೆ 'ಕಾಟೇರ' ಶೂಟಿಂಗ್ ಯಾವಾಗ?
ಕೊನೆಗೂ ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿದೆ. ಕನ್ನಡ ಸಿನಿಮಾ ತಾರೆಯರು ಕೂಡ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾರಣ ಸಿನಿಮಾಗಳ ರಿಲೀಸ್, ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಬಿದ್ದಿತ್ತು. ಇದೀಗ ನಿಧಾನವಾಗಿ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಮತ್ತೆ ಸಿನಿಮಾಗಳ ಚಿತ್ರೀಕರಣ ಆರಂಭವಾಗುತ್ತಿದೆ. ಸ್ಯಾಂಡಲ್ವುಡ್ ಸ್ಟಾರ್ಸ್ ಕೂಡ ತಮ್ಮ ಹಕ್ಕು ಚಲಾಯಿಸಿ ಎಲ್ಲರಿಗೂ ಮಾದರಿಯಾದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸ್ತಿರೋದು ಗೊತ್ತೇಯಿದೆ. ಹಲವು ಶೆಡ್ಯೂಲ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಆದರೆ ತಿಂಗಳ ಹಿಂದೆಯೇ ಶೂಟಿಂಗ್ಗೆ ಬ್ರೇಕ್ ನೀಡಿತ್ತು ಚಿತ್ರತಂಡ. ದರ್ಶನ್ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ್ದರು. ರಾಜ್ಯದ ಮೂಲೆ ಮೂಲೆ ಸುತ್ತಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು. ದರ್ಶನ್ ಪ್ರಚಾರ ಮಾಡಿದ ಕೆಲ ಅಭ್ಯರ್ಥಿಗಳು ಗೆದ್ದಿದ್ದರೆ ಮತ್ತೆ ಕೆಲವರು ಸೋತಿದ್ದಾರೆ. ಆರ್ ಆರ್ ನಗರದಲ್ಲಿ ದರ್ಶನ್ ಮತ ಚಲಾಯಿಸಿದ್ದರು.

ಚುನಾವಣೆ ಮುಗಿದ ಕೂಡಲೇ ದರ್ಶನ್ 'ಕಾಟೇರ' ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಅಂತ್ಲೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದಕ್ಕೂ ಮೊದಲು ದರ್ಶನ್ ಉತ್ತರಕಾಂಡ ಪ್ರವಾಸಕ್ಕೆ ಹೋಗಿದ್ದಾರೆ. ನಮ್ಮಿಷ್ಟದ ವೈಲ್ಡ್ ಲೈಫ್ ಫೋಟೊಗ್ರಫಿಗಾಗಿ ಚಾಲೆಂಜಿಂಗ್ ಸ್ಟಾರ್ ಕ್ಯಾಮರಾ ಹೆಗಲೇರಿಸಿಕೊಂಡು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ಸುತ್ತಾಡುತ್ತಿದ್ದಾರೆ. ದರ್ಶನ್ ಸಫಾರಿಗೆ ಹೋಗಿರುವ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ನಟ ದರ್ಶನ್ ಫೋಟೊಗ್ರಫಿಯ ಮೂಲಕ ಬರುವ ಹಣವನ್ನು ಇಲಾಖೆ ನೀಡುತ್ತಿದ್ದಾರೆ. ಅವರು ಕ್ಲಿಕ್ಕಿಸಿದ ಫೋಟೊಗಳ ಎಕ್ಸಿಬೀಷನ್ ನಡೆಸಿ ಮಾರಾಟ ಮಾಡಲಾಗುತ್ತದೆ. ಚಿಕ್ಕಂದಿನಿಂದಲೂ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಪ್ರೀತಿ ಹೆಚ್ಚು. ಸಾಕಷ್ಟು ಪ್ರಾಣಿಗಳನ್ನು ಮನೆಯಲ್ಲಿ ಸಾಕಿರುವ ದರ್ಶನ್, ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಅದೇ ರೀತಿ ತಮ್ಮ ಸ್ನೇಹಿತರಿಗೆ ಅಭಿಮಾನಿಗಳಿಗೆ ಪ್ರಾಣಿ, ಪಕ್ಷಿ ದತ್ತು ತೆಗೆದುಕೊಳ್ಳಲು ಮನವಿ ಮಾಡುತ್ತಾರೆ.

ವೈಲ್ಡ್ಲೈಫ್ ಫೋಟೊಗ್ರಫಿಗಾಗಿ ದರ್ಶನ್ ಕಬಿನಿ, ಬಂಡೀಪುರಕ್ಕೆ ಆಗ್ಗಿಂದಾಗ್ಗೆ ಭೇಟಿ ಕೊಡುತ್ತಾರೆ. ಈ ಹಿಂದೆ ಆಫ್ರಿಕಾ ಕಾಡಿನಲ್ಲೂ ಸುತ್ತಾಡಿ ಬಂದಿದ್ದರು. ಸದ್ಯ ಉತ್ತರಕಾಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿ, ಪಕ್ಷಿಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ತುಂಬನೇರಳೆ ಹಳ್ಳಿಯಲ್ಲಿ 'ಕಾಟೇರ' ಕೊನೆ ಶೆಡ್ಯೂಲ್ ಶೂಟಿಂಗ್ ಮುಕ್ತಾಯವಾಗಿತ್ತು. ತರುಣ್ ಸುಧೀರ್ ಮತ್ತವರ ತಂಡ ಹೊಸ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದಾರೆ.
ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳ ಹಿನ್ನೆಲೆಯಲ್ಲಿ 'ಕಾಟೇರ' ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳುತ್ತಿದ್ದು ಅಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮ ವಹಿಸುತ್ತಿದೆ. ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದು ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು ತಾರಾಗಣದಲ್ಲಿದ್ದಾರೆ. ಸುಧಾಕರ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.
ರಾಕ್ಲೈನ್ ವೆಂಕಟೇಶ್ 'ಕಾಟೇರ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್ ನಟನೆಯ 'ರಾಜವೀರ ಮದಕರಿ ನಾಯಕ' ಚಿತ್ರವನ್ನು ಇದೇ ಸಂಸ್ಥೆಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರವನ್ನು ಕೈಬಿಟ್ಟು 'ಕಾಟೇರ' ಕೈಗೆತ್ತಿಕೊಳ್ಳಲಾಗಿತ್ತು. D56 ಟೈಟಲ್ನಲ್ಲಿ ಸಿನಿಮಾ ಶುರುವಾಗಿತ್ತು. ದರ್ಶನ್ ಹುಟ್ಟುಹಬ್ಬ ಸಂಭ್ರಮದಲ್ಲಿ ಟೈಟಲ್ ಘೋಷಣೆ ಆಗಿತ್ತು. ದರ್ಶನ್ ಲುಂಗಿ ಉಟ್ಟು, ಕತ್ತಿ ಹಿಡಿದು 'ಕಾಟೇರ'ನಾಗಿ ಅಬ್ಬರಿಸೋಕೆ ಬರ್ತಿದ್ದಾರೆ.


Click it and Unblock the Notifications











