ಮಡಿಕೇರಿ, ನಾಗರಹೊಳೆಗೆ 'ಗಜ'ಪಡೆ ಜಾಲಿ ಟ್ರಿಪ್: ದರ್ಶನ್ ತಂಡದಲ್ಲಿ ಹೊಸ ಹೊಸ ಮುಖಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿನ ಸಮಯದಲ್ಲಿ ಸ್ನೇಹಿತರ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಾರೆ. ಟ್ರಿಪ್, ಸಫಾರಿ, ವೈಲ್ಡ್ಲೈಫ್ ಫೋಟೊಗ್ರಫಿ ಅಂತೆಲ್ಲಾ ಕಳೆದು ಹೋಗ್ತಾರೆ. ಸದ್ಯ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿರುವ ಅಭಿಮಾನಿಗಳ ಪ್ರೀತಿಯ ದಾಸ ಸ್ನೇಹಿತರ ಜೊತೆ ಮಡಿಕೇರಿ, ನಾಗರಹೊಳೆಗೆ ಸಣ್ಣ ಪ್ರವಾಸ ಹೋಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ನಟ ದರ್ಶನ್ಗೆ ಚಂದನವನದಲ್ಲಿ ದೊಡ್ಡ ಸ್ನೇಹಿತರ ಬಳಗ ಇದೆ. ಚಿತ್ರರಂಗದ ನಂಟೇ ಇಲ್ಲದ ಸ್ನೇಹಿತರು ಕೂಡ ಸಾಕಷ್ಟು ಜನ ಇದ್ದಾರೆ. ಮಡಿಕೇರಿಯಲ್ಲೂ ಒಂದಷ್ಟು ಜನ ಸ್ನೇಹಿತರಿದ್ದಾರೆ. ನೇರ ನಡೆ ನುಡಿಯವರು ಅವರಿಗೆ ಬಹಳ ಬೇಗ ಸ್ನೇಹಿತರಾಗಿಬಿಡುತ್ತಾರೆ. ಒಮ್ಮೆ ಸ್ನೇಹ ಹುಟ್ಟಿದರೆ ಮುಗೀತು, ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ಅದೇ ರೀತಿ ದುಶ್ಮನಿ ಅಂದ್ರೆ ದುಶ್ಮನಿ. ಸ್ನೇಹಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎನ್ನುವ ದಾಸ ಅದೇ ಸ್ನೇಹ ಉಳಿಸಿಕೊಳ್ಳದವರನ್ನು ದೂರ ಇಟ್ಟುಬಿಡುತ್ತಾರೆ. ಅದರಲ್ಲಿ ಯಾವುದೇ ಮುಲಾಜಿಲ್ಲ.

ಶಾಲೆ ದಿನಗಳ ಸ್ನೇಹಿತರಿಂದ ಹಿಡಿದು ಮೊನ್ನೆ ಮೊನ್ನೆ ಕೈ ಜೋಡಿಸಿದವರವರೆಗೆ ಸಾಕಷ್ಟು ಜನರೊಟ್ಟಿಗೆ ದರ್ಶನ್ ಸ್ನೇಹ ಮುಂದುವರೆದಿದೆ. ಆಗಾಗ್ಗೆ ಭೇಟಿ, ಸೆಲೆಬ್ರೇಷನ್ ಮಾಮೂಲು. ಆ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ದರ್ಶನ್ ಮಡಿಕೇರಿ, ನಾಗರ ಹೊಳೆ ಪ್ರವಾಸ ಅಭಿಮಾನಿಗಳ ಗಮನ ಸೆಳೆದಿದೆ. 2 ಕಾರ್ಗಳಲ್ಲಿ ಗಜಪಡೆ ಸುತ್ತಾಟ ನಡೆಸುತ್ತಿದೆ.

ಮಡಿಕೇರಿಯಲ್ಲಿ ಗಜಪಡೆ
ತಮ್ಮ ಕೆಂಪುಬಣ್ಣದ ಜೀಪ್(ಥಾರ್) ಏರಿದ ದರ್ಶನ್ ಮಡಿಕೇರಿ ಪ್ರವಾಸ ಕೈಗೊಂಡಿದ್ದಾರೆ. ಮತ್ತೊಂದು ಜೀಪ್ ಹಿಂಬಾಲಿಸಿದೆ. ಇನ್ನು ಅಲ್ಲಿಗೆ ತಲುಪುತ್ತಿದ್ದಂತೆ ಸ್ನೇಹಿತರೊಟ್ಟಿಗೆ ಕ್ಯಾಮರಾಗೆ ದಾಸ ಪೋಸ್ ನೀಡಿದ್ದಾರೆ. ಮಡಿಕೇರಿಯಿಂದ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ದರ್ಶನ್ ಪ್ರಾಣಿ ಪಕ್ಷಿ ಪ್ರೀತಿ ಎಲ್ಲರಿಗೂ ಗೊತ್ತೇಯಿದೆ. ಇನ್ನು ನಾಗರಹೊಳೆಯಲ್ಲಿ ಸಫಾರಿಗೆ ಹೋಗಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ತಂಡದಲ್ಲಿ ಹೊಸ ಮುಖಗಳು
ಮೊದಲೇ ಹೇಳಿದಂತೆ ದರ್ಶನ್ ಆಪ್ತ ಬಳಗದಲ್ಲಿ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಆದರೆ ಇತ್ತೀಚೆಗೆ ಅವರೊಟ್ಟಿಗೆ ಹೊಸ ಹೊಸ ಸ್ನೇಹಿತರು ಕಾಣಿಸಿಕೊಳ್ಳುತ್ತಿದ್ದಾರೆ. ನಟ ಯಶಸ್ ಸೂರ್ಯ ಮಾತ್ರ ಸದಾ ದರ್ಶನ್ ಜೊತೆಗಿರುತ್ತಾರೆ. ಇನ್ನು ಈ ಬಾರಿ ಗಜಪಡೆಯಲ್ಲಿ ಅಪ್ಪು ಪಪ್ಪು ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದ ಸ್ನೇಹಿತ್ ಕೂಡ ಇದ್ದಾರೆ. ಇನ್ನು ಮೊದಲ ಆಶಾಡ ಶುಕ್ರವಾರ ಮೈಸೂರು ಚಾಮುಂಡಿ ಬೆಟ್ಟಕ್ಕೂ ದರ್ಶನ್ ಭೇಟಿ ಕೊಡುತ್ತಾರೆ ಎನ್ನಲಾಗ್ತಿದೆ.
ಗಜಪಡೆಯಲ್ಲಿ ವಿನೀಶ್
ಇನ್ನು ಈ ಬಾರಿ ದರ್ಶನ್ ಪ್ರವಾಸಕ್ಕೆ ತಮ್ಮ ಪುತ್ರ ವಿನೀಶ್ನ ಕೂಡ ಕರೆದೊಯ್ದಿದ್ದಾರೆ. ವಿನೀಶ್ ಕೂಡ ಗಜಪಡೆಯ ಜೊತೆಗೆ ಫೋಟೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನೊಟ್ಟಿಗೆ ದರ್ಶನ್ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಶಾಲೆಗೆ ಹೋಗುತ್ತಿರುವ ವಿನೀಶ್ 'ಯಜಮಾನ' ಚಿತ್ರದ 'ಶಿವನಂದಿ' ಹಾಡಿನ ಸಣ್ಣ ಝಲಕ್ನಲ್ಲಿ ಕಾಣಿಸಿಕೊಂಡಿದ್ದರು. ವಿನೀಶ್ ಸಿನಿ ಆರಂಗೇಟ್ರಂ ಬಗ್ಗೆ ಕೂಡ ಈ ಹಿಂದೆ ದರ್ಶನ್ ಸುಳಿವು ನೀಡಿದ್ದರು.
'ಕಾಟೇರ' ಚಿತ್ರದಲ್ಲಿ ದರ್ಶನ್
ಸದ್ಯ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ರಾಕ್ಲೈವನ್ ವೆಂಕಟೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 70ರ ದಶಕದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಸಾಕಷ್ಟು ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ.


Click it and Unblock the Notifications