ಗೋಶಾಲೆಯಲ್ಲಿ ಚಾಲೆಂಜಿಂಗ್ ಸ್ಟಾರ್: ವಿಶ್ವದರ್ಜೆಯ ಹಸು, ಎಮ್ಮೆ, ಹೋರಿ ನೋಡಿ ಪುಳಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು 'ಕಾಟೇರ' ಚಿತ್ರಕ್ಕಾಗಿ ಕಾಯ್ತಿದ್ದಾರೆ. ನಟ ದರ್ಶನ್ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. ತರುಣ್ ಸುಧೀರ್ ಸಣ್ಣ ಸಣ್ಣ ಶೆಡ್ಯೂಲ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸ್ತಿದ್ದಾರೆ. ಇತ್ತೀಚೆಗೆ ಸ್ನೇಹಿತರ ಜೊತೆ ವಿರಾಜಪೇಟೆ ಪ್ರವಾಸ ಹೋಗಿದ್ದ ದರ್ಶನ್ ಈಗ ಅನಂತಪುರ ಜಿಲ್ಲೆಯ ಪೇನಕೊಂಡ ಗ್ರಾಮದಲ್ಲಿರುವ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ.
ನಟ ದರ್ಶನ್ ಪ್ರಾಣಿ, ಪಕ್ಷಿ ಪ್ರೀತಿ ಎಂಥದ್ದು ಅನ್ನೋದು ಗೊತ್ತೇಯಿದೆ. ತಮ್ಮದೇ ಫಾರ್ಮ್ ಹೌಸ್ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಅರಣ್ಯ ಇಲಾಖೆ ರಾಯಭಾರಿ ಆಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿರುತ್ತಾರೆ. ವೈಲ್ಡ್ ಲೈಫ್ ಫೋಟೊಗ್ರಫಿ ಮಾಡಿ ಅದರಿಂದ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಪ್ರಾಣಿ, ಪಕ್ಷಿಗಳನ್ನು ಸಾಕುವ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ದರ್ಶನ್ ಯಾವುದೇ ಊರಿಗೆ ಹೋದರೂ ಅಲ್ಲಿನ ಗೋಶಾಲೆ, ಮೃಗಾಲಯಗಳಿಗೆ ಭೇಟಿ ಕೊಡುತ್ತಾರೆ.

ಒಂದ್ಕಾಲದಲ್ಲಿ ಹಸು ಕಟ್ಟಿ ಹಾಲು ಕರೆದು ದರ್ಶನ್ ಜೀವನ ಸಾಗಿಸಿದ್ದರು. ಅದನ್ನು ಎಂದು ಮರೆಯುವುದಿಲ್ಲ. ಅದೇ ಕಾರಣಕ್ಕೆ ಹೈನುಗಾರಿಕೆ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಯಾವುದೇ ಊರಿಗೆ ಹೋದರೂ ಅಲ್ಲಿ ಯಾರಾದರೂ ವಿಶೇಷ ತಳಿಯ ಪ್ರಾಣಿಗಳನ್ನು ಸಾಕಿದ್ದಾರಾ? ಎಂದು ತಿಳಿದುಕೊಂಡು ಹೋಗಿ ನೋಡಿ ಬರುತ್ತಾರೆ. ಸಾಧ್ಯವಾದರೆ ಖರೀದಿಸಿ ತಮ್ಮ ಫಾರ್ಮ್ಹೌಸ್ಗೆ ತರುತ್ತಾರೆ.
ಹೆಬ್ಬೇವು ಗೋಶಾಲೆಗೆ ದರ್ಶನ್ ಭೇಟಿ
ದರ್ಶನ್ ಈಗ ತಮ್ಮ ಗೆಳೆಯರೊಂದಿಗೆ ಅನಂತಪುರ ಜಿಲ್ಲೆಯ ಪೇನಕೊಂಡ ಗ್ರಾಮದಲ್ಲಿರುವ ಅಮಿತ್ ಕಿಶನ್ ಮತ್ತು ಆಶ್ರಿತ್ ಕಿಶನ್ರವರ ಹೆಬ್ಬೇವು ಗೋಶಾಲೆಗೆ ಭೇಟಿ ನೀಡಿದ್ದರು. ಆ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಮಿತ್ ಕಿಶನ್ ಮತ್ತು ಆಶ್ರಿತ್ ಕಿಶನ್ ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. 6 ಹಸುಗಳಿಂದ ಶುರುವಾದ ಫಾರಂನಲ್ಲಿ ಈಗ 700ಕ್ಕೂ ಅಧಿಕ ರಾಸುಗಳಿವೆ. ವಿಶ್ವ ದರ್ಜೆಯ ಹೋರಿಗಳು ಈ ಫಾರ್ಮ್ನಲ್ಲಿದೆ. ಅದನ್ನೆಲ್ಲಾ ನೋಡಿ ನಟ ದರ್ಶನ್ ಮಾಹಿತಿ ಪಡೆದಿದ್ದಾರೆ.

ವಿವಿಧ ರಾಜ್ಯಗಳ ಹಸು, ಹೋರಿಗಳು
ಹೆಬ್ಬೇವು ಗೋಶಾಲೆಯಲ್ಲಿ ಗಿರ್, ಕಾಂಕ್ರೆಜ್ ತಳಿಯ ಹೋರಿಗಳು, ಹಸುಗಳು ಇವೆ. ಜಾಫರಾಬಾದಿ ತಳಿಯ ಎಮ್ಮೆಗಳನ್ನು ಕೂಡ ಸಾಕಲಾಗುತ್ತಿದೆ. ಲಕ್ಷಾಂತರ ಬೆಲೆಯ ಹಸು, ಹೋರಿಗಳು ಈ ಫಾರ್ಮ್ನಲ್ಲಿವೆ. ಸ್ವತಃ ಅಮಿತ್ ಕಿಶನ್ ತಮ್ಮ ಫಾರ್ಮ್ನಲ್ಲಿರುವ ವಿವಿಧ ತಳಿಗಳ ರಾಸುಗಳ ಪರಿಚಯ ಮಾಡಿಸಿದ್ದಾರೆ. ನಟ ದರ್ಶನ್ ಅಂತೂ ಅವುಗಳನ್ನೆಲ್ಲಾ ನೋಡುತ್ತಾ ತಮ್ಮದೇ ಲೋಕದಲ್ಲಿ ಕಳೆದು ಹೋಗಿದ್ದಾರೆ. ನಂತರ ಆ ಪ್ರಾಣಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಇತ್ತೀಚೆಗೆ ವಿರಾಜಪೇಟೆ ಪ್ರವಾಸ
ಎರಡು ವಾರದ ಹಿಂದೆಯಷ್ಟೆ ನಟ ದರ್ಶನ್ ಸ್ನೇಹಿತರ ಜೊತೆ ಕಾಕಬ್ಬೆ ವಿರಾಜಪೇಟೆ ಪ್ರವಾಸಕ್ಕೆ ಹೋಗಿಬಂದಿದ್ದರು. ಆ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿದ್ದರು. ಈ ಬಾರಿ ಮಗನನ್ನು ಕೂಡ ಸ್ನೇಹಿತರ ಜೊತೆ ಕರೆದುಕೊಂಡು ಹೋಗಿದ್ದರು. ಜೀಪ್ ಏರಿ ಆಫ್ ರೋಡ್ ಟ್ರಿಪ್ ಮಾಡಿ ಬೆಟ್ಟ, ಗುಡ್ಡ, ಹೊಳೆ ಸುತ್ತಾಡಿ ಬಂದಿದ್ದರು. ನಂತರ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದರು.
2 ಸಿನಿಮಾಗಳಲ್ಲಿ ದರ್ಶನ್
ಸದ್ಯ ನಟ ದರ್ಶನ್ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರ ಆದರೂ ದರ್ಶನ್ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಭಾರೀ ಕುತೂಹಲ ಮೂಡಿಸಿದೆ. ಇನ್ನು ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications










