ಆಪ್ತರ ಜೊತೆ ಎತ್ತಿನ ಬಂಡಿ ಏರಿದ ದರ್ಶನ್: ದತ್ತು ಪುತ್ರನನ್ನು ನೋಡಿ ಹಿರಿಹಿರಿ ಹಿಗ್ಗಿದ ವಿಜಯಲಕ್ಷ್ಮಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 29ಕ್ಕೆ ಸಿನಿಮಾ ತೆರೆಗೆ ಬರಲಿದೆ. ಮಂಡ್ಯದಲ್ಲಿ ಶನಿವಾರ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಲು ಸಿದ್ಧತೆ ನಡೀತಿದೆ.
ನಟ ದರ್ಶನ್ ಸಿನಿಮಾ ಕೆಲಸಗಳನ್ನು ಬಿಟ್ಟು ಬಿಡುವಿನ ಸಮಯವನ್ನು ತಮ್ಮ ಆಪ್ತರ ಜೊತೆ ಕಳೆಯುತ್ತಾರೆ. ಇದೀಗ ದರ್ಶನ್ ಸ್ನೇಹಿತರು, ಮಡದಿ, ಮಗನ ಜೊತೆ ಎತ್ತಿನ ಬಂಡಿ ಏರಿ ಮೈಸೂರಿನಲ್ಲಿ ಸುತ್ತಾಡಿರುವ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿದೆ. ಅಭಿಮಾನಿಗಳ ಇನ್ಸ್ಟಾ- ಫೇಸ್ಬುಕ್ ಸ್ಟೋರಿ, ವಾಟ್ಸಪ್ ಸ್ಟೇಟಸ್ನಲ್ಲಿ ರಾರಾಜಿಸುತ್ತಿದೆ.

ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್ಹೌಸ್ನಿಂದ ಎತ್ತಿನ ಬಂಡಿಗಳನ್ನು ಏರಿ ಮೈಸೂರು ಮೃಗಾಲಯಕ್ಕೆ ಆಪ್ತರ ಜೊತೆ ದರ್ಶನ್ ಹೋಗಿ ಬಂದಿದ್ದಾರೆ. ದರ್ಶನ್ ಎತ್ತಿನ ಬಂಡಿ ಓಡಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಇನ್ನು ಮಗ ವಿನೀಸ್ ಕುದುರೆ ಏರಿ ಎತ್ತಿನ ಬಂಡಿ ಹಿಂಬಾಲಿಸಿದ್ದಾನೆ. ಮೃಗಾಲಯದಲ್ಲಿ ವಿಶೇಷ ವಿಶೇಷ ಸದಸ್ಯನನ್ನು ಎಲ್ಲರೂ ಭೇಟಿ ಮಾಡಿ ಬಂದಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮೀ ದರ್ಶನ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಾಣಿ, ಪಕ್ಷಿ ಬಗ್ಗೆ ನಟ ದರ್ಶನ್ ಪ್ರೀತಿ, ಕಾಳಜಿ ಏನು ಎಂಥದ್ದು ಎನ್ನುವುದು ಗೊತ್ತೇಯಿದೆ. ತಮ್ಮದೇ ಫಾರ್ಮ್ಹೌಸ್ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿರುವ ದರ್ಶನ್ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುತ್ತಾರೆ. ತಮ್ಮ ಆಪ್ತರು, ಅಭಿಮಾನಿಗಳು ಕೂಡ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡುತ್ತಾರೆ. ಮೈಸೂರಿನಲ್ಲಿ ದರ್ಶನ್ 10 ವರ್ಷಗಳಿಂದ ಆನೆ ಮರಿಯೊಂದನ್ನು ದತ್ತು ಪಡೆದಿದ್ದಾರೆ. ಈ ಬಾರಿ ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ಆ ಆನೆಯನ್ನು ನೋಡಿ ಖುಷಿಯಾಗಿದ್ದಾರೆ.
ಆನೆಗೆ ಮಾದೇಶ ಎಂದು ಹೆಸರಿಡಲಾಗಿದೆ. "ಮಾದೇಶ, ಒಂದು ದಶಕದಿಂದ ನಮ್ಮ ಕುಟುಂಬದ ಪ್ರೀತಿಯ ಸದಸ್ಯ, ನಾನು ಈ ಚಿತ್ರಗಳನ್ನು ಹಿಂತಿರುಗಿ ನೋಡಿದಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ನಮ್ಮ ಪ್ರೀತಿಯ ವಿನೀಶ್ ಸುಂದರ ಯುವಕನಾಗಿ ರೂಪುಗೊಂಡಿದ್ದಾನೆ. ಹಾಗೂ ನಮ್ಮ ದತ್ತುಪುತ್ರ ಮಾದೇಶ ದಷ್ಟಪುಷ್ಟವಾಗಿ ಬೆಳೆದಿದ್ದಾನೆ" ಎಂದು ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. 10 ವರ್ಷಗಳ ಹಿಂದೆ ಮರಿಯಾನೆಯನ್ನು ನೋಡಿದಾಗ ಕ್ಲಿಕ್ಕಿಸಿದ ಫೋಟೊ ಜೊತೆಗೆ ಹೊಸದಾಗಿ ಹಿಡಿದ ಫೋಟೊ ಕೊಲಾಜ್ ಮಾಡಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಪ್ರವಾಸಿಗರು ಮೃಗಾಲಯಗಳಿಗೆ ಭೇಟಿ ಕೊಡದೇ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಮಯದಲ್ಲಿ ನಟ ದರ್ಶನ್ ಮೃಗಾಲಯದ ಜೀವಿಗಳನ್ನು ದತ್ತು ಪಡೆಯಲು ಮನವಿ ಮಾಡಿದ್ದರು. ದರ್ಶನ್ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸಾಕಷ್ಟು ಜನ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದರು.
ನಟ ದರ್ಶನ್ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ರಾಯಭಾರಿಯಾಗಿಯೂ ನೇಮಕಗೊಂಡಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ಈ ಸತ್ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸದ್ಯ 'ಕಾಟೇರ' ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗಿದೆ. ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಿಸಿದ್ದು ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್ ಗ್ಲಿಂಪ್ಸ್, ಎರಡು ಲಿರಿಕಲ್ ಸಾಂಗ್ಸ್ ಹಾಗೂ ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ಅಂತೂ 15 ಮಿಲಿಯನ್ಗೂ ಅಧಿಕ ವೀವ್ಸ್ ಪಡೆದು ಸದ್ದು ಮಾಡ್ತಿದೆ.


Click it and Unblock the Notifications











