Darshan Meets Yuva: 'ಯುವ' ಚಿತ್ರತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವೀಟ್ ಶಾಕ್
ಸ್ಟಾರ್ ನಟರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೆಯುತ್ತಲೇ ಇರುತ್ತದೆ. ಆನ್ಲೈನ್ ಮಾತ್ರವಲ್ಲ ಕೆಲವೊಮ್ಮೆ ಆಫ್ಲೈನ್ನಲ್ಲೂ ಇಂತಹ ಫ್ಯಾನ್ಸ್ ವಾರ್ ಸದ್ದು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ದೊಡ್ಮೆನೆ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಹೊಸಪೇಟೆ ಘಟನೆ ಬಳಿಕ ಅದು ತಾರಕಕ್ಕೇರಿತ್ತು.
ಗೊತ್ತಿದ್ದು ಗೊತ್ತಿಲ್ಲದೆ ಕೆಲವೊಮ್ಮೆ ನಟರ ಹೇಳಿಕೆಗಳು ಇಂತಹ ಫ್ಯಾನ್ಸ್ ವಾರ್ಗೆ ತುಪ್ಪು ಸುರಿಯುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಅನವಶ್ಯಕ ಫ್ಯಾನ್ಸ್ ವಾರ್ಗೆ ಬ್ರೇಕ್ ಹಾಕಿದ್ದಾರೆ. 'ಯುವ' ಸೆಟ್ಗೆ ಭೇಟಿ ನೀಡಿದ್ದಾರೆ. ಯುವ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರತಂಡದ ಜೊತೆ ಮಾತನಾಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಗರದ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ 'ಯುವ' ಸಿನಿಮಾ ಚಿತ್ರೀಕರಣ ನಡೀತಿದೆ. ಸಿನಿಮಾ ಸೆಟ್ಗೆ ಇದ್ದಕ್ಕಿದ್ದಂತೆ 'ಕಾಟೇರ' ಚಿತ್ರತಂಡ ಎಂಟ್ರಿ ಕೊಟ್ಟಿದೆ. ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರು ಯುವ ರಾಜ್ಕುಮಾರ್, ಸಂತೋಷ್ ಆನಂದ್ ರಾಮ್, ಸಪ್ತಮಿ ಗೌಡ ಜೊತೆ ಕೆಲ ಹೊತ್ತು ಮಾತನಾಡಿದ್ದಾರೆ. ಆ ಫೋಟೊಗಳನ್ನು ಈಗ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 'ಉತ್ತಮ ಬೆಳವಣಿಗೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಯುವ' ಸಿನಿಮಾ ಸೆಟ್ಟೇರಿದ ದಿನದಿಂದ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಮೂಲಕ ಯುವ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರದಲ್ಲಿ 'ಕಾಂತಾರ' ಸಿನಿಮಾ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ದಶಕಗಳಿಂದಲೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕೆಸರೆರಚಾಟ ನಡೆಯುತ್ತಲೇ ಇದೆ. ಆದರೆ ಸೋಶಿಯಲ್ ಮೀಡಿಯಾ ಬಂದಮೇಲೆ ದಿನೇ ದಿನೇ ಅದು ಹೆಚ್ಚಾಗುತ್ತಿದೆ. ಕಲಾವಿದರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲದೇ ಇದ್ದರೂ ಅಭಿಮಾನಿಗಳು ಮಾತ್ರ ನಮ್ಮ ನೆಚ್ಚಿನ ನಟನೇ ಹೆಚ್ಚು ಎಂದು ಬೀಗುವ ಭರದಲ್ಲಿ ಮತ್ತೊಬ್ಬ ನಟನನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚಿಗಂತೂ ನೆಗೆಟಿವ್ ಟ್ಯಾಗ್ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡುವಂತಹ ಕೆಟ್ಟ ಚಾಳಿ ಕೂಡ ಶುರುವಾಗಿದೆ.
ಅಭಿಮಾನಿಗಳ ಹೆಸರಿನಲ್ಲಿ ಕೆಲ ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಕ್ರಿಯೇಟ್ ಮಾಡಿ ಕಲಾವಿದರನ್ನು ಕೆಟ್ಟದಾಗಿ ನಿಂದಿಸುವ ಕೆಲಸವೂ ನಡೀತಿದೆ. 'ಕ್ರಾಂತಿ' ಸಿನಿಮಾ ಪ್ರಚಾರದ ವೇಳೆ ದರ್ಶನ್ ಹಾಗೂ ದೊಡ್ಮನೆ ಅಭಿಮಾನಿಗಳ ನಡುವಿನ ತಿಕ್ಕಾಟ ಎಲ್ಲೆ ಮೀರಿತು. ಇನ್ನು ಚಿತ್ರದ ಸಾಂಗ್ ರಿಲೀಸ್ಗಾಗಿ ದರ್ಶನ್ ಹೊಸಪೇಟೆಗೆ ಭೇಟಿ ನೀಡಿದ್ದರು. ಸಾಂಗ್ ರಿಲೀಸ್ ವೇಳೆ ವೇದಿಕೆ ಮೇಲೆ ನಿಂತಿದ್ದ ದರ್ಶನ್ ಮೇಲೆ ಅಭಿಮಾನಿಗಳ ನಡುವಿನಿಂದ ಚಪ್ಪಲಿ ತೂರಲಾಗಿತ್ತು. ಈ ಘಟನೆ ಭಾರೀ ಸದ್ದು ಮಾಡಿತ್ತು.

ಹೊಸಪೇಟೆ ಘಟನೆ ಬಳಿಕ ಫ್ಯಾನ್ಸ್ ವಾರ್ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಂತಾಗಿದೆ. ಸ್ಯಾಂಡಲ್ವುಡ್ ಕಲಾವಿದರು ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಿದ್ದಾರೆ. ನಟ ದರ್ಶನ್ ಸದ್ಯ 'ಕಾಟೇರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ರಾಕ್ಲೈನ್ ವೆಂಕಟೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ತಂಡ 'ಕಾಟೇರ' ಚಿತ್ರ ಕಟ್ಟಿಕೊಡುತ್ತಿದೆ. ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. 'ಕಾಟೇರ' ಚಿತ್ರಕ್ಕೂ ಮುನ್ನ ದರ್ಶನ್ ನಟನೆಯ 'ಗರಡಿ' ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











