Darshan: ಬ್ರಿಟನ್ನಲ್ಲಿ ಫ್ರೆಂಡ್ಸ್ ಜೊತೆ ದರ್ಶನ್ ಮೋಜು ಮಸ್ತಿ.. ಫೋಟೊಗಳು ಫುಲ್ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದರು. ಸ್ನೇಹಿತರ ಜೊತೆ ಕಳೆದ 5 ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ಬ್ರಿಟನ್ನಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಿಕ್ಕ ಕನ್ನಡ ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. 'ಕಾಟೇರ' ಚಿತ್ರದ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಯೂರೋಪ್ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ದಾಸನ ಜಾಲಿ ಟ್ರಿಪ್ ಫೋಟೊಸ್ ವೈರಲ್ ಆಗ್ತಿದೆ.
ಕಳೆದ ವಾರವಷ್ಟೆ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ಕುಂಟುತ್ತಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ನಮ್ ಬಾಸ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂದು ಮರುದಿನವೇ ಮತ್ತೆ 'ಕಾಟೇರ' ಸೆಟ್ಗೆ ಹೋಗಿದ್ದರು. ಅದರ ಬೆನ್ನಲ್ಲೇ ಮಂಗಳವಾರ ದರ್ಶನ್ ಬ್ರಿಟನ್ ಕಡೆ ಹೊರಟರು. ಬ್ರಿಟನ್ನ ಪ್ರಮುಖ ಜಾಗಗಳಲ್ಲಿ ದರ್ಶನ್ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ.

ಯುಕೆ ಟವರ್ ಬ್ರಿಡ್ಜ್, ಕಾರ್ನಬಿ ಮುಂಭಾಗದಲ್ಲಿ ಹೀಗೆ ಹಲವು ಜಾಗಗಳಲ್ಲಿ ದರ್ಶನ್ ಕಾಲ ಕಳೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ಗೆ ಸ್ನೇಹಿತರಾದ ಸಚ್ಚಿದಾನಂದ ಸೇರಿದಂತೆ ಮತ್ತಿಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ಸಚ್ಚಿದಾನಂದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಟ ದರ್ಶನ್ ಹಾಗೂ ಸಂಸದೆ ಸುಮಲತಾ ಅಂಬರೀಷ್ ಸಚ್ಚಿದಾನಂದ ಪರ ಪ್ರಚಾರ ಮಾಡಿದ್ದರು. ಆದರೆ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಗೆಲುವು ಸಾಧಿಸಿದ್ದರು.
ಇನ್ನು ಸ್ಟೈಲಿಶ್ ಲುಕ್ನಲ್ಲಿ ದರ್ಶನ್ ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಮತ್ತೆ ಬಾಕ್ಸಾಫೀಸ್ ಸುಲ್ತಾನ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿ ರಾಕ್ಲೈನ್ ವೆಂಕಟೇಶ್. ಅದಕ್ಕೆ ತಕ್ಕಂತೆ ಆದಷ್ಟು ಬೇಗ ಸಿನಿಮಾ ಫೈನಲ್ ಕಾಪಿ ರೆಡಿ ಮಾಡಲು ತರುಣ್ ಅಂಡ್ ಟೀಂ ಶ್ರಮಿಸುತ್ತಿದೆ.
ಶೀಘ್ರದಲ್ಲೇ 'ಕಾಟೇರ' ಅಪ್ಟೇಟ್ ಸಿಗುವ ನಿರೀಕ್ಷೆಯಿದೆ. ಇತ್ತೀಚೆಗೆ ತರುಣ್ ಸುಧೀರ್ ಬಳಿ ಮಾಧ್ಯಮದವರು ಇದೇ ಪ್ರಶ್ನೆ ಕೇಳಿದಾಗ ಶೀಘ್ರದಲ್ಲೇ ಹೇಳ್ತೀನಿ ಎಂದು ಹೇಳಿದ್ದರು. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ D56 ಸಿನಿಮಾ ಸೆಟ್ಟೇರಿತ್ತು. ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಈ ಬಾರಿ ವರಲಕ್ಷ್ಮಿ ಹಬ್ಬಕ್ಕೆ ಚಿತ್ರದ ಟೀಸರ್ ಅಥವಾ ಹೊಸ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆಯಿದೆ. ಕೊನೆ ಪಕ್ಷ ಗಣೇಶ ಹಬ್ಬಕ್ಕೆ ಟೀಸರ್ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಟೈಟಲ್ನಿಂದಲೇ 'ಕಾಟೇರ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ತರುಣ್ ಹಾಗೂ ಜಡೇಶ್ ಹಂಪಿ ಈ ಕಥೆ ಮಾಡಿದ್ದಾರೆ. ಉಳುವವನೇ ಭೂಮಿಕ ಒಡೆಯ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳ ಹಿನ್ನೆಲೆಯಲ್ಲಿ 'ಕಾಟೇರ'ನ ಕಥೆ ಸಾಗಲಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದೆ. ದರ್ಶನ್ ಲುಂಗಿಯಲ್ಲಿ ಉಟ್ಟು ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ.
'ರಾಬರ್ಟ್' ಸಿನಿಮಾ ಕಾಂಬಿನೇಷನ್ನಲ್ಲೇ 'ಕಾಟೇರ' ಸಿನಿಮಾ ನಿರ್ಮಾಣವಾಗುತ್ತಿದೆ. ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶ್ರೀನಿವಾಸ್ ಮೂರ್ತಿ, ಜಗಪತಿ ಬಾಬು, ಕುಮಾರ್ ಗೋವಿಂದ್, ಬಿರಾದಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಈ ಪೀರಿಯಡ್ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕಿದೆ.
'ಕಾಟೇರ' ಚಿತ್ರಕ್ಕೂ ಮುನ್ನ 'ಗರಡಿ' ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಯಶಸ್ ಸೂರ್ಯ ಹೀರೊ ಆಗಿ ನಟಿಸಿದ್ದು ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನ ಸಹೋದರನಾಗಿ ದರ್ಶನ್ ಅಬ್ಬರಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವವರು ದರ್ಶನ್ ಕ್ಲೈಮ್ಯಾಕ್ಸ್ ಫೈಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











