Darshan: "ಕಾಲಾಯ ತಸ್ಮಯ್ ನಮಃ": ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಢೀರ್ ಪೋಸ್ಟ್
ಕಳೆದೊಂದು ವಾರದಿಂದ ನಟ ದರ್ಶನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳ ಜೊತೆಗಿನ ವಿವಾದಕ್ಕೆ ಕ್ಷಮೆ ಕೇಳಿ ಇತಿಶ್ರೀ ಹಾಡಿದ್ದಾರೆ. ಇನ್ನು ಇತ್ತೀಚೆಗೆ ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿಯಲ್ಲಿ ನಟ ಸುದೀಪ್ಗೆ ಮುಖಾಮುಖಿ ಆಗಿದ್ದಾರೆ. ಯಾವುದು ಅಷ್ಟು ಸುಲಭವಾಗಿ ನಡೆಯಲ್ಲ ಅಂತ ಕೆಲವರು ಅಂದುಕೊಂಡಿದ್ದರೋ ಅದು 3 ದಿನಗಳ ಅಂತರದಲ್ಲಿ ನಡೆದಿದೆ.
ದರ್ಶನ್ ಮಾಧ್ಯಮಗಳ ಕ್ಷಮೆ ಕೇಳಿದನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಇನ್ನು ಆದಷ್ಟು ಬೇಗ ಸುದೀಪ್ - ದರ್ಶನ್ ಒಂದಾಗಬೇಕು ಎಂದು ಆಶಿಸುತ್ತಿದ್ದಾರೆ. ಇದೆಲ್ಲದರ ನಡುವೆ ನಟ ದರ್ಶನ್ "ಕಾಲಾಯ ತಸ್ಮಯ್ ನಮಃ" ಎಂದು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಹೆಬ್ಬೆವು ಡೇರಿ ಫಾರ್ಮ್ನಿಂದ ಖರೀದಿಸಿ ತಂದ ಜಾನುವಾರಗಳು ಜೊತೆ ಕ್ಲಿಕ್ಕಿಸಿದ ಫೋಟೊ ಹಂಚಿಕೊಂಡಿದ್ದಾರೆ. ಬೆಳ್ಳಂ ಬೆಳಗ್ಗೆ ದರ್ಶನ್ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ನೆಚ್ಚಿನ ನಟ ಬರೆದುಕೊಂಡಿರುವ "ಕಾಲಾಯ ತಸ್ಮಯ್ ನಮಃ" ಎನ್ನುವ ಸಂಸ್ಕೃತ ಸಾಲಿನ ಅರ್ಥ ಏನು ಎಂದು ಹುಡುಕುತ್ತಿದ್ದಾರೆ. ಆ ಸಾಲಿಗೆ "ಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯಮಾಡಿ ಮುಂದೆ ಸಾಗುತ್ತೇವೆ. ಅದು ನಿಜವೇ. ಕಾಲ ಜೀವನದ ಪಾಠ ಕಲಿಸುತ್ತದೆ, ಆದರೆ ಮನಸ್ಸಿನೊಳಗೆ ಅಡಗಿರುವ ನೋವು ಕಾಲದ ಜೊತೆ ಸಹ ಸಾಯುವುದಿಲ್ಲ, ಅದು ಸಾಯುವುದು ನಾವು ಸತ್ತಾಗಲೇ." ಎನ್ನುವ ಒಳಾರ್ಥ ಇದೆ.
ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ 60ನೇ ಹುಟ್ಟುಹಬ್ಬಕ್ಕೆ ದರ್ಶನ್ ಹಾಗೂ ಸುದೀಪ್ ಇಬ್ಬರೂ ಹಾಜರಾಗಿದ್ದರು. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಕೇಕ್ ಕಟ್ಟಿಂಗ್ ವೇಳೆ ದರ್ಶನ್- ಸುದೀಪ್ ಇಬ್ಬರು ವೇದಿಕೆ ಏರಿದ್ದು ನೋಡಿ ಮಾತನಾಡುತ್ತಾರೇನೋ ಎಂದು ಕಾದಿದ್ದರು. ಆದರೆ ಪಾರ್ಟಿಯಲ್ಲಿ ಇಬ್ಬರು ಮಾತನಾಡಲಿಲ್ಲ. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಬಂದು ಹೋಗಿದ್ದರು. ಆದರೆ ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಇವರಿಬ್ಬರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದರು.
ಶೀಘ್ರದಲ್ಲೇ ದರ್ಶನ್ ಹಾಗೂ ಸುದೀಪ್ ಒಂದಾಗುತ್ತಾರೆ ಎನ್ನಲಾಗ್ತಿದೆ. ನಟಿ ಸುಮಲತಾ ಮಾತನಾಡಿ "ಇದು ನಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇ. ಇದು ತೀರಾ ಪರ್ಸನಲ್ ವಿಚಾರ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ" ಎಂದಿದ್ದಾರೆ. ಒಟ್ನಲ್ಲಿ ಇಬ್ಬರೂ ಆದಷ್ಟು ಬೇಗ ಕೈ ಜೋಡಿಸುತ್ತಾರೆ ಅಂತ್ಲೇ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಪೋಸ್ಟ್ ಕುತೂಹಲ ಮೂಡಿಸಿದೆ.
ದಶಕಗಳ ಹಿಂದೆ ನಟ ದರ್ಶನ್ ಹಾಗೂ ಸುದೀಪ್ ಏಕಕಾಲಕ್ಕೆ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತಮ್ಮದೇ ಹಾದಿಯಲ್ಲೇ ಸ್ಟಾರ್ ಪಟ್ಟಕ್ಕೇರಿದ್ದರು. ನಂತರ ಒಳ್ಳೆ ಸ್ನೇಹಿತರಾದರು. ಆದರೆ ಇದ್ದಕ್ಕಿದಂತೆ ದರ್ಶನ್ ತಮ್ಮಿಬ್ಬರ ಸ್ನೇಹಕ್ಕೆ ಮುಗಿದ ಅಧ್ಯಾಯ ಎಂದುಬಿಟ್ಟಿದ್ದರು. "ನಾನು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ಪೋಸ್ಟ್ ಮಾಡಿ ಶಾಕ್ ಕೊಟ್ಟಿದ್ದರು.
ಆ ಬಳಿಕ ದರ್ಶನ್ ಹಾಗೂ ಸುದೀಪ್ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ. ಸುದೀಪ್ ಹಾಜರಾಗುವ ಕಾರ್ಯಕ್ರಮದಿಂದ ದರ್ಶನ್ ಅಂತರ ಕಾಯ್ದುಕೊಂಡರೆ ದರ್ಶನ್ ಹೋಗುವ ಕಾರ್ಯಕ್ರಮದಿಂದ ಸುದೀಪ್ ದೂರ ಉಳಿಯುತ್ತಿದ್ದರು. ಆದರೆ ಅಂಬಿ ಕುಟುಂಬ ಇಬ್ಬರು ಬಹಳ ಆಪ್ತವಾಗಿದೆ. ಸುಮಲತಾ ಅಂಬರೀಶ್ ಅಂದರೆ ಇಬ್ಬರಿಗೂ ಗೌರವ. ಹಾಗಾಗಿಯೇ ಬರ್ತ್ಡೇ ಪಾರ್ಟಿ ಆಹ್ವಾನ ಮನ್ನಿಸಿ ಇಬ್ಬರು ಹಾಜರಾಗಿದ್ದರು.


Click it and Unblock the Notifications











