Darshan: ಧಾರವಾಡ ಕೃಷಿ ಮೇಳದಲ್ಲೂ ದಾಸನ ಹವಾ: ಕಾಲರ್ ಎಗರಿಸಿದ ಫ್ಯಾನ್ಸ್
ಸಿನಿಮಾ ಬಿಟ್ಟು ಸಾಕಷ್ಟು ವಿಚಾರಗಳಿಂದ ನಟ ದರ್ಶನ್ ಪದೇ ಪದೆ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಪ್ರಾಣಿ-ಪಕ್ಷಿ ಪ್ರೀತಿ, ಕಾರ್, ಬೈಕ್, ಕುದುರೆ ಕ್ರೇಜ್ನಿಂದಲೂ ಗಮನ ಸೆಳೆಯುತ್ತಾರೆ. ಇನ್ನು ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ರಾಯಭಾರಿ ಆಗಿಯೂ ದರ್ಶನ್ ಸೇವೆ ಸಲ್ಲಿಸುತ್ತಿದ್ದಾರೆ.
ಗಣೇಶ ಹಬ್ಬದ ಸಂಭ್ರಮದಲ್ಲಿ 'ಕಾಟೇರ' ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಆದರೆ ವಾರಕ್ಕೂ ಮೊದ್ಲೆ ಅಭಿಮಾನಿಗಳು ಖುಷಿ ಪಡೋಕೆ ಒಂದೊಳ್ಳೆ ಸುದ್ದಿ ಸಿಕ್ಕಿದೆ. ಧಾರಾವಾಡ ಕೃಷಿ ಮೇಳದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಬಾರ್ ನಡೀತಿದೆ. ಪೇಡಾ ನಗರಿ ಧಾರಾವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತರ ರಾಯಭಾರಿ ಡಿ ಬಾಸ್ ಸ್ಟ್ಯಾಚು(ಕಲಾಕೃತಿ) ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಮೇಳದಲ್ಲಿ ಈ ರೀತಿ ಸಿನಿಮಾ ನಟನ ಕಲಾಕೃತಿ ಇಟ್ಟಿರುವುದು ವಿಶೇಷ ಎನ್ನಬಹುದು. ಹಾವೇರಿ ಉತ್ಸವ ರಾಕ್ ಗಾರ್ಡನ್ ಪ್ರದರ್ಶನದ ಮುಂಭಾಗದಲ್ಲಿ ದರ್ಶನ್ ಕಲಾಕೃತಿ ಹಾಕಲಾಗಿದೆ.

ರೈತರ ಹಿತಕ್ಕಾಗಿ ಕೃಷಿ ಇಲಾಖೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ರೈತರಲ್ಲಿ ಸ್ಪೂರ್ತಿ ತುಂಬಲು 2 ವರ್ಷಗಳ ಹಿಂದೆ ರಾಜ್ಯ ಸರ್ಕಾರ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿ ಆಗಿ ನೇಮಿಸಿತ್ತು. ಇನ್ನು ಯಾವುದೇ ಸಂಭಾವನೆ ಇಲ್ಲದೇ ಕೃಷಿ ಇಲಾಖೆಗಾಗಿ ಸೇವೆ ಸಲ್ಲಿಸಲು ದರ್ಶನ್ ಒಪ್ಪಿದ್ದರು. ಕೃಷಿ ಇಲಾಖೆಯ 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು. ಚಿತ್ರರಂಗಕ್ಕೆ ಬರುವುದಕ್ಕು ಮುನ್ನ ದರ್ಶನ್ ಹಸು ಕಟ್ಟಿ ಹಾಲು ಮಾರುತ್ತಿದ್ದರು. ಹಾಗಾಗಿಯೇ ಅವರನ್ನು ಕೃಷಿ ಇಲಾಖೆ ರಾಯಭಾರಿ ಆಗಿ ನೇಮಿಸಲಾಗಿತ್ತು.
ಸೆಪ್ಟೆಂಬರ್ 9 ರಿಂದ 4 ದಿನಗಳ ಕಾಲ ಧಾರವಾಡದಲ್ಲಿ ಕೃಷಿ ಮೇಳ ನಡೆಯುತ್ತಿದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ 'ಕೃಷಿ ಮೇಳ-2023' ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಈ ಬಾರಿ ಮೇಳದಲ್ಲಿ ಫಲಪುಷ್ಪ ಹಾಗೂ ಕೀಟ ಪ್ರಪಂಚದ ದರ್ಶನ ಮಾಡಿಸಲಾಗುತ್ತಿದೆ. ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕುಡ ನಡೆಯುತ್ತಿದೆ. ಅಷ್ಟೇ ಅಲ್ಲ ಕೃಷಿಗೆ ಸಂಬಂಧಿಸಿದ ಸಾಕಷ್ಟು ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ. ಸಾವಿರಾರು ಜನ ಈ ಬಾರಿ ಧಾರಾವಾಡ ಕೃಷಿ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ.
ಧಾರವಾಡದ ಕೆಲಗೇರಿಯ ಸದ್ದಾಂ ಹುಸೇನ್ ಹಾನಗಲ್ ಮೇಳಕ್ಕೆ ತಂದಿರುವ ಕುದುರೆಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ. 8 ಕುದುರೆಗಳನ್ನು ಅವರು ಈ ಬಾರಿ ಮೇಳದ ಪ್ರದರ್ಶನಕ್ಕೆ ತಂದಿದ್ದಾರೆ. ಇನ್ನು ದರ್ಶನ್ 'ರಾಬರ್ಟ್' ಚಿತ್ರದಲ್ಲಿ ಬೈಕ್ ಏರಿ ಕುಳಿತ ಲುಕ್ನ ಕಲಾಕೃತಿಯನ್ನು ನಿರ್ಮಿಸಿ ಕೃಷಿಮೇಳದಲ್ಲಿ ಇಡಲಾಗಿದೆ. ಅದರ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಕೃಷಿಮೇಳದಲ್ಲಿ ತಮ್ಮ ನೆಚ್ಚಿನ ನಟನ ಕ್ರೇಜ್ ನೋಡಿ ಖುಷಿಪಡುತ್ತಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ದರ್ಶನ್ ಸದ್ಯ 'ಕಾಟೇರ' ಚಿತ್ರದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ರಾಕ್ಲೈನ್ ವೆಂಕಟೇಶ್ ನಿರ್ದೇಶನದ ಈ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಆದ ಸಂಘರ್ಷಗಳ ಸುತ್ತು ಸಿನಿಮಾ ಕತೆ ಸುತ್ತುತ್ತದೆ. ಕೃಷಿ ಇಲಾಖೆ ರಾಯಭಾರಿಯೂ ಆಗಿರುವ ದರ್ಶನ್ ಈ ಇಂತಹ ಕತೆಯ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಈ ವರ್ಷವೇ 'ಕಾಟೇರ' ತೆರೆಗೆ ಬರುವ ನಿರೀಕ್ಷೆಯಿದೆ. ಇನ್ನು ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಕೂಡ ದರ್ಶನ್ ಮಿಂಚಿದ್ದಾರೆ. ಉಸ್ತಾದ್ ಆಗಿ ಕುಸ್ತಿ ಪಟ್ಟುಗಳನ್ನು ಹಾಕಿದ್ದಾರೆ. ನವೆಂಬರ್ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಜೋಗಿ ಪ್ರೇಮ್ ಜೊತೆಗೂ ಒಂದು ಸಿನಿಮಾ ಘೋಷಣೆಯಾಗಿದೆ. ಕೆವಿಎನ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ.


Click it and Unblock the Notifications










