ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಪುತ್ರಿ: ಕಾರಣ ತಿಳಿಸಿದ 'ಕಾಟೇರ'ನ ಪ್ರಭಾವತಿ
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಗೊತ್ತೇಯಿದೆ. ಅನನ್ಯಾ ರಾಮು ಚಿತ್ರರಂಗಕ್ಕೆ ಬರಲು ತಮ್ಮ ಹೆಸರನ್ನು ರಾಧಾನಾ ರಾಮ್ ಎಂದು ಬದಲಿಸಿಕೊಂಡಿದ್ದರು. ಆದರೆ ಇದ್ದಕ್ಕಿದಂತೆ ಇದೀಗ ಮತ್ತೆ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ರಾಧನಾ, ಚಾಲೆಂಜಿಂಗ್ ಸ್ಟಾರ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಫಸ್ಟ್ ಶೆಡ್ಯೂಲ್ನಿಂದಲೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ರಾಧನಾ ನಟನೆ ನೋಡಿ ದರ್ಶನ್ ಕೂಡ ಮೆಚ್ಚುಗೆ ಸೂಚಿಸಿದ್ದಾಗಿ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ರಾಕ್ಲೈನ್ ವೆಂಕಟೇಶ್ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗುತ್ತಿದೆ. ಹಳ್ಳಿ ಹುಡುಗಿ ಪ್ರಭಾವತಿ ಪಾತ್ರದಲ್ಲಿ ರಾಧನಾ ಮಿಂಚಿದ್ದಾರೆ.

ರಾಧನಾ ರಾಮ್ ಇದೀಗ ತಮ್ಮ ಹೆಸರನ್ನು ಆರಾಧನಾ ಎಂದು ಬದಲಿಸಿಕೊಂಡಿದ್ದಾರೆ. ಈ ಬಗ್ಗೆ ಆಕೆ ಫಿಲ್ಮಿಬೀಟ್ಗೆ ಜೊತೆ ಮಾತನಾಡಿದ್ದು ಜಾತಕ, ಸಂಖ್ಯಾಶಾಸ್ತ್ರದ ಪ್ರಕಾರ ಆರಾಧನಾ ಹೆಸರು ಸೂಕ್ತ ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಅನನ್ಯಾ ರಾಮು ನನ್ನ ಹೆಸರು. ಆದರೆ ಆ ಹೆಸರು ಕಾಮನ್ ಎನ್ನುವ ಕಾರಣಕ್ಕೆ ಇಂಡಸ್ಟ್ರಿ ಎಂಟ್ರಿಗೆ ಹೊಸ ಹೆಸರು ಹುಡುಕಿದೆವು. ರಾಧನಾ ರಾಮ್ ಇಷ್ಟವಾಯಿತು ಎಂದು ನಿರ್ದೇಶಕರ ಜೊತೆ ಚರ್ಚಿಸಿ ಫೈನಲ್ ಮಾಡಿದ್ದೆವು.
ಇದೀಗ ಜಾತಕ, ಸಂಖ್ಯಾಶಾಸ್ತ್ರದ ಪ್ರಕಾರ ಆಳವಾಗಿ ಯೋಚಿಸಿದಾಗ 'ಅ' ಅಕ್ಷರದಿಂದ ಶುರುವಾಗುವ ಹೆಸರು ಸೂಕ್ತ ಎನಿಸಿತು. ಹಾಗಾಗಿ ಅಮ್ಮ, ತರುಣ್ ಸರ್ ಎಲ್ಲರ ಜೊತೆ ಚರ್ಚಿಸಿ ಆರಾಧನಾ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ಮುಂದೆ ಇದೇ ನನ್ನ ಹೆಸರು. 'ಕಾಟೇರ' ಮಾತ್ರವಲ್ಲ ಎಲ್ಲಾ ಸಿನಿಮಾಗಳಲ್ಲೂ ಇದೇ ಹೆಸರು ಇರಲಿದೆ ಎಂದಿದ್ದಾರೆ.
'ಕಾಟೇರ' ಸಿನಿಮಾ ಕುರಿತು ಮಾತನಾಡಿದ ಆರಾಧನಾ "ಈಗಾಗಲೇ ಶೇಕಡಾ 80ರಷ್ಟು ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ನನ್ನ ಭಾಗದ ಶೂಟಿಂಗ್ 90ರಷ್ಟು ಮುಗಿದಿದ್ದು ಹಾಡುಗಳು ಮಾತ್ರ ಬಾಕಿಯಿದೆ. ಎಷ್ಟು ಹಾಡು, ಏನು ಎನ್ನುವ ಬಗ್ಗೆ ಈಗಲೇ ಹೇಳುವಂತಿಲ್ಲ. ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡದಂತೆ ಹೇಳಿದ್ದಾರೆ"
"ಕಾಟೇರ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಮೊದಲ ಪ್ರಯತ್ನದಲ್ಲೇ ದರ್ಶನ್ರಂತಹ ಸ್ಟಾರ್ ನಟನ ಜೊತೆಯಲ್ಲಿ ನಟಿಸುತ್ತಿರುವುದು ಬಹಳ ಖುಷಿಕೊಟ್ಟಿದೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಸಿನಿಮಾ ರಿಲೀಸ್ ಡೇಟ್ ಹತ್ತಿರವಾದಂತೆ ಕುತೂಹಲ ನಿರೀಕ್ಷೆ ಹೆಚ್ಚಾಗುತ್ತಿದೆ. ನನ್ನ ತಾಯಿ ಸದಾ ನನ್ನ ಬೆಂಬಲಕ್ಕೆ ನಿಲುತ್ತಾರೆ. ಅಂತಹ ತಾಯಿಯನ್ನು ಪಡೆದ ನಾನೇ ಧನ್ಯ. ಸ್ಟಾರ್ ನಟಿಯ ಮಗಳಾಗಿ ಹುಟ್ಟಿದ್ದೇ ಪುಣ್ಯ" ಎಂದು ಆರಾಧನಾ ತಿಳಿಸಿದ್ದಾರೆ.

ಐತಿಹಾಸಿಕ ಕಥಾಹಂದರ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ. ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಕುಮಾರ್ ಗೋವಿಂದ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











