ಎಲ್ಲೆಲ್ಲೂ 'ಕಾಟೇರ'ನ ಆರ್ಭಟ ಜೋರು: ಕನ್ನಡ ಸಿನಿಮಾ ತಾರೆಯರ ಬಹುಪರಾಕ್
ದರ್ಶನ್- ತರುಣ್ ಜೋಡಿಯಾ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಆರ್ಭಟ ಜೋರಾಗಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಮೂರನೇ ದಿನವೂ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸ್ಯಾಂಡಲ್ವುಡ್ ತಾರೆಯರು 'ಕಾಟೇರ'ನ ದರ್ಶನ ಮಾಡಿ ಬಹುಪರಾಕ್ ಎಂದಿದ್ದಾರೆ.
ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಆದರೆ ವರ್ಷದ ಕೊನೆಯಲ್ಲಿ 'ಕಾಟೇರ' ಸಿನಿಮಾ ಗೆಲುವಿನ ಟಾನಿಕ್ ನೀಡಿದೆ. ಹೊಸ ವರ್ಷವನ್ನು ಸ್ಯಾಂಡಲ್ವುಡ್ ಅದ್ಧೂರಿಯಾಗಿ ಸ್ವಾಗತಿಸಲಯ ಸ್ಫೂರ್ತಿ ತುಂಬಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಥಿಯೇಟರ್ಗಳಲ್ಲಿ 'ಕಾಟೇರ'ನ ದರ್ಬಾರ್ ಜೋರಾಗಿತ್ತು. ಚಿತ್ರತಂಡ ಕೂಡ ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಂಭ್ರಮಿಸಿತ್ತು.

ನಿಧಾನವಾಗಿ ಕನ್ನಡ ಕಲಾವಿದರು, ತಂತ್ರಜ್ಞರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಒಂದೊಳ್ಳೆ ಸಿನಿಮಾ ಕೊಟ್ಟಿದ್ದಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ರಿಷಬ್ ಶೆಟ್ಟಿ, ಸಿಂಪಲ್ ಸುನಿ, ಶರಣ್ ಸೇರಿದಂತೆ ಹಲವರು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪದಗಳನ್ನು ಮೀರಿದ ಜಯ
ನಟ, ನಿರ್ದೇಶಕ ರಿಷಬ್ ಶೆಟ್ಟಿ 'ಕಾಟೇರ' ಸಕ್ಸಸ್ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಇದು ಪದಗಳನ್ನು ಮೀರಿದ ಗೆಲುವು. ದರ್ಶನ್ ಸರ್, ತರುಣ್ ಸುಧೀರ್ ಹಾಗೂ ರಾಕ್ಲೈನ್ ಸಂಸ್ಥೆಯ ಚಮತ್ಕಾರ. ಈ ವಿಜಯಕ್ಕಾಗಿ ನಿಮಗೆ ಅಭಿನಂದನೆಗಳು" ಎಂದು ಬರೆದಿದ್ದಾರೆ. ಸದ್ಯ ರಿಷಬ್ ಶೆಟ್ಟಿ 'ಕಾಂತಾರ' ಚಾಪ್ಟರ್-1 ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಆಕ್ಷನ್ ಖುಷಿ ಕೊಡುತ್ತದೆ
"ಸ್ಟಾರ್ಸ್ ಯಾವಾಗಲೂ ಗೆಲ್ಲುವ ಕುದುರೆಯಾಗಲು ತಯಾರಿರುತ್ತಾರೆ. ಆದರೆ ಅವರಿಗೆ ಪರಿಪಕ್ವವಾದ ಒಂದು ಸ್ಕ್ರಿಪ್ಟ್ನ ಅವಶ್ಯಕತೆ ಇರುತ್ತದೆ. ಆ ಬರವಣಿಗೆ ಮತ್ತು ತಾಂತ್ರಿಕತೆ ಈ ಚಿತ್ರಕ್ಕಿದೆ. ದರ್ಶನ್ ಅವರ ನಟನೆ ಮತ್ತು ಲುಕ್ಸ್, ಆಕ್ಷನ್ ಖುಷಿ ಕೊಡುತ್ತದೆ. ಅವರ ಘನತೆಗೆ ತೂಗುವಂತಹ ಹಾಗೂ ನೆನಪಿನಲ್ಲಿ ಉಳಿಯುವಂತಹ ಪಾತ್ರವಿದು. ಒಂದಷ್ಟು ವಿಚಾರ ಒಂದಷ್ಟು ಮಾಸ್ ಸಂಚಾರ ಒಂದಷ್ಟು ಕಾನೂನುಬದ್ಧಗೊಳಿಸುವಂತಹವು, ಒಂದಷ್ಟು ಎಲಿವೇಷನ್ಸ್, ತರುಣ್ ಸುಧೀರ್ ಹಾಗೂ ಬರಹಗಾರರಿಗೆ ಧನ್ಯವಾದಗಳು. ಬರವಣಿಗೆ ಮತ್ತು ಸಂಭಾಷಣೆ ಮೆರವಣಿಗೆ ಜಡೇಶ್, ಮಾಸ್ತಿ ಸೂಪರ್. ಆರಾಧನಾ ಮೊದಲ ಚಿತ್ರದಲ್ಲೇ ಅರ್ಥ ಮಾಡಿಸುವ ಅರ್ಥವುಳ್ಳ ಪಾತ್ರ. ಚೊಕ್ಕ ಅಭಿನಯ . ವಿ. ಹರಿಕೃಷ್ಣ ಆರ್ಭಟ ಜೋರು. 1970ರ ಕಾಲಘಟ್ಟವನ್ನು ಅತ್ತ್ಯುತ್ತಮವಾಗಿ ಸೆರೆಹಿಡಿಯಲಾಗಿದೆ. ಜನರ ನೂಕುನುಗ್ಗಲು ಚಿತ್ರಮಂದಿರದ ಬಳಿ ನೋಡಲು ಖುಷಿಯಾಗುತ್ತದೆ" ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.

ಸುದೀರ್ಘ ಪತ್ರ ಬರೆದ ಶರಣ್
ನಟ ಶರಣ್ ಸುಧೀರ್ಘ ಪತ್ರ ಬರೆದು ಮೆಚ್ಚುಗೆ ಸೂಚಿಸಿದ್ದಾರೆ. 'ಕಾಟೇರ' ಚಿತ್ರಮಂದಿರದಲ್ಲಿ ನೋಡಿ, ಬಹಳ ಇಷ್ಟಪಟ್ಟ ನನ್ನ ಈ ವರ್ಷದ ಕೊನೆಯ ಚಿತ್ರ. ಒಳ್ಳೆ ರೀತಿಯಲ್ಲಿ 2023 ಮುಗಿಸಿದೆ. ಎಲ್ಲಾ ಸಿನಿಪ್ರಿಯರಿಗೂ ಮತ್ತು ಅದರಲ್ಲೂ ದರ್ಶನ್ ಸರ್ ಅಭಿಮಾನಿಗಳಿಗೂ ಇದೊಂದು ಭರ್ಜರಿ ಸಿನಿಮಾ ಹಬ್ಬವಾಗಲಿದೆ ಎಂದರೆ ತಪ್ಪಾಗಲಾರದು. ದರ್ಶನ್ ಸರ್ ಕಮರ್ಷಿಯಲ್ ಸಿನಿಮಾಗಳಲ್ಲೂ ಒಂದು ಹೆಜ್ಜೆ ಮೀರಿದ ನಟನೆ ಮಾಡುವಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಮರ್ಷಿಯಲ್ ಸಿನಿಮಾದಲ್ಲು ಒಂದೊಳ್ಳೆ ಸಂದೇಶ ನೀಡುವ ಜವಾಬ್ದಾರಿಯನ್ನು ಅವರು ತುಂಬಾ ಅಚ್ಚುಕಟ್ಟಾಗಿ ಹಾಗೆಯೇ ತುಂಬಾ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ ಇಂತಹ ಒಂದು ಕಥೆಯನ್ನು ಒಪ್ಪಿಕೊಂಡು, ತೆರೆ ಮೇಲೆ ಮನಮುಟ್ಟುವಂತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಒಂದರ ಹಿಂದೆ ಒಂದು ಒಳ್ಳೆ ಸಿನಿಮಾ ಮಾಡುತ್ತಿರುವುದಕ್ಕೆ ಧನ್ಯವಾದಗಳು.
ಇನ್ನು ನಮ್ಮ ತರುಣ್, ನಿನ್ನ ಪ್ರತಿಯೊಂದು ಹೆಜ್ಜೆಯನ್ನು ಬಹಳ ಹತ್ತಿರದಿಂದ ಕಂಡವನು ನಾನು. ಬಹಳ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರಭಾವಶಾಲಿ ವಿಷಯವನ್ನು ಅಷ್ಟೇ ಪರಿಣಾಮಕಾರಿಯಾಗಿ ಅದು ಹೇಗೆ ಕಥೆಯನ್ನು ಹೆಣೆಯುತ್ತೀಯೋ ನಾ ಅರಿಯೇ. ಹರಿಕೃಷ್ಣ ಅವರ ಸಂಗೀತ ಮತ್ತು ಬ್ಯಾಕ್ಗ್ರೌಂಡ್ ಸ್ಕೋರ್ ಅದ್ಭುತವಾಗಿತ್ತು. ಸುಧಾಕರ್ರವರ ಚಾತುರ್ಯದ ಛಾಯಾಗ್ರಹಣ, ನಮ್ಮ ಕನ್ನಡದ ಆಸ್ತಿ ಮಾಸ್ತಿಯವರ ಹರಿತವಾದ ಸಂಭಾಷಣೆಗಳು, ಕೆ ಎಂ ಪ್ರಕಾಶ್ ರವರ ಸಂಕಲನ, ಜಡೀಶ್ ಹಾಗೂ ಇಡೀ ತಂಡದ ಪರಿಶ್ರಮ ತೆರೆಯ ಮೇಲೆ ಎದ್ದು ಕಾಣಿಸುತ್ತಿದೆ. ಇನ್ನು ತಾರಾಗಣ ಅನನ್ಯ! ಪ್ರತಿಭಾವಂತರ ಸಮ್ಮಿಲನ, ನಮ್ಮ ಶೃತಿ ಇರಬಹುದು, ಅವಿನಾಶ್ ರವರು, ಅತ್ಯುತ್ ರವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಮಿನುಗುತ್ತಾರೆ. ಅದರಲ್ಲೂ ನಮ್ಮ ಬಿರಾದರ್ ಅವರ ಪಾತ್ರ ಬಹಳ ಮೆಚ್ಚುಗೆಯಾಗುವಂತಹದ್ದು.
ಇನ್ನೊಂದು ಮನಸ್ಸಿಗೆ ಹತ್ತಿರವಾಗುವಂತಹ ಅಂಶವೆಂದರೆ ಬಹಳಷ್ಟು ರಂಗ ಪ್ರತಿಭೆಗಳ ಅನಾವರಣ, ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೊನೆಯದಾಗಿ, ಆರಾಧನಾ ರಾಮ್ ಮೊದಲನೇ ಸಿನಿಮಾದಲ್ಲಿಯೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಭರವಸೆಯುಳ್ಳ ನಾಯಕ ನಟಿ ದೊರಕಿದ್ದಾರೆ ಕಾಟೇರ ಚಿತ್ರದ ಮೂಲಕ. ಚಂದನವನಕ್ಕೆ ಸ್ವಾಗತ. ಮತ್ತೊಮ್ಮೆ ಇಡೀ ಕಾಟೇರ ಚಿತ್ರ ತಂಡಕ್ಕೆ ಶುಭ ಹಾರೈಸುತ್ತ ಇಂತಹ ಸದಭಿರುಚಿಯ ಚಿತ್ರ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.
ಇನ್ನುಳಿದಂತೆ ನಿರ್ದೇಶಕಿ ಶ್ರುತಿ ನಾಯ್ಡು, ನಟಿ ಮನ್ವಿತಾ ಹರೀಶ್, ನಿರ್ದೇಶಕ ಮಂಸೋರೆ ಸೇರಿದಂತೆ ಹಲವರು 'ಕಾಟೇರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಒಂದು ದಿನ ಮೊದಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿನಿಮಾ ವೀಕ್ಷಿಸಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.


Click it and Unblock the Notifications











