Kaatera: ಕೇಳಿದ್ದು ಒಂದು.. ಸಿಕ್ಕಿದ್ದು ಇನ್ನೊಂದು.. ಅಭಿಮಾನಿಗಳು ಕಾದು ಕಾದು ಸುಸ್ತಾದ್ರು
ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ 'ಕಾಟೇರ' ಟೀಸರ್ಗಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ದರ್ಶನ್ ನಟನೆಯ ಆಕ್ಷನ್ ಎಂಟರ್ಟೈನರ್ 'ಕಾಟೇರ' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಪೋಸ್ಟರ್ ಬಿಟ್ಟರೆ ಮತ್ಯಾವುದೇ ಝಲಕ್ ರಿವೀಲ್ ಆಗಿಲ್ಲ. ಗಣೇಶ ಹಬ್ಬದ ಸಂಭ್ರಮದಲ್ಲಿ ಟೀಸರ್ ರಿಲೀಸ್ ಆಗುತ್ತೆ ಎಂದು ನಿರೀಕ್ಷಿಸಲಾಗಿತ್ತು.
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು 20 ದಿನ ಶೂಟಿಂಗ್ ಮಾತ್ರ ಬಾಕಿಯಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಮಿಂಚಿದ್ದಾರೆ. ಜಗಪತಿ ಬಾಬು, ವಿನೋದ್ ಆಳ್ವಾ, ಶ್ರೀನಿವಾಸ್ ಮೂರ್ತಿ, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬರೀ ಪೋಸ್ಟರ್ಗಳಿಂದಲೇ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ.

ರಾಕ್ಲೈನ್ ವೆಂಕಟೇಶ್ ಬಹಳ ಅದ್ಧೂರಿಯಾಗಿ 'ಕಾಟೇರ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಇದು. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಸುತ್ತಾ ಮುತ್ತಾ ಸಿನಿಮಾ ಕಥೆ ಸುತ್ತುತ್ತದೆ. ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
ಅದ್ಭುತ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಟ್ಟಿಕೊಂಡು ತರುಣ್ ಸುಧೀರ್ 'ಕಾಟೇರ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿತ್ತು ಚಿತ್ರತಂಡ. ಇನ್ನು ಗಣೇಶ ಹಬ್ಬದ ಸಂಭ್ರಮದಲ್ಲಿ ಟೀಸರ್ ರಿಲೀಸ್ ಆಗುತ್ತದೆ ಎನ್ನುವ ಗುಸು ಗುಸು ಕೇಳಿಬಂದಿತ್ತು. ಅಭಿಮಾನಿಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಆದರೆ ಗೌರಿ-ಗಣೇಶ ಹಬ್ಬ ಮುಗಿಯುತ್ತಾ ಬಂದರೂ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ಗೌರಿ ಹಬ್ಬದ ಸಂಭ್ರಮದಲ್ಲಿ ನಟಿ ಶ್ರುತಿ ಹುಟ್ಟುಹಬ್ಬ ಅಚರಿಸಿಕೊಂಡಿದ್ದಾರೆ. ಚಿತ್ರದಲ್ಲಿ ಆಕೆಯ ಲುಕ್ ರಿವೀಲ್ ಮಾಡಿ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಟೀಸರ್ ರಿಲೀಸ್ ಮಾಡದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ದಸರಾ ಅಥವಾ ದೀಪಾವಳಿಗೆ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಈ ವರ್ಷ 'ಕಾಟೇರ' ಸಿನಿಮಾ ರಿಲೀಸ್ ಆಗುವುದು ಅನುಮಾನ ಎನ್ನಲಾಗ್ತಿದೆ. ಹಾಗಾಗಿ ಇಷ್ಟು ಬೇಗ ಟೀಸರ್ ರಿಲೀಸ್ ಮಾಡೋದು ಬೇಡ ಎಂದು ಚಿತ್ರತಂಡ ನಿರ್ಧರಿಸಿದಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ರಿಲೀಸ್ ಮಾಡುವಂತೆ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ.
ರಾಕ್ಲೈನ್ ಬ್ಯಾನರ್ನಲ್ಲಿ ದರ್ಶನ್ 'ರಾಜಾ ವೀರ ಮದಕರಿನಾಯಕ' ಚಿತ್ರದಲ್ಲಿ ನಟಿಸಬೇಕಿತ್ತು. ಒಂದು ವಾರದ ಚಿತ್ರೀಕರಣ ಬಳಿಕ ಕೊರೊನಾ ಹಾವಳಿ ಶುರುವಾಗಿ ಆ ಸಿನಿಮಾ ನಿಂತಿತ್ತು. ಅದೇ ಸಮಯದಲ್ಲಿ ತರುಣ್ ಹೇಳಿದ 'ಕಾಟೇರ' ಕತೆ ಇಷ್ಟವಾಗಿ ಸಿನಿಮಾ ಶುರುವಾಯಿತು. ಚಿತ್ರದಲ್ಲಿ 70ರ ದಶಕದ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ಕನಕಪುರ ರಸ್ತೆ ಬಳಿ ದೊಡ್ಡ ಹಳ್ಳಿಯ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ದರ್ಶನ್ ಲುಂಗಿ ಉಟ್ಟು ವಿಭಿನ್ನ ಲುಕ್ನಲ್ಲಿ ರಂಜಿಸೋಕೆ ಬರ್ತಿದ್ದಾರೆ.
'ಕಾಟೇರ' ಟೀಸರ್ ರಿಲೀಸ್ ಆಗದೇ ಇದ್ದರೂ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಚಿತ್ರದ ಸ್ಪೆಷಲ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಯಶಸ್ ಸೂರ್ಯ ಹೀರೊ ಆಗಿ ಅಬ್ಬರಿಸಿದ್ದಾರೆ. ಗರಡಿ ಮನೆಯ ಸುತ್ತಾ ಈ ಸಿನಿಮಾ ಕಥೆ ಸುತ್ತಲಿದೆ. ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದು ಉಸ್ತಾದ್ ಆಗಿ ಕುಸ್ತಿ ಪಟ್ಟುಗಳನ್ನು ಹಾಕಿದ್ದಾರೆ.


Click it and Unblock the Notifications










