ದರ್ಶನ್ ನಟನೆಯ 'ಕಾಟೇರ' ಸಿನಿಮಾ ನೋಡಿ ಫೈವ್ ಸ್ಟಾರ್ ರೇಟಿಂಗ್ ನೀಡಿದ ಎಂಪಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರ ಹರಿದು ಬರುತ್ತಿದೆ. ಸ್ಯಾಂಡಲ್ವುಡ್ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ ನಾಯಕರು ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ 'ಕಾಟೇರ'ನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ.
'ಕಾಟೇರ' ಸಿನಿಮಾ ಈ ವರ್ಷ ಸ್ಯಾಂಡಲ್ವುಡ್ಗೆ ಹೊಸ ವರ್ಷವನ್ನು ಸಕತ್ ಖುಷಿಯಿಂದ ವೆಲ್ಕಂ ಮಾಡುವಂತೆ ಮಾಡಿದೆ. ಕಾಟೇರ ಸಕ್ಸಸ್ ಕನ್ನಡ ಸಿನಿರಂಗಕ್ಕೆ 2024ಕ್ಕೆ ಹೊಸ ಭರವಸೆ ನೀಡಿದೆ. ಕನ್ನಡಿಗರು ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳಿಂದಲೂ ಸಿನಿಮಾ ಡಬ್ಬಿಂಗ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯಸಭಾ ಸದಸ್ಯರೊಬ್ಬರು 'ಕಾಟೇರ' ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಕಾಟೇರ' ಬಿಡುಗಡೆಯಾಗಿ ಐದು ದಿನಗಳಾಗಿದ್ದು, ಈವರೆಗೆ ಕನಿಷ್ಠ 86 ಕೋಟಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ತರುಣ್ ಸುಧೀರ್ ಮಾಹಿತಿ ಹಂಚಿಕೊಂಡಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಕಲೆಕ್ಷನ್ ವಿವರಗಳ ಬಗ್ಗೆ ಬರುತ್ತಿವೆ.
ಕಾಟೇರನಿಗೆ ಫೈವ್ ಸ್ಟಾರ್ ರೇಟಿಂಗ್ ನೀಡಿದ ಎಂಪಿ
ಕಾಟೇರ ಸಿನಿಮಾ ನೋಡಿ ಇತ್ತೀಚೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಶಾಸಕರಾದ ಮಹೇಶ್ ಟೆಂಗಿನಕಾಯಿ ಕೂಡ ಹುಬ್ಬಳ್ಳಿಯಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಜಿ. ಸಿ. ಚಂದ್ರಶೇಖರ್ ಸಹ ಸಿನಿಮಾ ನೋಡಿ ಬಂದಿದ್ದಾರೆ. ಸಿನಿಮಾ ಕಥೆ ಮತ್ತು ದರ್ಶನ್ ನಟನೆ ಮೆಚ್ಚಿಕೊಂಡಿದ್ದು, 5 ಸ್ಟಾರ್ ರೇಟಿಂಗ್ ಕೊಟ್ಟಿದ್ದಾರೆ.
"ಈಗಷ್ಟೇ ಕಾಟೇರ ಸಿನಿಮಾ ನೋಡಿ ಬಂದೆ, ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ನೊಂದವರ, ಶೋಷಿತರ ಪರ ಸಾಮಾಜಿಕ ಕಳಕಳಿಯಿರುವ ಅತ್ಯುತ್ತಮ ಚಿತ್ರ, ನಾಯಕ ನಟ ದರ್ಶನ್ ನಟನೆ ಅಮೋಘ ಇವರಿಗೆ ಮತ್ತಷ್ಟು ಯಶಸ್ಸು ಸಿಗಲಿ" ಎಂದು ತಮ್ಮ ಫೇಸ್ಬುಕ್ ಫೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರೆದು "ಚಿತ್ರದ ಪ್ರತಿಯೊಂದು ಪಾತ್ರಗಳು ಜೀವಿಸಿವೆ, ಒಟ್ಟಿನಲ್ಲಿ ನೀವು ಯಾವುದೇ ನಟನ ಫ್ಯಾನ್ ಆದ್ರೂ ನೋಡಲೇ ಬೇಕಾದ ಸಿನೆಮಾ, ನನ್ನ ಕಡೆಯಿಂದ ಇದಕ್ಕೆ ಫೈವ್ ಸ್ಟಾರ್" ಎಂದು ಸ್ಟಾರ್ಗಳನ್ನು ನೀಡಿದ್ದಾರೆ. ಇದೊಂದು ಅತ್ಯುತ್ತಮ ಸಿನಿಮಾ ಎಂದು ವಿಮರ್ಶೆ ಮಾಡಿರುವ ಅವರು ಎಲ್ಲರೂ ಸಿನಿಮಾ ನೋಡಿ ಎಂದಿದ್ದಾರೆ.
ವಿಮರ್ಶೆ ಹಂಚಿಕೊಂಡಿದ್ದ ಸಚಿವ ಪ್ರಲ್ಹಾದ್ ಜೋಶಿ
ಇತ್ತೀಚೆಗೆ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ್ ಚೆಬ್ಬಿ ಹುಬ್ಬಳ್ಳಿಯಲ್ಲಿ 'ಕಾಟೇರ' ಸಿನಿಮಾ ನೋಡಿದ್ದರಿ. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕಾಟೇರ ವಿಮರ್ಶೆ ಹಂಚಿಕೊಂಡಿದ್ದರು. "ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಕ್ಲೈನ್ ವೆಂಕಟೇಶ್ ಅವರ ನಿರ್ಮಾಣದಲ್ಲಿ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಕಾಟೇರ ಚಲನಚಿತ್ರವನ್ನು ಹುಬ್ಬಳ್ಳಿಯಲ್ಲಿ ವೀಕ್ಷಿಸಿದೆ. ರೈತರಿಗೆ ಪ್ರತಿಯೊಬ್ಬರೂ ನೀಡಬೇಕಾದ ಪ್ರಾಮುಖ್ಯತೆ, ಸಮಾಜದಲ್ಲಿ ಸರ್ವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂದೇಶವನ್ನು ಚಲನಚಿತ್ರದ ಮೂಲಕ ಅಚ್ಚುಕಟ್ಟಾಗಿ ಅದ್ಭುತವಾಗಿ ತೋರಿಸಲಾಗಿದೆ" ಎಂದಿದ್ದರು.
ದರ್ಶನ್ ನಟನೆಯನ್ನು ಕೊಂಡಾಡಿದ್ದ ಅವರು, "ದರ್ಶನ್ ಅವರ ಅದ್ಭುತ ನಟನೆ ಅಭಿಮಾನಿಗಳನ್ನು ಚಲನಚಿತ್ರ ಪ್ರಿಯರನ್ನು ಮತ್ತೊಮ್ಮೆ ರಂಜಿಸುವುದರ ಜೊತೆಗೆ ಹೊಸ ಸಂದೇಶವನ್ನು ಸಾರಿದ್ದಾರೆ. ಚಲನಚಿತ್ರ ಯಶಸ್ಸು ಕಾಣಲಿ ಎಂದು ಕಾಟೇರ ಚಲನಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದರು.


Click it and Unblock the Notifications










