ಡ್ರಾಮಾದಲ್ಲಿ ಪಾರ್ಟು.. 'ಕಾಟೇರ'ನ ಹಾರ್ಟು ಈ ಮಹದೇವಣ್ಣ.. ಸಿನಿಮಾ ಕಥೆ ಅದೇನಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಆದರೆ ಸಿನಿಮಾ ಕತೆಯ ಬಗ್ಗೆ ತಂಡ ಯಾವುದೇ ಸುಳಿವು ಬಿಟ್ಟು ಕೊಡುತ್ತಿಲ್ಲ. ಅನುಭವಿ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಟ್ಟಿಕೊಂಡು ತರುಣ್ ಸುಧೀರ್ ಒಂದೊಳ್ಳೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟ ಕುಮಾರ್ ಗೋವಿಂದ್ ಪ್ರಮುಖ ಪಾತ್ರ ಮಾಡಿದ್ದಾರೆ.
'ಕಾಟೇರ' ಚಿತ್ರದಲ್ಲಿ ಕುಮಾರ್ ಗೋವಿಂದ್ ನಟಿಸುತ್ತಿರುವ ವಿಚಾರವನ್ನು ಕ್ಯಾರೆಕ್ಟರ್ ಪೋಸ್ಟರ್ ಸಮೇತ ಚಿತ್ರತಂಡ ಬಹಿರಂಗ ಪಡಿಸಿದೆ. ಚಿತ್ರದಲ್ಲಿ ಅವರು ಮಹದೇವಣ್ಣ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲುಂಗಿ, ಅಂಗಿ ತೊಟ್ಟು ಹೆಗಲ ಮೇಲೆ ಟವೆಲ್ ಹಾಕಿಕೊಂಡ ಗೆಟಪ್ನಲ್ಲಿ ಕುಮಾರ್ ಗೋವಿಂದ್ ಕಾಣಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ನಾಟಕಗಳಲ್ಲಿ ಪಾರ್ಟು ಮಾಡುವ ಮಹದೇವಣ್ಣ ಬಹಳ ಸಹನಾಭೂತಿ ಇರುವ ವ್ಯಕ್ತಿ. 'ಕಾಟೇರ' ಕತೆಯಲ್ಲಿ ಈ ಪಾತ್ರಕ್ಕೆ ಬಹಳ ಮಹತ್ವ ಇದೆ ಅನ್ನೋದು ಗೊತ್ತಾಗ್ತಿದೆ.

70ರ ದಶಕದ ಕತೆಯನ್ನು 'ಕಾಟೇರ' ಚಿತ್ರದಲ್ಲಿ ಹೇಳಲಾಗುತ್ತಿದೆ. ಸದ್ಯ ಪೋಸ್ಟರ್ನ ಗಮನಿಸಿದರೆ ಎತ್ತಿನ ಬಂಡಿ, ಟ್ರ್ಯಾಕ್ಟರ್ ಜನ ಚರ್ಚೆ, ಹಳ್ಳಿ ನಾಟಕದ ಕಟೌಟ್, ದನದ ಕೊಟ್ಟಿಗೆ, ಬೆರಣಿ ತಟ್ಟಿದ ಗೋಡೆಗಳನ್ನು ಕಾಣಬಹುದು. ಚಿತ್ರದಲ್ಲಿ ಮಹದೇವಣ್ಣ ಹಳ್ಳಿಯ ನಾಟಕದಲ್ಲಿ ಯಮ, ಭೀಮ ಅಥವಾ ದುರ್ಯೋಧನನ ಪಾತ್ರ ಮಾಡ್ತಾನೆ ಅನ್ನೋದು ಗೊತ್ತಾಗುತ್ತಿದೆ. ಇನ್ನು ಪೋಸ್ಟ್ಗೆ ನೀಡಿರುವ ಕ್ಯಾಪ್ಷನ್ನಲ್ಲಿ ಆತನ ವ್ಯಕ್ತಿತ್ವದ ಬಗ್ಗೆ ಹೇಳಲಾಗಿದೆ. ಸಹಾನುಭೂತಿ, ಸೋದರತ್ವ ರೂಢಿಸಿಕೊಂಡ ವ್ಯಕ್ತಿ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಚಿತ್ರದಲ್ಲಿ 'ಕಾಟೇರ' ದರ್ಶನ್ ಸಹೋದರನ ಪಾತ್ರದಲ್ಲಿ ಕುಮಾರ್ ಗೋವಿಂದ್ ನಟಿಸಿದ್ದಾರಾ? ಅನ್ನುವ ಅನುಮಾನವೂ ಮೂಡುತ್ತಿದೆ. ಇನ್ನು ಪೋಸ್ಟರ್ ನೋಡಿ ಕೆಲವರು ಸಿನಿಮಾ ಕತೆ ಏನು ಅನ್ನುವುದನ್ನು ಗೆಸ್ ಮಾಡುತ್ತಿದ್ದಾರೆ. ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದಾಗ ಅದನ್ನು ಕೆಲವರು ದುರುಪಯೋಗ ಪಡಿಸಿಕೊಂಡರು. ಆ ಸಮಯದಲ್ಲಿ ನಡೆಯುವ ಸಂಘರ್ಷದಲ್ಲಿ ಮಹದೇವಣ್ಣ ಸಾಯುತ್ತಾನೆ. ಅದಕ್ಕೆ 'ಕಾಟೇರ' ಸೇಡು ತೀರಿಸಿಕೊಳ್ಳುವುದೇ ಸಿನಿಮಾ ಕತೆ ಅಂತ ಕೆಲವರು ಊಹಿಸುತ್ತಿದ್ದಾರೆ.

ಇನ್ನುಳಿದಂತೆ 'ಕಾಟೇರ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಾಧನಾ ರಾಮ್ ನಟಿಸುತ್ತಿದ್ದಾರೆ. ತೆಲುಗು ನಟ ಜಗಪತಿ ಬಾಬು, ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡ ತಾರಾಗಣದಲ್ಲಿ ಇದ್ದಾರೆ. ಸಣ್ಣ ಸಣ್ಣ ಶೆಡ್ಯೂಲ್ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. 5 ದಶಕಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ. ಹಳ್ಳಿ ಸೆಟ್ಗಳನ್ನು ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ. ಆಧುನಿಕತೆಗೆ ಹೆಚ್ಚು ತೆರೆದುಕೊಳ್ಳದ ಲೊಕೇಶನ್ಗಳಲ್ಲಿ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುತ್ತಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ ಇದೆ. ನಟ ದರ್ಶನ್ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರಿಂದ ಕೆಲ ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಸದ್ಯ ತರುಣ್ ಸುಧೀರ್ ಹೊಸ ಶೆಡ್ಯೂಲ್ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ. ಜೊತೆ ಜೊತೆಗೆ ಎಡಿಟಿಂಗ್ ಕೆಲಸವೂ ಶುರುವಾಗಲಿದೆ.
ಲಾಕ್ಡೌನ್ ಸಮಯದಲ್ಲಿ ನಿರ್ದೇಶಕ ಜಡೇಶ್ ಹಂಪಿ ಜೊತೆ ಸೇರಿ ತರುಣ್ ಸುಧೀರ್ 'ಕಾಟೇರ' ಕಥೆ ಬರೆದಿದ್ದರು. ಕಳೆದ ವರ್ಷ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಮುಹೂರ್ತ ನೆರವೇರಿತ್ತು. ರಾಕ್ಲೈನ್ ಸ್ಟುಡಿಯೋದಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆಸಲಾಗಿತ್ತು. ನಂತರ ಹೈದರಾಬಾದ್ ಹಾಗೂ ಕನಕಪುರದಲ್ಲೂ ಒಂದೊಂದು ಶೆಡ್ಯೂಲ್ ಮುಗಿಸಲಾಗಿದೆ. ರವಿಶಂಕರ್ ಗುರೂಜಿ ಆಶ್ರಮದ ಸಮೀಪವೇ ಒಂದು ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ.


Click it and Unblock the Notifications











