ಕಾವೇರಿದ ಮೈಸೂರಿನಲ್ಲಿ ಶಿವಣ್ಣ ಕಡ್ಡಿಪುಡಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಡ್ಡಿಪುಡಿ ಚಿತ್ರದ ತನ್ನ ವಿಚಿತ್ರ ಶೀರ್ಷಿಕೆಯ ಮೂಲಕ ಚಿತ್ರೋದ್ಯಮದ ಗಮನಸೆಳೆಯುತ್ತಿದೆ. ಚಿತ್ರದಲ್ಲಿ ಶಿವಣ್ಣ ಅವರ ಹೆಸರು ಆನಂದ್. ಆದರೆ ಫೀಲ್ಡಲ್ಲಿ ಎಲ್ಲರೂ ಕರೆಯುವುದು ಕಡ್ಡಿಪುಡಿ ಎಂದೇ. ಚಿತ್ರದ ಶೀರ್ಷಿಕೆ ವಿಚಿತ್ರವಾಗಿದ್ದರೂ ಕಥೆ ಮಾತ್ರ ರೌಡಿಯಿಸಂ ಸಬ್ಜೆಕ್ಟ್.
ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಎಂ. ಚಂದ್ರು ನಿರ್ಮಿಸುತ್ತಿರುವ ಚಿತ್ರದ ಶೂಟಿಂಗ್ ಸದ್ಯಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರದಿಂದ ಸಾಗಿದೆ. ಇಪ್ಪತ್ತು ದಿನಗಳ ಕಾಲ ನಡೆಯುವ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್, ರಾಧಿಕಾ ಪಂಡಿತ್, ಐಂದ್ರಿತಾ ರೇ, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವಾ, ಸ್ವಯಂವರ ಚಂದ್ರು ಮುಂತಾದವರು ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಅತಿಥಿಪಾತ್ರದಲ್ಲಿ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಕಾಣಿಸುತ್ತಿದ್ದಾರೆ. ಅವರದು ಇಲ್ಲಿ ಕೇವಲ ಅತಿಥಿ ಪಾತ್ರವೋ ಅಥವಾ ಐಟಂ ಹಾಡೋ ಗೊತ್ತಿಲ್ಲ. ದುನಿಯಾ ಸೂರಿ ಅವರೇನೋ ಐಂದ್ರಿತಾ ಅವರದು ಐಟಂ ಸಾಂಗ್ ಅಲ್ಲ ಎಂದಿದ್ದಾರೆ. ಆದರೆ ಚಿತ್ರೋದ್ಯಮಕ್ಕೆ ಮಾತ್ರ ಈ ಬಗ್ಗೆ ಗುಮಾನಿ ಇದ್ದೇ ಇದೆ.
ಈಗಾಗಲೆ ಬೆಂಗಳೂರಿನ ಗಾಂಧಿಬಜಾರ್ ನಲ್ಲಿ ಶಿವಣ್ಣ, ರಾಧಿಕಾ ಪಂಡಿತ್ ತರಕಾರಿ ಖರೀದಿಸುವ, ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿಯುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ದುನಿಯಾ ಸೂರಿ ಅವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ.
ಕಡ್ಡಿಪುಡಿ ಚಿತ್ರ ರೌಡಿಯಿಸಂ ಸಬ್ಜೆಕ್ಟ್ ಹೊಂದಿದ್ದರೂ ಕೌಟುಂಬಿಕ ಚೌಕಟ್ಟಿನಲ್ಲಿ ಸಾಗುತ್ತದೆ. ಶಿವಣ್ಣ ಕೈಯಲ್ಲಿ ಮಚ್ಚು ಹಿಡಿದರೂ ಭಾವನಾತ್ಮಕ ಅಂಶಗಳಿಗೆ ಒತ್ತು ನೀಡಲಾಗಿದೆ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಕೃಷ್ಣರ ಛಾಯಾಗ್ರಹಣವಿರುವ ಕಡ್ಡಿಪುಡಿ'ಗೆ ದೀಪು.ಎಸ್.ಕುಮಾರ್ ಅವರ ಸಂಕಲನವಿದೆ. ರವಿವರ್ಮ ಸಾಹಸ ನಿರ್ದೇಶನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











