"ಅಪ್ಪು ಸರ್ ಇಲ್ಲ, ಶಿವಣ್ಣ, ಯಶ್, ದರ್ಶನ್, ಸುದೀಪ್ ಅವ್ರು ಬಿಟ್ರೆ ವಾಟ್ ನೆಕ್ಸ್ಟ್ ಕನ್ನಡ ಇಂಡಸ್ಟ್ರಿ: ಧನ್ವೀರ್
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿಲ್ಲ, ಒಳ್ಳೆ ಕಂಟೆಂಟ್ ಇರೋ ಸಿನಿಮಾ ಬರ್ತಿಲ್ಲ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತಲೇ ಇದೆ. ಕೆಲ ದಿನಗಳ ಹಿಂದೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದರು. ಇದೀಗ ಯುವನಟ ಧನ್ವೀರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಸಕ್ಸಸ್ ರೇಟ್ ಮಾತ್ರ ಬಹಳ ಕಮ್ಮಿ ಇದೆ. ಈಗಾಗಲೇ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ಬಾಗಿಲು ಬಂದ್ ಆಗಿದೆ. ಇರುವ ಥಿಯೇಟರ್ಗಳು ಪ್ರೇಕ್ಷಕರ ಬರ ಎದುರಿಸುತ್ತಿವೆ. ಕೆಲವೊಮ್ಮೆ ಒಳ್ಳೆ ಸಿನಿಮಾ ಬಂದರೂ ಜನ ಮಾತ್ರ ಥಿಯೇಟರ್ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್ B ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿಲ್ಲ.

ಧನ್ವೀರ್ ನಟನೆಯ 'ಕೈವ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ಮೇಘ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಧನ್ವೀರ್ ಚಿತ್ರರಂಗಕ್ಕೆ ಬಂದ 5 ವರ್ಷಗಳಲ್ಲಿ 3 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದನ್ನು ನಮ್ಮ KFI ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
80, 90ರ ದಶಕದಲ್ಲಿ ನಟರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಈಗಿನ ಹೀರೊಗಳು ಯಾರು ಅಭಿಮಾನಿಗಳನ್ನು ಬಹಳ ಕಾಯಿಸುತ್ತೀರಾ ಎನ್ನುವ ಪ್ರಶ್ನೆಗೆ "ಈಗ ಮೊದಲಿನ ತರ ಕತೆಗಳು ಇಲ್ಲ. ಆಗಿನ ಕಾಲದಲ್ಲಿ ಕತೆಗಳು ಇರುತ್ತಿತ್ತು. ನಟಿಸುತ್ತಿದ್ದರು. ಮೊನ್ನೆ ನಾನು, ಅಭಿಷೇಕ್ ಅಂಬರೀಶ್ ಭೇಟಿಯಾದಾಗ ಇದರ ಬಗ್ಗೆನೇ ಮಾತನಾಡುತ್ತಿದ್ದೆವು. ಅಂಬರೀಶ್ ಸರ್ದು ಒಂದೇ ವರ್ಷಕ್ಕೆ 16 ಸಿನಿಮಾ ರಿಲೀಸ್ ಆಗಿತ್ತು. ಈಗ ಯಾಕೆ ಆಗುತ್ತಿಲ್ಲ ಎಂದು ಯೋಚಿಸಿದರೆ ಕತೆಗಳು ಇಲ್ಲ, ನಿರ್ದೇಶಕರು ಇಲ್ಲ"

"ಈಗ ಅಕ್ಕಪಕ್ಕದ ಇಂಡಸ್ಟ್ರಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಹೊಗಳುತ್ತಾರೆ. ಕನ್ನಡ ಚಿತ್ರರಂಗದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಬೇರೆ ಚಿತ್ರರಂಗದಲ್ಲಿ 3 ಹಂತಗಳಲ್ಲಿ ಕಲಾವಿದರು ಸಿದ್ಧರಿದ್ದಾರೆ. ಒಂದು ಹಂತ ಮುಗಿದರೆ, ಮತ್ತೊಂದು ಅದು ಮುಗಿದರೆ ಇನ್ನೊಂದು ಶ್ರೇಣಿ ಸಿದ್ಧವಿದೆ. ಅದನ್ನು ಅವ್ರು ಕಟ್ಟಿಕೊಂಡು ಬರುತ್ತಿದ್ದಾರೆ. ಇಲ್ಲಿ ಹಂಗಿಲ್ಲ. ಅಪ್ಪು ಸರ್ ಈಗಿಲ್ಲ. ಶಿವಣ್ಣ, ಯಶ್, ದರ್ಶನ್ ಅಣ್ಣ, ಸುದೀಪ್ ಇದ್ದಾರೆ. ಇದು ಬಿಟ್ರೆ ವಾಟ್ ನೆಕ್ಸ್ಟ್ ಕನ್ನಡ ಇಂಡಸ್ಟ್ರಿ?"
"2ನೇ ಶ್ರೇಣಿಯಲ್ಲಿ ಯಾರಿದ್ದಾರೆ? ಓಕೆ ಕೆಲವರು ಎದ್ದೇಳುತ್ತಿದ್ದೀವಿ. 3ನೇ ಶ್ರೇಣಿಯ ನಟರು ಯಾರಿದ್ದಾರೆ? ಹೀರೋಯಿನ್ಸ್ ಇಲ್ಲ, ನಿರ್ದೇಶಕರು ಇಲ್ಲ, ತಂತ್ರಜ್ಞರು ಇಲ್ಲ. ಯಾರು ಇಲ್ಲ. ಒಬ್ಬೊಬ್ಬರು ಅವರವರ ಬಗ್ಗೆ ಯೋಚಿಸಿದರೆ ಇಂಡಸ್ಟ್ರಿ ಬಗ್ಗೆ ಯಾರು ಯೋಚಿಸುತ್ತಿಲ್ಲ. ಚಿತ್ರರಂಗದಲ್ಲಿ ನಿಜಕ್ಕೂ ಸಾಕಷ್ಟು ಕೊರತೆಯಿದೆ" ಎಂದು ಧನ್ವೀರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ನಮ್ಮ ಸಿನಿಮಾಗಳಿಗೆ ಥಿಯೇಟರ್ ಸಿಗದಂತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವ ಪ್ರಶ್ನೆಗೆ "ದರ್ಶನ್ ಸರ್ ಕಾವೇರಿ ಹೋರಾಟದ ಸಮಯದಲ್ಲಿ ಒಂದು ಮಾತು ಹೇಳಿದ್ರು. ಇಲ್ಲಿ ತಮಿಳು ಪಿಕ್ಚರ್ ರಿಲೀಸ್ ಆಗುತ್ತೆ? ಯಾರಪ್ಪ ಹೆಚ್ಚು ನೋಡೋದು? ನೋಡಿದ್ದೇ ನಮ್ಮ ಕನ್ನಡಿಗರು. ಅದೇ ನಮ್ಮ ಕನ್ನಡ ಚಿತ್ರವನ್ನು ಅಲ್ಲಿ ರಿಲೀಸ್ ಮಾಡಲಿ, ಅದೇ ತಮಿಳಿನವ್ರು ನಮ್ಮ ಕನ್ನಡ ಸಿನ್ಮಾ ನೋಡ್ತಾರಾ? ನೋಡಲ್ಲ. ಕೆಲವ್ರು ಇದನ್ನು ಬಿಸ್ನೆಸ್ ಮಾಡ್ಕೊಂಡುಬಿಟ್ಟಿದ್ದಾರೆ. ಹಾಗಾಗಿ ಈ ಸಮಸ್ಯೆ"
ಕನ್ನಡ ಸಿನ್ಮಾ ರಿಲೀಸ್ ವೇಳೆ ದೊಡ್ಡ ಹಿಂದಿ ಸಿನ್ಮಾ ಬಂದ್ರೆ, ಆ ಸಿನ್ಮಾಗೆ ಇಲ್ಲಿ ಸಿಕ್ಕಾಪಟ್ಟೆ ಥಿಯೇಟರ್ ಸಿಗುತ್ತೆ ಹೊರತು ಕನ್ನಡ ಚಿತ್ರಕ್ಕಲ್ಲ. ಕಾರಣ ಏನು ಹೇಳ್ತಾರೆ? ಅವರದ್ದು ವ್ಯಾಪಾರ ಜಾಸ್ತಿ ಅದ್ಕೆ ಕೊಡ್ತೀವಿ ಅಂತ. ಇದು ಇಲ್ಲಿ ನಡೀತಿರುವರ ಪರಿಸ್ಥಿತಿ. ಅದೇ ಕನ್ನಡ ಚಿತ್ರಕ್ಕೆ ಜಾಸ್ತಿ ಥಿಯೇಟರ್ ಕೊಟ್ಟು ಅವರಿಗೆ ಕಮ್ಮಿ ಕೊಡಿ, ಯಾಕೆ ನಮ್ಮ ಕನ್ನಡ ಸಿನಿಮಾಗಳು ಎದ್ದೋಳಲ್ಲ. ಇಲ್ಲಿ ಎಲ್ಲರೂ ಅವರವರ ಹೊಟ್ಟೆಪಾಡು ನೋಡ್ತಿದ್ದಾರೆ. ಇಂಡಸ್ಟ್ರಿ ಕತೆ ನೋಡ್ತಿಲ್ಲ" ಎಂದು ಧನ್ವೀರ್ ವಿವರಿಸಿದ್ದಾರೆ.


Click it and Unblock the Notifications











