'ಕಲಾಸಿಪಾಳ್ಯ' ಚಿತ್ರಕ್ಕೂ ರೇಣುಕಾಸ್ವಾಮಿ ಪ್ರಕರಣಕ್ಕೂ ಲಿಂಕ್? ಅರೇ, ಕ್ಲೈಮ್ಯಾಕ್ಸ್ ಚೇಂಜ್ ಮಾಡಿಬಿಟ್ರಾ?
ಕೋಟಿ ರಾಮು ನಿರ್ಮಾಣದ 'ಕಲಾಸಿಪಾಳ್ಯ' ಸಿನಿಮಾ ರಾಜ್ಯಾದ್ಯಂತ ಮರು ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಫಸ್ಟ್ ವೀಕೆಂಡ್ ಚಿತ್ರಕ್ಕೆ ಎಲ್ಲೆಡೆ ಒಳ್ಳೆ ರೆಸ್ಪಾನ್ ಸಿಕ್ತಿದೆ. 22 ವರ್ಷಗಳ ಹಿಂದೆ ತೆರೆಕಂಡು ಹಿಟ್ ಆಗಿದ್ದ ಸಿನಿಮಾ ಮತ್ತೆ ತೆರೆಗೆ ಬಂದು ಅಭಿಮಾನಿಗಳನ್ನು ರಂಜಿಸ್ತಿದೆ. ನಟ ದರ್ಶನ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಅವರ ಸಿನಿಮಾವನ್ನು ಅಭಿಮಾನಿಗಳು ಮೆರೆಸುತ್ತಿದ್ದಾರೆ.
ಚಿತ್ರಮಂದಿರಗಳಲ್ಲಿ 'ಕಲಾಸಿಪಾಳ್ಯ'ದ ಕೆಂಚನ ಆರ್ಭಟ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಶುಕ್ರವಾರ ಕೆಲವಡೆ ಅದ್ಧೂರಿಯಾಗಿ ಚಿತ್ರವನ್ನು ಬರಮಾಡಿಕೊಂಡಿದ್ದರು. ನಗರದ ಮಾಗಡಿ ರಸ್ತೆಯ ಪ್ರಸನ್ನ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಇಡೀ ದಿನ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳು ಕ್ರೇಜ್ ಗಮನ ಸೆಳೆಯಿತು. ಕಟೌಟ್ ನಿಲ್ಲಿಸಿ, ಪಟಾಕಿ ಸಿಡಿಸಿ ಅಭಿಮಾನಿಗಳು ಜೈಕಾರ ಹಾಕಿದ್ದರು. ಇನ್ನು ತೆರೆಮೇಲೆ ಚಿತ್ರದ ಹಾಡುಗಳು ಬಂದಾಗ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.

ಅಂದಹಾಗೆ 'ಕಲಾಸಿಪಾಳ್ಯ' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಬದಲಾವಣೆ ಮಾಡಿದಂತೆ ಕಾಣ್ತಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಪ್ರಕರಣದ ಟ್ರಯಲ್ ಆರಂಭವಾಗಿದೆ. ಇನ್ನೊಂದು ವರ್ಷದಲ್ಲಿ ತೀರ್ಪು ಹೊರ ಬರುವ ನಿರೀಕ್ಷೆಯಿದೆ. 'ಕಲಾಸಿಪಾಳ್ಯ' ಚಿತ್ರದ ಕೊನೆಯಲ್ಲಿ ಒಂದು ಬರಹವನ್ನು ಹಾಕಿದ್ದಾರೆ. 2024ರಲ್ಲಿ ಸಿನಿಮಾ ತೆರೆಕಂಡಾಗ ಇದ್ದ ಬರಹಕ್ಕೂ ಈಗ ರೀ-ರಿಲೀಸ್ ವೇಳೆ ಕಾಣಿಸುವ ಬರಹಕ್ಕೂ ವ್ಯತ್ಯಾಸವಿದೆ. ಕೆಲವರು ಇದನ್ನು ರೇಣುಕಾಸ್ವಾಮಿ ಪ್ರಕರಣದ ಜೊತೆ ಹೋಲಿಸಿ ವೈರಲ್ ಮಾಡುತ್ತಿದ್ದಾರೆ.
ಕೆಂಚ(ದರ್ಶನ್) ತನ್ನ ಕುಟುಂಬಕ್ಕೆ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆ 'ಕಲಾಸಿಪಾಳ್ಯ' ಚಿತ್ರದಲ್ಲಿದೆ. ಆತನ ಜೀವನದಲ್ಲಿ ದುಷ್ಟ ಮುನ್ನಾಭಾಯ್ ಎಂಟ್ರಿ ಬಳಿಕ ಏನೆಲ್ಲಾ ಆಗುತ್ತದೆ. ಆತನನ್ನು ಕೆಂಚ ಹೇಗೆ ಮಟ್ಟಹಾಕುತ್ತಾನೆ ಎನ್ನುವುದು ಸಿನಿಮಾ ಕೊನೆಯಲ್ಲಿ ಗೊತ್ತಾಗುತ್ತದೆ. ಮುನ್ನಾಭಾಯ್ ಹತ್ಯೆಯಿಂದ ಸಮಾಜಕ್ಕೂ ಒಳ್ಳೆದಾಗುತ್ತದೆ. ಒಟ್ಟಾರೆ ಅಧರ್ಮದ ವಿರುದ್ಧ ಧರ್ಮದ ಯುದ್ಧ ಎನ್ನುವ ಕಾನ್ಸೆಪ್ಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಕಲಾಸಿಪಾಳ್ಯದ ಸರ್ಕಲ್ನಲ್ಲಿ ಮುನ್ನಾಭಾಯ್ಯನ್ನು ಕೆಂಚ ನೇಣು ಹಾಕುತ್ತಾನೆ. ಆದರೆ ಇದಕ್ಕೆ ಸಾಕ್ಷಿ ಹೇಳಲು ಜನ ಮುಂದೆ ಬರಲ್ಲ. ಆಗ ಪೊಲೀಸ್ ಅಧಿಕಾರಿ(ಶ್ರೀನಿವಾಸ್ ಮೂರ್ತಿ) ಪ್ರಕರಣದಿಂದ ಕೆಂಚನನ್ನು ಬಚಾವ್ ಮಾಡುತ್ತಾರೆ. ನೀನು ಮಾಡಿದ್ದು ತಪ್ಪೇ, ಆದ್ರೆ ಇದರಿಂದ ಸಮಾಜಕ್ಕೆ ಒಳ್ಳೆದಾಗಿದೆ. ಕಾನೂನಿನ ಮೂಲಕ ಇಂತಹವರಿಗೆ ಶಿಕ್ಷೆ ಕೊಡಿಸೋದು ಕಷ್ಟ. ಬೆಂಗಳೂರು ಸಿಟಿ ಕ್ರೈಂ ಲಿಸ್ಟ್ನಲ್ಲಿ 36 ಜನ ಇದ್ರು, 3 ಜನ ಖಾಲಿ ಆಗಿದ್ದಾರೆ. ಇನ್ನು 33 ಜನ ಬ್ಯಾಲೆನ್ಸ್ ಇದ್ದಾರೆ ಎಂದು ಹೇಳಿ ಕೆಂಚನನ್ನು ಬಿಟ್ಟು ಹೋಗುತ್ತಾರೆ. ಬಳಿಕ ಕೆಂಚ ದುಷ್ಟರ ಬೇಟೆ ಮುಂದುವರೆಸುವಂತೆ ತೋರಿಸಲಾಗಿದೆ. "ಓಡಿ ಓಡಿ ಎಷ್ಟೂಂತ ಓಡ್ತೀರಾ?.. ನೀವು ಭೂಗರ್ಭದಲ್ಲಿದ್ರು ಬಿಡಲ್ಲ" ಎನ್ನುವ ಬರಹ ಹಾಕಿ ಸಿನಿಮಾ ಮುಗಿಸಿದ್ದರು.
ಸದ್ಯ 'ಕಲಾಸಿಪಾಳ್ಯ' ಸಿನಿಮಾ ಮರು ಬಿಡುಗಡೆ ಆಗಿದ್ದು ಈ ಎಂಡ್ ಕಾರ್ಡ್ ಮೆಸೇಜ್ ಬದಲಾಗಿದೆ. "ಕಲಾಸಿಪಾಳ್ಯದ ದುಷ್ಟರನ್ನು ಕೊಲೆ ಮಾಡಿದ ಕೆಂಚನ ವಿರುದ್ಧ ಯಾರಾದ್ರೂ ಸಾಕ್ಷಿ ಹೇಳಿದ್ರಾ? ಪೊಲೀಸರ ಸಾಕ್ಷಿಗಳೇ ಸಾಕಾ? ಕೋರ್ಟು ಅವನಿಗೆ ಏನು ತೀರ್ಪು ನೀಡಿತು.. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ... ಕಾದು ನೋಡಿ" ಎಂದು ಬದಲಿಸಿದ್ದಾರೆ. ಇದನ್ನು ನೋಡಿ ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯಲ್ಲಿ ಹೀಗೆ ಬದಲಾಯ್ತಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ರೀ- ರಿಲೀಸ್ ವೇಳೆ ಹೀಗೆ ಎಂಡ್ ಕಾರ್ಡ್ ಬದಲಾಗಿದ್ದು ಈಗ ಅಲ್ಲ. ಈ ಹಿಂದೆ ಒಮ್ಮೆ ನಿರ್ಮಾಪಕ ಕೋಟಿ ರಾಮು ಸಿನಿಮಾವನ್ನು ರೀ-ರಿಲೀಸ್ ಮಾಡಿದ್ದರು. ಅದೇ ಸಮಯದಲ್ಲಿ ಹೀಗೆ ಬದಲಿಸಿದ್ದರು. ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದರು. ಸೂಪರ್ ಹಿಟ್ 'ಕಲಾಸಿಪಾಳ್ಯ' ಚಿತ್ರದ ಕಥೆ ಮುಂದುವರೆಸಿ ಪಾರ್ಟ್-2 ಮಾಡುವ ಲೆಕ್ಕಾಚಾರದಲ್ಲಿದ್ದರು. ಅದಕ್ಕಾಗಿ ಈ ರೀತಿ ಎಂಡ್ಕಾರ್ಡ್ ಬದಲಿಸಿದ್ದರು. ನಾನು ಈಗ ಯಾವುದೇ ಬದಲಾವಣೆ ಮಾಡಲಿಲ್ಲ. "ಹಿಂದೆ ರಾಮು ಸರ್ ಇದ್ದಾಗಲೇ ಒಮ್ಮೆ ಡಿಜಿಟಲ್ ಮಾಡಿಸಿ ಸಿನಿಮಾ ರೀ-ರಿಲೀಸ್ ಮಾಡಿದ್ದರು. ಅದೇ ಸಮಯದಲ್ಲಿ ಅವ್ರು ಮಾಡಿಸಿರಬಹುದು, ಸೀಕ್ವೆಲ್ ಮಾಡುವ ಆಸೆ ಅವರಿಗೆ ಇತ್ತು ಅನ್ನಿಸುತ್ತೆ" ಎಂದು ರಾಮು ಫಿಲ್ಮ್ಸ್ ಮ್ಯಾನೇಜರ್ ಹನುಮಂತು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.


Click it and Unblock the Notifications