'ಎನ್ನಡ' ಎನ್ನುವನ ಎಡವಟ್ಟಿಗೆ 'ಕನ್ನಡ' ಎನ್ನುವ ಶಿವಣ್ಣನನ್ನು ಎಳೆದು ತರುವುದು ತಪ್ಪು- ಮಾಸ್ತಿ..!
ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು. ಆದರೆ, ಇಂಥಾ ಕಮಲ್ ಹಾಸನ್ ಕನ್ನಡಿಗರ ಗೌರವ ಕಳೆದುಕೊಂಡಿದ್ದಾರೆ. ಆತ್ಮಾಭಿಮಾನ ಕೆಣಕಿದ್ದಾರೆ. ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳದೇ ಮೊಂಡುತನದ ಪ್ರದರ್ಶನವನ್ನು ಮಾಡುತ್ತಿದ್ದಾರೆ.
ಕಮಲ್ ಹಾಸನ್ ಮಾತನಾಡಿದ ಮಾತುಗಳಿಂದ ಕೆರಳಿರುವ ಕನ್ನಡಿಗರು ಇನ್ನೇನು ಈ ವಾರ ಬಿಡುಗಡೆ ಆಗಲಿರುವ ಥಗ್ ಲೈಫ್ ಚಿತ್ರವನ್ನು ನೋಡಬೇಡಿ ಎಂದು ಕರೆಯನ್ನು ಕೊಡುತ್ತಿದ್ದಾರೆ. ಥಗ್ ಲೈಫ್ ಚಿತ್ರವನ್ನು ಯಾವುದೇ ಕಾರಣಕ್ಕೂ ಕನ್ನಡದ ನೆಲದಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಕೂಡ ಗುಡುಗಿದ್ದಾರೆ. ಕ್ಷಮೆ ಕೇಳಲು ಗಡುವು ಕೂಡ ಕಮಲ್ ಹಾಸನ್ಗೆ ನೀಡಿದ್ದಾರೆ.

ಇದೆಲ್ಲ ಬೆಳವಣಿಗೆಯ ಕುರಿತು ನಿಮ್ಮ ಫಿಲ್ಮಿ ಬೀಟ್ ಕನ್ನಡ ವೆಬ್ ಸೈಟ್ಗೆ ಕನ್ನಡದ ಪ್ರಖ್ಯಾತ ಸಂಭಾಷಣೆಗಾರ ಮಾಸ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಕಮಲ್ ಹಾಸನ್ ಅವರ ನಡೆ ಮತ್ತು ನುಡಿಯನ್ನು ಖಂಡಿಸಿದ್ದಾರೆ. ಕಮಲ್ ಹಾಸನ್ ವಿವಾದದಲ್ಲಿ 'ಎನ್ನಡ' ಎನ್ನುವನ ಎಡವಟ್ಟಿಗೆ 'ಕನ್ನಡ' ಎನ್ನುವ ಶಿವಣ್ಣನನ್ನು ಎಳೆದು ತರುವುದು ತಪ್ಪು ಎಂದು ಹೇಳಿದ್ದಾರೆ. ಮಾಸ್ತಿ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಹಿರಿಯ ಕಲಾವಿದರು ಕಲೆಗೆ ಆಣೆ ಕಟ್ಟು
''ಡಾ.ರಾಜ್ ಕುಮಾರ್, ಅಮಿತಾಬ್ ಬಚ್ಚನ್, ರಜಿನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಇವರಂತಹ ಹಿರಿಯ ಕಲಾವಿದರು ಕಲೆಗೆ ಯಾವತ್ತಿದ್ದರು ಆಣೆಕಟ್ಟು, ಜನರಿಗೆ ಆಣೆ ಕಟ್ಟು. ಅಣ್ಣಾವ್ರನ್ನು ಹೊರತು ಪಡಿಸಿದರೆ ನಾವು ಯಾವತ್ತು ಪರಭಾಷೆಯ ಈ ದೊಡ್ಡ ಸ್ಟಾರ್ಗಳನ್ನ ಬೇರೆ ಭಾಷೆಯವರು ಎಂದು ಪರಿಗಣಿಸಿಲ್ಲ'' ಎಂದು ಮಾಸ್ತಿ ಹೇಳಿದ್ದಾರೆ.
ಮೆದುಳು ಮಾಗಿರುತ್ತೆ, ತೊದಲುವಿಕೆ ಇರುತ್ತೆ
''ನಮ್ಮ ಭಾಷೆಗೆ ಅದರದ್ದೇ ಆದ ಇತಿಹಾಸ ಇದೆ, ಆದರೆ ಇದನ್ನರಿಯದೇ ಕಮಲ್ ಹಾಸನ್ ಮಾತನಾಡಿದ್ದಾರೆ. ಏನೋ ಮಾತನಾಡುವ ಭರದಲ್ಲಿ ದೊಡ್ಡದಾದ ವೇದಿಕೆಯಲ್ಲಿ ಶಿವಣ್ಣ ಅವರ ಎದುರು ಹಾಗೇ ಹೇಳಿರಬಹುದು ಎಂದು ನಾವು ಅಂದುಕೊಳ್ಳಬಹುದಿತ್ತು. ಯಾಕೆಂದರೆ 60 ವಯಸ್ಸಾದ ಮೇಲೆ ಒಂದು ಸಣ್ಣ ತೊದಲುವಿಕೆ ಇದ್ದೇ ಇರುತ್ತೆ, ಮೆದುಳು ಮಾಗಿರುತ್ತೆ, ಆಲೋಚನೆಗಳು ಮಾತಿನ ರೂಪದಲ್ಲಿ ಬರುತ್ತಾ ಇರುತ್ತೆ, ಆ ರಭಸದಲ್ಲಿ ಅವರು ಹೇಳಿರಬಹುದು ಎಂದು ಸುಮ್ಮನಾಗಬಹುದಿತ್ತು.
ದ್ರಾವಿಡ ಭಾಷೆಯಿಂದ ನಾವೆಲ್ಲ ಬಂದವರು ಎಂದು ಹೇಳುವುದು ಅವರ ಉದ್ದೇಶವಾಗಿತ್ತು, ಆದರೆ ನಿಮ್ಮ ಭಾಷೆ ನಮ್ಮ ಭಾಷೆಯಿಂದ ಬಂದಿದೆ ಎಂದು ಹೇಳುವ ಮೂಲಕ ಅವರು ಅಪರಾಧ ಎಸಗಿದರು. ಆ ನಂತರ ಮತ್ತೊಂದು ಕಡೆ ಪತ್ರಕರ್ತರು ನೀವು ಮಾತನಾಡಿದ್ದು ತಪ್ಪು ಎಂದಾಗಾದರು ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು. ಆದರೆ ಅವರು ಉದ್ದಟತನದ ಪ್ರದರ್ಶನ ಮಾಡಿದರು. ಕ್ಷಮೆ ಎಲ್ಲ ಕೇಳಲ್ಲ ಎಂದು ಹೇಳಿದರು. ಇದರಿಂದ ಕನ್ನಡಿಗರಾದ ನಮಗೆಲ್ಲ ನೋವಾಗಿದೆ'' ಎಂದು ಮಾಸ್ತಿ ಹೇಳಿದ್ದಾರೆ.
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ
''ಇನ್ನು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ನೀರಿನ ವಿಚಾರದಲ್ಲಿ ಮೊದಲಿಂದ ವೈಮನಸ್ಸು ಇದೆ. ಅದು ಕಾನೂನು ಹೋರಾಟದಲ್ಲಿದೆ. ಭಾಷೆ ವಿಚಾರ ತುಂಬಾ ಸೂಕ್ಷ್ಮವಾದ ವಿಚಾರ. ನಾವು ತಾಯಿಗೆ ಕೊಡುವ ಗೌರವ ನಮ್ಮ ಭಾಷೆಗೆ ಕೊಡುತ್ತೇವೆ. ಹೀಗಿದ್ದಾಗ ಅವರು ಮಾತನಾಡಿದ್ದು ತಪ್ಪು.
ನಿಜಾ, ಮನುಷ್ಯ ಅಂದ ಮೇಲೆ ತಪ್ಪಾಗುವುದು ಸಹಜ. ಆದರೆ ತಪ್ಪಾದಾಗ ಕ್ಷಮೆ ಎನ್ನುವುದು ಮನಸಿಗೆ ಸಮಾಧಾನ ಕೊಡುತ್ತೆ. ನಾವು ಕನ್ನಡಿಗರು ಬೇರೆ ಭಾಷೆಯವರನ್ನು ಪ್ರೀತಿಸುತ್ತೀವಿ, ಗೌರವಿಸುತ್ತೀವಿ, ಯಾವತ್ತು ಇಷ್ಟೊಂದು ಹಗುರವಾಗಿ ಮಾತನಾಡಿಲ್ಲ. ನಮ್ಮಲ್ಲಿಯೂ ಹಿರಿಯ ಕಲಾವಿದರಿದ್ದಾರೆ, ಅಲ್ಲಿ ಹೋಗಿ ಅನೇಕರು ಕೆಲಸ ಮಾಡ್ತಾರೆ, ಅಲ್ಲಿನ ತಂತ್ರಜ್ಞರು ಬಂದು ಇಲ್ಲಿ ಕೆಲಸ ಮಾಡ್ತಾರೆ, ಇಲ್ಲಿನವರು ಹೋಗಿ ಅಲ್ಲಿ ಕೆಲಸ ಮಾಡ್ತಾರೆ, ಹೀಗಿದ್ದಾಗ ಒಬ್ಬ ಕಲಾವಿದ ಆದರ್ಶವಾಗಿದ್ದವರು ಏಕಾಏಕಿ ಹೀಗೆ ಅಂದಾಗ ನೋವಾಗುತ್ತೆ, ಆದರೂ ಕೂಡ ಏನೋ ಆಯ್ತು ಎಂದುಕೊಳ್ಳಬಹುದಿತ್ತು ಆದರೆ ಅವರು ಸಮರ್ಥಿಸಿಕೊಂಡಿದ್ದು ದೊಡ್ಡ ತಪ್ಪು''. ಎಂದು ಮಾಸ್ತಿ ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕಮಲ್ ಹಾಸನ್ ಮಾಡಿದ ಈ ಎಡವಟ್ಟಿನಿಂದ ಕನ್ನಡದ ಹೆಮ್ಮೆಯ ನಟ ಡಾ.ಶಿವರಾಜ್ ಕುಮಾರ್ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಕಮಲ್ ಹಾಸನ್ ಮಾತನಾಡುವಾಗ ಶಿವಣ್ಣ ಮೌನವಾಗಿ ಕುಳಿತುಕೊಂಡಿದ್ದು ತಪ್ಪು, ಅಲ್ಲಿಯೇ ಕಮಲ್ ಹಾಸನ್ ಗ್ರಹಚಾರ ಬಿಡಿಸಬೇಕಿತ್ತು ಎಂದು ಹೇಳುತ್ತಿದ್ದಾರೆ. ಶಿವಣ್ಣ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಕುರಿತು ಕೂಡ ಮಾಸ್ತಿ ಮಾತನಾಡಿದ್ದಾರೆ.
ಕಮಲ್ ಹಾಸನ್ ವಿಚಾರದಲ್ಲಿ ಶಿವಣ್ಣ ಅವರನ್ನು ದೂಷಿಸುವುದು ತಪ್ಪು
''ದೊಡ್ಡ ವೇದಿಕೆ ಅಂದ ಮೇಲೆ ಅಲ್ಲಿ ಧ್ವನಿ ಪ್ರತಿಧ್ವನಿಸುತ್ತಿರುತ್ತೆ. ಅಭಿಮಾನಿಗಳ ಕೀರುಚಾಟ ಇರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಕಮಲ್ ಹಾಸನ್ ಅವರ ಮಾತುಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಅವರ ಪಕ್ಕದಲ್ಲಿದ್ದರೆ ಶಿವಣ್ಣ ಅವರಿಗೆ ವಿಷಯ ತಿಳಿದಿರುವುದು ಆದರೆ ಶಿವಣ್ಣ ಅಲ್ಲಿ ಎದುರುಗಡೆ ಕುಂತಿದ್ದರು. ಸಹಜವಾಗಿ ಅವರಿಗೆ ಸ್ಪಷ್ಟವಾಗಿ ಕೇಳಿಸಿರುವುದಿಲ್ಲ.
ಆದರೆ ಇದನ್ನರಿಯದೇ ಕಮಲ್ ಹಾಸನ್ ಮಾತನಾಡಿರುವ ವಿಡಿಯೋವನ್ನು ತಿರುಚಿ ಭಾಷೆಯ ಬಗ್ಗೆ ಮಾತನಾಡಿದಾಗ ಶಿವಣ್ಣ ಚಪ್ಪಾಳೆ ತಟ್ಟಿದಂತೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಖುದ್ದು ಶಿವಣ್ಣ ಅವರೇ ನನಗೆ ಗೊತ್ತಾಗಲಿಲ್ಲ ಎಂದು ಸ್ಪಷ್ಟನೆಯನ್ನು ಕೂಡ ಕೊಟ್ಟಿದಾರೆ. ಕನ್ನಡದ ವಿಚಾರ ಬಂದಾಗ ಮೊದಲಿಂದ ಶಿವಣ್ಣ ನಾಯಕತ್ವ ವಹಿಸಿಕೊಂಡವರು. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಡಾ.ರಾಜ್ ಕುಮಾರ್ ಅವರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಅವರ ಕನ್ನಡಾಭಿಮಾನ ಎಲ್ಲರಿಗೆ ಗೊತ್ತಿರುವಂತಹದ್ದೆ. ಹೀಗಾಗಿ ಶಿವಣ್ಣ ಅವರ ಕನ್ನಡಾಭಿಮಾನವನ್ನು ಪ್ರಶ್ನಿಸುವುದು ತಪ್ಪು, ಈ ವಿಚಾರ- ವಿವಾದದಲ್ಲಿ ಶಿವಣ್ಣ ಅವರನ್ನು ದೂಷಿಸುವುದು ಕೂಡ ತಪ್ಪು'' ಎಂದು ಮಾಸ್ತಿ ಹೇಳಿದ್ದಾರೆ.


Click it and Unblock the Notifications











