ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಆಗಬೇಕೆಂದು ತಮಿಳಿಗರ ಒತ್ತಾಯ; ಅಣ್ಣಾವ್ರು ಏನಂದಿದ್ರು?
ರಾಜ್ಯದಲ್ಲಿ ಕನ್ನಡಿಗರ ಮೇಲಿನ ಪರಭಾಷಿಕರ ದಬ್ಬಾಳಿಕೆ ಇಂದು ನಿನ್ನೆಯದ್ದಲ್ಲ. ಕನ್ನಡಿಗರು ಶಾಂತಪ್ರಿಯರು. ಹಾಗಾಗಿ ಸುಖಾಸುಮ್ಮನೆ ಯಾರ ಮೇಲೂ ಮುಗಿಬೀಳುವುದಿಲ್ಲ. ಹಾಗಂತ ಯಾರಾದರೂ ಕೆಣಕಿದರೆ ಸುಮ್ಮನಿರುವುದು ಇಲ್ಲ. ಸದ್ಯ ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಭಾರೀ ಚರ್ಚೆಗೆ ಹುಟ್ಟಾಕ್ಕಿದೆ.
ಕಮಲ್ ಹಾಸನ್ ತಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಮಾತೇಯಿಲ್ಲ ಎನ್ನುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ನಲ್ಲಿ ಕೂಡ ಹಿನ್ನಡೆಯಾಗಿದೆ. ನ್ಯಾಯಾಧೀಶರು ಕೂಡ ಕಮಲ್ ಕ್ಷಮೆ ಕೇಳಬೇಕು ಎಂದು ತಾಕೀತು ಮಾಡಿದ್ದಾರೆ. ಕರ್ನಾಟಕದಲ್ಲಿ ನನ್ನ ಸಿನಿಮಾ ಬಿಡುಗಡೆಯಾಗದಿದ್ದರೂ ಪರವಾಗಿಲ್ಲ, ನಾನು ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಮಲ್ ಹಾಸನ್ ನಡೆಯನ್ನು ತಮಿಳರು ಬೆಂಬಲಿಸಿದ್ದಾರೆ. ಅದಕ್ಕೆ ಕಮಲ್ ಸಹ ಧನ್ಯವಾದ ತಿಳಿಸಿದ್ದಾರೆ. ಮೊದಲಿನಿಂದಲೂ ತಮಿಳರು ಕನ್ನಡಿಗರನ್ನು ಕೆಣಕುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕಾವೇರಿ ಹೋರಾಟದ ಸಮಯದಲ್ಲಿ ಇದು ಜಗಜ್ಜಾಹೀರಾಗಿದೆ. ರಜನಿಕಾಂತ್, ಸತ್ಯರಾಜ್ ಕೂಡ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಇನ್ನು ಒಮ್ಮೆ ವರನಟ ಡಾ. ರಾಜ್ಕುಮಾರ್ ಮೇಲೆ ಊಟಿಯಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು.
ಬೆಂಗಳೂರಿನಲ್ಲಿ ತಮಿಳು ಭಾಷಿಕರು ಹೆಚ್ಚು ಜನ ಇರುವ ಕಾರಣ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಕೆಲ ತಮಿಳು ಸಂಘಗಳ ಮುಖಂಡರು ಬೇಡಿಕೆ ಇಟ್ಟಿದ್ದು ಇದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾದಾಗ ಸುಮ್ಮನಾಗಿದ್ದರು. ಆಗ ಕೂಡ ಅಣ್ಣಾವ್ರು ಈ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಡಾ. ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾರಾ ಗೋವಿಂದು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.
"ಒಂದ್ಕಾಲದಲ್ಲಿ ಬೆಂಗಳೂರಿನಲ್ಲಿ ತಮಿಳು ಸಂಘಟನೆಗಳು ಆರ್ಭಟ ಜೋರಾಗಿತ್ತು. ಸಭೆ ಸಮಾರಂಭ ನಡೆಸಿ ದರ್ಬಾರ್ ನಡೆಸುತ್ತಿದ್ದರು. ಕೆಲ ತಮಿಳು ಮುಖಂಡರು ಸೇರಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಬೆಂಗಳೂರಿನಲ್ಲಿ ತಮಿಳು ಭಾಷಿಕರು ಹೆಚ್ಚಾಗಿ ಇದ್ದಾರೆ. ಹಾಗಾಗಿ ನಗರವನ್ನು ಕೇಂದ್ರಾಡಳಿತ ಪ್ರದೇಶ ಪಟ್ಟಿಗೆ ಒಳಪಡಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದರು" ಎಂದು ಸಾರಾ ಗೋವಿಂದು ನೆನಪಿಸಿಕೊಂಡಿದ್ದಾರೆ.
ತಮಿಳು ಸಂಘಟನೆಗಳ ಮುಖಂಡರ ಈ ಮನವಿ ವಿಚಾರ ಮುಂದೆ ಏನಾಯಿತು. ಅಣ್ಣಾವ್ರು ಈ ಬಗ್ಗೆ ಏನು ಹೇಳಿದ್ದರು ಎನ್ನುವುದನ್ನು ಸಾರಾ ಗೋವಿಂದು ವಿವರಿಸಿದ್ದಾರೆ. "ಆಗ ರಾಜ್ಯದಲ್ಲಿ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘ ಪ್ರಬಲವಾಗಿತ್ತು. ಸರ್ಕಾರಕ್ಕೆ ಸವಾಲು ಹಾಕುವಂತಹ ಶಕ್ತಿಯಿತ್ತು. ಆಗ ನಾವೇ ದೊಡ್ಡ ಮೆರವಣಿಗೆ ಮಾಡಿದ್ದೆವು. ಕೆಂಪೇಗೌಡರು ಕಟ್ಟಿರುವ ನಗರ ಇದು. ಈಗ ತಮಿಳರು ಹೆಚ್ಚು ಜನ ಬಂದು ಇಲ್ಲಿ ನೆಲೆಸಿರಬಹುದು. ಆದರೆ ಕರ್ನಾಟಕದಲ್ಲಿ ಬೆಂಗಳೂರಿಗೆ ಆದ್ಯತೆ. ಇದನ್ನು ಕೇಂದ್ರಾಡಳಿತ ಪ್ರದೇಶ ಮಾಡಬಾರದು ಎಂದು ಹೋರಾಟ ಮಾಡಿದ್ದೆವು. ಬಳಿಕ ಎಲ್ಲರೂ ಸುಮ್ಮನಾಗಿದ್ದರು" ಎಂದು ಹೇಳಿದ್ದಾರೆ.
ಪತ್ರಿಕೆಯವರು ಡಾ. ರಾಜ್ಕುಮಾರ್ ಅವರ ಬಳಿ ಇದೇ ವಿಚಾರವಾಗಿ ಪ್ರಶ್ನೆ ಕೇಳಿದಾಗ "ಅದು ಹೇಗೆ ಸಾಧ್ಯ? ಅದೆಲ್ಲ ಆಗದೇ ಇರುವ ಕೆಲಸ. ಕರ್ನಾಟಕದಲ್ಲೇ ಬೆಂಗಳೂರು ಇರುತ್ತದೆ. ಕೇಂದ್ರಾಡಳಿತ ಪ್ರದೇಶ ಮಾಡಲು ಒಪ್ಪುವುದಿಲ್ಲ" ಎಂದು ಹೇಳಿದ್ದರು ಎಂದು ಸಾರಾ ಗೋವಿಂದು ಮೆಲುಕು ಹಾಕಿದ್ದಾರೆ.
ತಮಿಳು ಸಂಘಟನೆಗಳ ಈ ಬೇಡಿಕೆಗೆ ತಮಿಳುನಾಡು ಸಿಎಂ ಎಂಜಿಆರ್ ಕೂಡ ಬೆಂಬಲಿಸಿದ್ದರು ಎನ್ನುವ ಊಹಾಪೋಹ ಕೂಡ ಇದೆ. ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಈ ಬಗ್ಗೆ ಪರಿಶೀಲನೆ ನಡೆಸಲು ಇಬ್ಬರು ಸಚಿವರನ್ನು ಬೆಂಗಳೂರಿಗೆ ಕಳುಹಿಸಿದ್ದರು ಎಂದು IBTimes ವೆಬ್ಸೈಟ್ ವರದಿ ಮಾಡಿದೆ. ಅಂದು ಅಣ್ಣಾವ್ರು ಕೂಡ ಇದನ್ನು ಒಪ್ಪುವುದಿಲ್ಲ, ಇದು ಬಹಳ ಸೂಕ್ಷ್ಮ ವಿಚಾರ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು ಎನ್ನಲಾಗುತ್ತದೆ.
ಡಾ. ರಾಜ್ಕುಮಾರ್ ಅಭಿಮಾನಿ ಹಾಲುಜೇನು ರಾಮ್ಕುಮಾರ್ ಕೂಡ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದರು. ಅಂದು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಬೇಕು ಎಂದು ಕೆಲವರು ಪಟ್ಟು ಹಿಡಿದಾಗ ಎಂಜಿಆರ್ ಕೂಡ ದನಿಗೂಡಿಸಿದ್ದರು. ಇಲ್ಲಿ ಹೋರಾಟ ನಡೆದು ಅಣ್ಣಾವ್ರು ಹೋರಾಟಕ್ಕೆ ಬೆಂಬಲ ಸೂಚಿಸುತ್ತಾರೆ ಎಂದು ಎಲ್ಲವೂ ತಣ್ಣಗಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.
ಆ ಸಮಯದಲ್ಲಿ ಬೆಂಗಳೂರಿನ ಜನಸಂಖ್ಯೆ 40ರಿಂದ 50 ಲಕ್ಷ ಇತ್ತು. ಅದರಲ್ಲಿ ಶೇ 33ರಷ್ಟು ಜನ ತಮಿಳು ಭಾಷಿಕರು ಇದ್ದರು. ಹಾಗಾಗಿ ಇಂತಾದೊಂದು ಬೇಡಿಕೆಯನ್ನು ಕೆಲ ತಮಿಳು ಸಂಘಟನೆಗಳ ಮುಖಂಡರು ಮುಂದಿಟ್ಟಿದ್ದರು.


Click it and Unblock the Notifications











