ಟಿ.ಎನ್.ನಾಗೇಶ್ ಸಾರಥ್ಯದಲ್ಲಿ ಸಿನಿಮಾ ಆಗುತ್ತಿದೆ ಕನಕದಾಸರ 'ರಾಮಧಾನ್ಯ'
ಕನಕದಾಸರ ಜನಪ್ರಿಯ ಸಾಹಿತ್ಯದಲ್ಲಿ 'ರಾಮಧಾನ್ಯ ಚರಿತೆ' ಕೃತಿ ಸಹ ಒಂದು. ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುವ ವಿಷಯವನ್ನು ಈ ಕೃತಿಯಲ್ಲಿ ನೋಡಬಹುದು. ಈ ಕೃತಿ ಆಧಾರಿತ ನಾಟಕ 'ರಾಮಧಾನ್ಯ' ಈಗ ಸ್ವಲ್ಪ ಮಟ್ಟಿನ ರೂಪಾಂತರ ಪಡೆದು ಸಿನಿಮಾ ಆಗುತ್ತಿದೆ.
ಹೌದು, ಈ ಹಿಂದೆ 'ಒಲವೇ ವಿಸ್ಮಯ' ಸೇರಿದಂತೆ ಮುಂತಾದ ಚಿತ್ರಗಳನ್ನು ಮಾಡಿರುವ ಟಿ.ಎನ್.ನಾಗೇಶ್ ರವರು 'ರಾಮಧಾನ್ಯ'ವನ್ನು ಒಂದಿಷ್ಟು ರೂಪಾಂತರ ಮಾಡಿ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ.

ಕನಕದಾಸರ 'ರಾಮಧಾನ್ಯ ಚರಿತೆ' ಕೃತಿಯನ್ನು ಮೂಲವಾಗಿಟ್ಟುಕೊಂಡು ರೂಪಾಂತರ ತಂಡದವರು 'ರಾಮಧಾನ್ಯ' ಎಂಬ ನಾಟಕವನ್ನು ನಿರ್ಮಿಸಿ ಈಗಾಗಲೇ ಹಲವು ಬಾರಿ ಪ್ರದರ್ಶನ ನೀಡಿದ್ದಾರೆ. ಈ ನಾಟಕವನ್ನು ಕೆ.ಎಸ್.ಡಿ.ಎಲ್ ಚಂದ್ರು ಎಂಬುವವರು ನಿರ್ದೇಶನ ಮಾಡಿದ್ದರು. ಈ ನಾಟಕ ನೋಡಿದ ನಾಗೇಶ್ ರವರು ಕೊಂಚ ರೂಪಾಂತರ ಮಾಡಿಕೊಂಡು ಈ ನಾಟಕದಲ್ಲಿ ಕೆಲಸ ಮಾಡಿರುವ ಬಸವರಾಜ್ ಸೂಳೇರಿಪಾಳ್ಯ ಎಂಬುವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.
ನಾಗೇಶ್ ರವರು ಆಕ್ಷನ್ ಕಟ್ ಹೇಳಲಿರುವ 'ರಾಮಧಾನ್ಯ' ಚಿತ್ರದಲ್ಲಿ ಮೂರು ವಿಭಿನ್ನ ಕಾಲಘಟ್ಟಗಳು ತೆರೆಮೇಲೆ ಬರಲಿದೆಯಂತೆ. ಜೊತೆಗೆ ಈ ಮೂರು ಕಾಲಘಟ್ಟಗಳಲ್ಲಿ ಯಶಸ್ ಸೂರ್ಯ ರವರು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದರಲ್ಲಿ ಕನಸದಾಸರ ಪಾತ್ರವೂ ಇರಲಿದೆ.
ಅಂದಹಾಗೆ ದಶಮುಖ ವೆಂಚರ್ ಸಂಸ್ಥೆಯಡಿ ನಾಗೇಶ್ ರವರು ಹತ್ತು ಜನರೊಂದಿಗೆ ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೆನಕ ರಾಜು ಛಾಯಾಗ್ರಹಣ, ದೇಸಿ ಮೋಹನ್ ಸಂಗೀತ ಸಂಯೋಜನೆ, ಬಸವರಾಜ್ ಸೂಳೇರಿಪಾಳ್ಯ ಚಿತ್ರಕಥೆ-ಸಂಭಾಷಣೆ ಇರಲಿದೆ.


Click it and Unblock the Notifications











