ನಿರ್ದೇಶಕ ಪ್ರೇಮ್ ವಿರುದ್ಧ ಮತ್ತೆ ಗುಡುಗಿದ ಕನಕಪುರ ಶ್ರೀನಿವಾಸ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಚಿತ್ರದ ಸಕ್ಸಸ್ ಖುಷಿಯಲ್ಲಿ ತೇಲುತ್ತಿರುವ ನಿರ್ದೇಶಕ ಪ್ರೇಮ್ ವಿರುದ್ಧ ಇತ್ತೀಚೆಗಷ್ಟೇ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಂಚನೆಯ ಬಾಂಬ್ ಸಿಡಿಸಿದ್ದರು.
ಒಂಬತ್ತು ವರ್ಷಗಳ ಹಿಂದೆ ಸಿನಿಮಾ ಮಾಡುವುದಾಗಿ ಕನಕಪುರ ಶ್ರೀನಿವಾಸ್ ರಿಂದ ನಿರ್ದೇಶಕ ಪ್ರೇಮ್ ದುಡ್ಡು ತೆಗೆದುಕೊಂಡಿದ್ದರಂತೆ. ಆದ್ರೆ, ಚಿತ್ರವನ್ನೂ ಮಾಡದೆ, ಹಣವನ್ನೂ ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಅಂತ ಕೆಲ ದಿನಗಳ ಹಿಂದೆಯಷ್ಟೇ ಪ್ರೆಸ್ ಮೀಟ್ ಒಂದರಲ್ಲಿ ಕನಕಪುರ ಶ್ರೀನಿವಾಸ್ ಆರೋಪಿಸಿದ್ದರು.
ಇದೀಗ ಪ್ರೇಮ್ ಕಛೇರಿ ಮುಂದೆ ಕನಕಪುರ ಶ್ರೀನಿವಾಸ್ ಪ್ರತಿಭಟನೆ ನಡೆಸಿದ್ದಾರೆ. ''ದುಡ್ಡು ವಾಪಸ್ ಮಾಡಲು ಸಿದ್ಧ ಆದರೆ ಮಾಧ್ಯಮಗಳ ಮುಂದೆ ಕನಕಪುರ ಶ್ರೀನಿವಾಸ್ ನನ್ನ ತೇಜೋವಧೆ ಮಾಡಿದ್ದಾರೆ'' ಅಂತ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

ಏನಿದು ವಿವಾದ.?
'ಜೋಗಿ' ಬಳಿಕ ಒಂದು ಸಿನಿಮಾ ಮಾಡಲು ನಿರ್ದೇಶಕ ಪ್ರೇಮ್ ಗೆ ಕನಕಪುರ ಶ್ರೀನಿವಾಸ್ 10 ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ಕೊಟ್ಟಿದ್ದರಂತೆ. ಆದ್ರೆ, ಪ್ರೇಮ್ ಸಿನಿಮಾ ಮಾಡಲಿಲ್ಲ. ಹೀಗಾಗಿ, ಹಣ ವಾಪಸ್ ಕೊಡುವಂತೆ ಕನಕಪುರ ಶ್ರೀನಿವಾಸ್ ಕೇಳಿದ್ದರು. ಪ್ರೇಮ್ 2 ಲಕ್ಷ ರೂಪಾಯಿ ವಾಪಸ್ ಕೊಟ್ಟಿದ್ದಾರೆ. ಉಳಿದ ಹಣ ವಾಪಸ್ ಮಾಡಿಲ್ಲ ಎಂಬುದು ಕನಕಪುರ ಶ್ರೀನಿವಾಸ್ ಆರೋಪ.

ಪ್ರೇಮ್ ಹೇಳುವುದೇನು.?
''ಸಿನಿಮಾಗಾಗಿ ನಾನು ಒಂದು ವರ್ಷ ಕೆಲಸ ಮಾಡಿದ್ದೇನೆ. ಆದ್ರೆ, ಚಿತ್ರ ಮಾಡಲು ಕನಕಪುರ ಶ್ರೀನಿವಾಸ್ ಮುಂದೆ ಬರಲಿಲ್ಲ. ಅವರಿಂದ ನಾನು ಮೂರ್ನಾಲ್ಕು ಚಿತ್ರಗಳನ್ನು ಮಿಸ್ ಮಾಡಿಕೊಂಡೆ. ಮಾಧ್ಯಮಗಳ ಮುಂದೆ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿ ತೇಜೋವಧೆ ಮಾಡಿದ್ದಾರೆ'' ಎನ್ನುತ್ತಾರೆ ನಿರ್ದೇಶಕ ಪ್ರೇಮ್.

ನನಗೆ ದುಡ್ಡು ಕೊಡುವವರು ಯಾರು.?
''ಈಗಾಗಲೇ ನಾನು ಐದು ಲಕ್ಷ ವಾಪಸ್ ಮಾಡಿದ್ದೇನೆ. ಉಳಿದ ಹಣ ವಾಪಸ್ ಕೊಡುವೆ, ತೊಂದರೆ ಇಲ್ಲ. ಆದ್ರೆ, ಒಂದೆರಡು ವರ್ಷ ನಾನು ಅವರ ಚಿತ್ರಕ್ಕಾಗಿ ಕೆಲಸ ಮಾಡಿರುವೆ. ಅದಕ್ಕೆ ನನಗೆ ದುಡ್ಡು ಕೊಡುವವರು ಯಾರು.?'' ಎಂದು ಪ್ರಶ್ನಿಸುತ್ತಾರೆ ನಿರ್ದೇಶಕ ಪ್ರೇಮ್.

ಇಂತಹ ನಿರ್ಮಾಪಕರು ಬೇಡ
''ನನ್ನ ಬಗ್ಗೆ ಕನಕಪುರ ಶ್ರೀನಿವಾಸ್ ಕೆಟ್ಟದಾಗಿ ಮಾತನಾಡಿದ್ದಾರೆ. ನನಗೆ ಬೇಜಾರಾಗಿದೆ. ಅದರ ಬಗ್ಗೆ ನಾನು ಸೂಕ್ತ ಕ್ರಮ ಕೈಗೊಳ್ಳುವೆ. ಕನ್ನಡ ಚಿತ್ರರಂಗಕ್ಕೆ ಇಂತಹ ನಿರ್ಮಾಪಕರು ಬೇಡ'' ಎಂದು ಕೈಮುಗಿಯುತ್ತಾರೆ ನಿರ್ದೇಶಕ ಪ್ರೇಮ್.

ವಾಣಿಜ್ಯ ಮಂಡಳಿಯಲ್ಲಿ ನಿರ್ಧಾರ
ಕನಕಪುರ ಶ್ರೀನಿವಾಸ್ ವಿರುದ್ಧ ಬೇಸರಗೊಂಡಿರುವ ಪ್ರೇಮ್ ಫಿಲ್ಮ್ ಚೇಂಬರ್ ಮೆಟ್ಟಿಲೇರಲಿದ್ದಾರೆ. ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಅಂತ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.


Click it and Unblock the Notifications











