ಬೆಳಗಾವಿಯಲ್ಲಿ ನಡೆಯಲಿದೆ ಮೂರು ದಿನಗಳ ಕನ್ನಡ ಚಲನಚಿತ್ರೋತ್ಸವ
ಬೆಳಗಾವಿಯಲ್ಲಿ ಸದಭಿರುಚಿಯ ಕನ್ನಡ ಚಲನಚಿತ್ರೋತ್ಸವ ಇದೇ ಡಿಸೆಂಬರ್ 17 ರಿಂದ ಮೂರುದಿನಗಳ ಕಾಲ ನಡೆಯಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೆಳಗಾವಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ ಈ ಚಿತ್ರೋತ್ಸವದಲ್ಲಿ ಕನ್ನಡದಲ್ಲಿ ಇತ್ತೀಚೆಗೆ ಬಂದ ಏಳು ಸದಭಿರುಚಿಯ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತವೆ.
ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸ್ಮಾರಕ ಭವನದಲ್ಲಿ, ಡಾ,ಕೋಡ್ಕಿಣಿ ಹಾಲ್ ನಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಕನ್ನಡದ ಸದಭಿರುಚಿಯ ಚಿತ್ರಗಳಾದ ಸಾವಿತ್ರಿಬಾಯಿ ಫುಲೆ, ಒಂದಲ್ಲಾ ಎರಡಲ್ಲಾ, ಶುದ್ಧಿ, ಅಮ್ಮಚ್ಚಿಯೆಂಬ ನೆನಪು, ಒಂದು ಮೊಟ್ಟೆಯ ಕಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊದಲಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದಿವಂಗತ ನಾಯಕನಟ ಅಂಬರೀಷ್ ಅವರ ಸ್ಮರಣಾರ್ಥ 'ಅಂತ' ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
ಉಚಿತ ಪ್ರದರ್ಶನ ಇದ್ದು, ಈ ಸದವಕಾಶವನ್ನು ಸಿನಿಮಾ ಪ್ರೇಕ್ಷಕರು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ, ಡಿಸೆಂಬರ್ 17 ರಂದು ಸಂಜೆ 6 ಗಂಟೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಸಚಿವೆ ಶ್ರೀಮತಿ ಜಯಮಾಲಾ, ಕೆ.ಎಲ್.ಇ.ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಪ್ರಭಾಕರ ಕೋರೆ ಕೆ.ಎಲ್.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿವೇಕ್ ಎ.ಸಾವಜಿ, ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರುಗಳು ಮುಖ್ಯ ಅತಿಥಿಗಳಾಗಿರುತ್ತಾರೆ.

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ ಅವರು ಅಧ್ಯಕ್ಷತೆ ವಹಿಸುತ್ತಾರೆ, ಕರ್ನಾಟಕದಲ್ಲಿ ಇಂದು ಚಿತ್ರೋದ್ಯಮ ಬೃಹತ್ತಾಗಿ ಬೆಳೆದು ನಿಂತಿದೆ. ಸರ್ಕಾರದ ಪ್ರೋತ್ಸಾಹಕರ ನೀತಿಯಿಂದಾಗಿ ಚಿತ್ರರಂಗಕ್ಕೆ ವರ್ಷದಿಂದ ವರ್ಷಕ್ಕೆ ಪ್ರತಿಭಾವಂತರ ಪ್ರವೇಶವಾಗುತ್ತಿದೆ.
ಈ ಮೂಲಕ ಕನ್ನಡ ಚಿತ್ರಗಳು ವಿಶ್ವಮಟ್ಟದಲ್ಲಿ ಪ್ರದರ್ಶನ ಕಾಣುವ ಹಂತ ತಲುಪಿದೆ, ಭಾರತದ ಯಾವುದೇ ಭಾಷೆಯ ಚಿತ್ರಗಳಿಗೆ ಸರಿಸಮನಾಗಿ ಬೆಳೆದ ಕನ್ನಡ ಚಿತ್ರರಂಗದಲ್ಲಿ ಎದ್ದುಕಾಣುವ ಅಂಶವೆಂದರೆ ಸದಭಿರುಚಿಯ ಚಿತ್ರ ನಿರ್ಮಾಣ. ತಾಂತ್ರಿಕ ಬೆಳವಣಿಗೆಯ ಜೊತೆಜೊತೆಗೇ ಪ್ರೇಕ್ಷಕರನ್ನು ಹಿಡಿದಿಡುವ ಗಟ್ಟಿಯಾದ ಕಥಾಹೂರಣವೂ ಇಲ್ಲಿ ಪ್ರಧಾನವಾಗಿರುತ್ತದೆ. ಹೀಗಾಗಿ ಕನ್ನಡ ಚಲನಚಿತ್ರಗಳು ಇಂದು ವಿಶ್ವವ್ಯಾಪಿ ಪ್ರೇಕ್ಷಕರನ್ನು ಸೆಳೆಯಲು ಕಾರಣವಾಗಿದೆ.


Click it and Unblock the Notifications











