ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಕಂಗನಾ: ಆದೇಶ ಕಾಯ್ದಿರಿಸಿದ ಕರ್ನಾಟಕ ನ್ಯಾಯಾಲಯ
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದ ಬಾಲಿವುಡ್ ನಟಿ ಕಂಗನಾ ವಿರುದ್ಧ ತುಮಕೂರು ಜೆಎಂಸಿಎಫ್ಸಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.
ಈ ದೂರಿನ ಹಿನ್ನೆಲೆ ವಿಚಾರಣೆ ನಡೆಸಿದ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶವನ್ನು ಅಕ್ಟೋಬರ್ 9 ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ. ಅಷ್ಟಕ್ಕೂ, ಕಂಗನಾ ವಿರುದ್ಧ ತುಮಕೂರಿನಲ್ಲಿ ಕೇಸ್ ದಾಖಲಿಸಿರುವುದು ಯಾರು? ಕಂಗನಾ ಟ್ವೀಟ್ನಲ್ಲಿ ಏನಿತ್ತು? ಮುಂದೆ ಓದಿ...

ರಮೇಶ್ ನಾಯಕ್ ದೂರು
ಕಂಗನಾ ರಣಾವತ್ ಅವರ ಟ್ವೀಟ್ ಖಂಡಿಸಿರುವ ತುಮಕೂರಿನ ನಿವಾಸಿ ಹಾಗೂ ಹೈ ಕೋರ್ಟ್ ವಕೀಲ ಎಲ್ ರಮೇಶ್ ಕುಮಾರ್, ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 22 ರಂದು ಡಿಜಿಪಿ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಆದ್ರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವುದಾಗಿ ಹೇಳಿದ್ದರು.

ಕಂಗನಾ ಟ್ವೀಟ್ನಲ್ಲಿ ಏನಿತ್ತು?
ಪ್ರತಿಭಟನೆ ಮಾಡುತ್ತಿರುವ ರೈತರನ್ನುದ್ದೇಶಿಸಿ ಟ್ವೀಟ್ ಮಾಡಿದ್ದ ಕಂಗನಾ, 'ಸಿಎಎಯಿಂದ ಒಬ್ಬರ ನಾಗರೀಕತೆಯೂ ಹೋಗಲಿಲ್ಲ, ಆದರೆ ಇವರು ರಕ್ತದ ನದಿಯನ್ನೇ ಹರಿಸಿದರು. ಅದೇ ಭಯೋತ್ಪಾದಕರು ಈಗ ಮತ್ತೆ ಪ್ರತಿಭಟಿಸುತ್ತಿದ್ದಾರೆ. ಮಲಗಿರುವವರನ್ನು ಎಬ್ಬಿಸಬಹುದು, ತಪ್ಪು ತಿಳಿದಿರುವವರಿಗೆ ಸರಿಯಾದ ಮಾಹಿತಿ ಕೊಡಬಹುದು, ಆದರೆ ಮಲಗಿರುವಂತೆ ನಟಿಸುತ್ತಿರುವವರಿಗೆ, ದಡ್ಡರಂತೆ ನಟಿಸುತ್ತಿರುವವರಿಗೆ ಏನು ತಿಳಿಹೇಳಿದರೆ ಏನು ಪ್ರಯೋಜನ?' ಎಂದಿದ್ದರು.

ರೈತರನ್ನು ಭಯೋತ್ಪಾದಕರು ಎಂದಿಲ್ಲ
ತಮ್ಮ ಟ್ವೀಟ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾರನೇಯ ದಿನ ಮತ್ತೊಂದು ಟ್ವೀಟ್ ಮಾಡಿದ ಕಂಗನಾ ರಣೌತ್, 'ಪಪ್ಪುವಿನ ಸೇನೆ ಸುಳ್ಳು ಸುದ್ದಿಗಳನ್ನು ಇಟ್ಟುಕೊಂಡು ಗಲಾಟೆಗಳನ್ನು ಮಾಡುತ್ತಿದೆ' ಎಂದಿದ್ದಾರೆ. ನಾನು ರೈತರನ್ನು ಭಯೋತ್ಪಾದಕರು ಎಂದಿಲ್ಲ, ನಾನು ಹಾಗೆ ಹೇಳಿದ್ದಾಗಿ ಸಾಬೀತು ಮಾಡಿದರೆ ನಾನು ಕ್ಷಮೆ ಕೇಳುತ್ತೇನೆ'' ಎಂದಿದ್ದಾರೆ.
Recommended Video

ಅಕ್ಟೋಬರ್ 9ಕ್ಕೆ ಆದೇಶ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9ಕ್ಕೆ ನ್ಯಾಯಾಲಯ ಆದೇಶ ಪ್ರಕಟಿಸಲಿದೆ. ಈ ಪ್ರಕರಣದಲ್ಲಿ ಕಂಗನಾಗೆ ಸಂಕಷ್ಟ ಎದುರಾಗಬಹುದು ಎಂಬ ಆತಂಕವೂ ಕಾಡುತ್ತಿದೆ. ಇದಕ್ಕೆ ಉತ್ತರ ಶುಕ್ರವಾರ ಸಿಗಲಿದೆ.


Click it and Unblock the Notifications











