ಕನ್ನಡ ಬದ್ಲು 'ಕನ್ನಡ್' ಅಂದ್ರೆ ಪರವಾಗಿಲ್ಲ ಬಿಡಿ, ಇದೆಲ್ಲಾ ಚಿಲ್ರೆ ವಿಷ್ಯ- ಗುಲ್ಷನ್ ದೇವಯ್ಯ ಹೇಳಿಕೆ ವೈರಲ್
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ- 1' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಚಿತ್ರದ ಪ್ರತಿ ಪಾತ್ರ, ನಟಿಸಿದ ಪ್ರತೊಯೊಬ್ಬ ಕಲಾವಿದರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. ಕುಲಶೇಖರನಾಗಿ ಗುಲ್ಷನ್ ದೇವಯ್ಯ ನಟನೆಗೂ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಸದ್ಯ ಕನ್ನಡ ಭಾಷೆ ಮಾತನಾಡುವ ಬಗ್ಗೆ ಗುಲ್ಷನ್ ಹೇಳಿಕೆ ಚರ್ಚೆ ಹುಟ್ಟಾಕ್ಕಿದೆ.
ಕನ್ನಡ ಎನ್ನುವುದನ್ನು ಉತ್ತರ ಭಾರತದ ಕೆಲವರು 'ಕನ್ನಡ್' ಎಂದು ಉಚ್ಛಾರಣೆ ಮಾಡುತ್ತಿರುತ್ತಾರೆ. ಈ ಬಗ್ಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುವುದು ಇದೆ. ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಉತ್ತರ ಭಾರತದ ಪತ್ರಕರ್ತರು ಕೆಲವೊಮ್ಮೆ ಕನ್ನಡ್ ಅಂದಾಗ ಅದು ಕನ್ನಡ್ ಅಲ್ಲ, ಕನ್ನಡ ಎಂದು ಯಶ್ ಹಾಗೂ ಸುದೀಪ್ ಸರಿಪಡಿಸಿರುವುದು ಇದೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಟ ಗುಲ್ಷನ್ ದೇವಯ್ಯ ಸದ್ಯ ಬಾಲಿವುಡ್ನಲ್ಲಿ ಗುರ್ತಿಸಿಕೊಂಡಿದ್ದಾರೆ. ಹಿಂದಿ ಸಿನಿಮಾ ಹಾಗೂ ವೆಬ್ ಸಿರೀಸ್ಗಳಲ್ಲಿ ಹೆಚ್ಚು ನಟಿಸಿದ್ದಾರೆ. 'ಕಾಂತಾರ- 1' ಕನ್ನಡದಲ್ಲಿ ಗುಲ್ಷನ್ ನಟಿಸಿರುವ ಮೊದಲ ಸಿನಿಮಾ. ಅವರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿ ತಮ್ಮ ವೈಯಕ್ತಿಕ ಹಾಗೂ ಸಿನಿ ಜರ್ನಿ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಕನ್ನಡ ಭಾಷೆ ಉಚ್ಛಾರಣೆ ಬಗ್ಗೆ ಗುಲ್ಷನ್ ನೀಡಿರುವ ಹೇಳಿಕೆ ವೈರಲ್ ಆಗ್ತಿದೆ. ಈ ಹಿಂದೆ ಕೂಡ ಇದೇ ರೀತಿ ಹೇಳಿಕೆಗಳಿಂದ ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಜಿಮ್ಮಿ ಜಿಮ್ಮಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಗುಲ್ಷನ್ ಮಾತನಾಡಿದ್ದಾರೆ. "ಪತ್ರಕರ್ತರೊಬ್ಬರು ಕನ್ನಡ್ ಎಂದಾಗ ನಾನು ಅದನ್ನು ಸರಿಪಡಿಸಲಿಲ್ಲ ಎಂದು ನನ್ನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನಿದೆ. ನಾನು ಕೆಲವೊಮ್ಮೆ ಹಿಂದಿ ಮಾತನಾಡುವಾಗ ಕನ್ನಡ್ ಅಂತೀನಿ. ಅದರಲ್ಲೇನಿದೆ ಬಿಡಿ" ಎಂದಿದ್ದಾರೆ.
ನಾವು ಕೂಡ ಕೆಲ ಬೇರೆ ಭಾಷೆಯ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡುವುದಿಲ್ಲ. ತಮಿಳ್, ಫಳಂ ಪದಗಳನ್ನು ತಮಿಳಿನವರು ಉಚ್ಛಾರಣೆ ಮಾಡುವಂತೆ ಸ್ಪಷ್ಟವಾಗಿ ಮಾಡಲ್ಲ. ಎಲ್ಲರೂ ನಮ್ಮ ಭಾಷೆಯನ್ನು ಸರಿಯಾಗಿ ಉಚ್ಛಾರಣೆ ಮಾಡಲ್ಲ ಎಂದು ಕೇಳುತ್ತಾ ಕೂರುವುದು ಮೂರ್ಖತನ. ನಾನು ಹುಟ್ಟಿದಾಗ ಬ್ಯಾಂಗಳೂರ್ ಅಂತ ಇತ್ತು. ಬಳಿಕ ಬೆಂಗಳೂರು ಮಾಡಿದರು. ಪರವಾಗಿಲ್ಲ. ಇದೆಲ್ಲಾ ಚಿಲ್ರೆ ವಿಷ್ಯ ಅಂತೀನಿ. ಸಿಲ್ಲಿ ವಿಚಾರದ ಬಗ್ಗೆ ಸುಮ್ನೆ ಮಾತಾಡ್ತೀವಿ. ಫ್ರೆಂಡ್ಲಿಯಾಗಿ ಕೇಳಿದ್ರೆ ಪರವಾಗಿಲ್ಲ, ಬಹಳ ಗಂಭೀರವಾಗಿ ಭಾವಿಸುವುದು ಸರಿಯಲ್ಲ" ಎಂದು ಗುಲ್ಷನ್ ಹೇಳಿದ್ದಾರೆ. ಅವರ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಹೆಸರಿನಲ್ಲಿ ಯಾವುದಾದರೂ ಅಕ್ಷರ ಬಿಟ್ಟು ಉಚ್ಛಾರಣೆ ಮಾಡಿದ್ರೆ ಸರೀನಾ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಕೂಡ ಇದೇ ವಿಚಾರದ ಬಗ್ಗೆ ಗುಲ್ಷನ್ ಪ್ರತಿಕ್ರಿಯಿಸಿದ್ದರು. 'ಕಾಂತಾರ-1' ನಟನ ಟ್ವೀಟ್ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ "ವರದಿಗಾರರು ಕನ್ನಡದ ಬದಲು ಕನ್ನಡ್ ರೀತಿಯ ಪದಗಳನ್ನು ಬಳಸಿದಾಗ ಅಥವಾ ಕಾಂತಾರವನ್ನು ತಪ್ಪಾಗಿ ಉಚ್ಚರಿಸಿದಾಗ, ನೀವು ಅವುಗಳನ್ನು ಸರಿಪಡಿಸಿದರೆ ಒಳ್ಳೆಯದು" ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಗುಲ್ಷನ್ "ಪರವಾಗಿಲ್ಲ ಬಿಡಿ, ಕನ್ನಡ ಭಾಷಿಕರು ಇತರ ಭಾಷೆಗಳ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಾರೆ. ವೈಯಕ್ತಿಕವಾಗಿ ನನಗೆ ಅದು ದೊಡ್ಡ ವಿಷಯವಲ್ಲ ಎಂದು ಅನಿಸುತ್ತದೆ" ಎಂದು ರಿಪ್ಲೇ ಮಾಡಿದ್ದರು.
"ಉದ್ದೇಶಪೂರ್ವಕವಾಗಿ ಯಾವುದೇ ಭಾಷೆಯನ್ನು ಅಪಹಾಸ್ಯ ಮಾಡುವುದು ಅಥವಾ ಅವಮಾನಿಸುವುದು ಮಾತ್ರ ತಪ್ಪು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಏಕತೆ ಅಂದರೆ ಯಾವುದೇ ರೀತಿಯಲ್ಲಿ ನೋವುಂಟುಮಾಡುವ ಅಥವಾ ಕೀಳಾಗಿ ಕಾಣದ ಸಣ್ಣಪುಟ್ಟ ವಿಷಯಗಳನ್ನು ನಾವು ಸ್ವೀಕರಿಸುತ್ತೇವೆ " ಎಂದು ಗುಲ್ಷನ್ ದೇವಯ್ಯ ಬರೆದುಕೊಂಡಿದ್ದರು.


Click it and Unblock the Notifications











