ಸುದೀಪ್ ಬ್ಯಾನ್ ಮಾಡಿ ಎಂದವರಿಗೆ ಜೀವ ಬೆದರಿಕೆ: ಅಭಿಮಾನಿಗಳ ವಿರುದ್ಧ ದೂರು
ನಟ ಕಿಚ್ಚ ಸುದೀಪ್ ರನ್ನು ಚಿತ್ರರಂಗದಿಂದ ಬ್ಯಾನ್ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದ ಕನ್ನಡ ಪರ ಸಂಘಟನೆಗೆ ಈಗ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕಿಚ್ಚ ಸುದೀಪ್ ಅಭಿಮಾನಿಗಳ ವಿರುದ್ಧ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ನಾಯ್ಕ್ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ದೂರು ನೀಡಿದ್ದಾರೆ. ಸುದೀಪ್ ಅಭಿಮಾನಿ ಸಂಘಟನೆಯಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಬೆದರಿಕೆ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಕುಮಾರ್ ನಾಯ್ಕ್ ಪೊಲೀಸ್ ಆಯುಕ್ತರ ಬಳಿ ದೂರು ನೀಡಿದ್ದಾರೆ.
ಇನ್ನು ಆಯುಕ್ತರ ಬಳಿ "ದೇಶ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ತಮಗೆ ದೈಹಿಕ ಮತ್ತು ಮಾನಸಿಕ ಹಲ್ಲೆಯಾದರೆ ಸುದೀಪ್ ಅವರೆ ನೇರ ಹೊಣೆ ಆಗುತ್ತಾರೆ. ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿಹೇಳಬೇಕು" ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸುದೀಪ್ ರಮ್ಮಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಶಿವಕುಮಾರ್ ನಾಯಕ್ ಅಧ್ಯಕ್ಷತೆಯ ಕನ್ನಡ ಪರ ಸಂಘಟನೆ ಸುದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದರು. ರಮ್ಮಿ ಜಾಹಿರಾತಿನಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಶಿವಕುಮಾರ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications











