ದರ್ಶನ್ ವಿರುದ್ಧ ಸುಳ್ಳು ದಾಖಲೆ ? ಷಡ್ಯಂತ್ರದ ಅನುಮಾನ - ಮಾರ್ಚ್ 11ಕ್ಕೆ ಬೃಹತ್ ಪ್ರತಿಭಟನೆ
ಹೆಚ್ಚೇನು ಇಲ್ಲ. ಮೂರು ವರ್ಷದ ಹಿಂದೆ ಚಿತ್ರರಂಗದಲ್ಲಿ ರಾಜನಂತೆ ಮೆರೆದವರು ದರ್ಶನ್. ಹೋದಲ್ಲಿ.. ಬಂದಲ್ಲಿ.. ಜನ ಸಾಗರ. ಅಭಿಮಾನದ ಜಾತ್ರೆ.. ಆನೆ ನಡೆದಿದ್ದೇ ದಾರಿ ಎಂಬಂತೆ ದರ್ಶನ್ ಇದ್ದರು. ಇಡೀ ಕನ್ನಡ ಚಿತ್ರರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮದೇ ಲೋಕದಲ್ಲಿ ತೇಲುತ್ತಿದ್ದ ದರ್ಶನ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದರು. ಇದ್ದರೆ ನೆಮ್ಮದಿಯಾಗ್ ಇರಬೇಕು ಎಂದು ಇದ್ದರು.
ಆದರೆ.. ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಆದರೆ ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಮತ್ತೊಮ್ಮೆ ಪರಪ್ಪನ ಅಗ್ರಹಾರದ ಪಾಲಾಗಿ 187 ದಿನಗಳಾಗಿವೆ.

ನೋ ಡೌಟ್.. ಪರಪ್ಪನ ಅಗ್ರಹಾರದ ಪಾಲಾಗಿರುವ ದರ್ಶನ್ ದಣಿದಿದ್ದಾರೆ. ಜೈಲಿನ ಚಿತ್ರ ಹಿಂಸೆ ಅನುಭವಿಸಲಾಗದೇ ಹೈರಾಣಾಗಿದ್ದಾರೆ.ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿ ಕಳೆದ ವರ್ಷ ಅಕ್ಷರಶಃ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ದರ್ಶನ್ ಅವರ ಈ ದಯನೀಯ ಸ್ಥಿತಿ ಕಂಡು ಅಭಿಮಾನಿಗಳು ನೊಂದುಕೊಂಡಿದ್ದಾರೆ. ಮಮ್ಮಲ ಮರುಗುತ್ತಿದ್ದಾರೆ.ಆದರೆ ಇದೇ ವೇಳೆ ಪೊಲೀಸರ ತನಿಖೆಯ ಮೇಲೆಯೇ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅಸಲಿಗೆ ದರ್ಶನ್ ಈ ಪ್ರಕರಣದಲ್ಲಿ ಸಿಲುಕಿದ ದಿನದಿಂದಲೇ ಹಲವರು ಖಾಕಿ ಪಡೆಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಲೇ ಇದ್ಧಾರೆ. ಷಡ್ಯಂತ್ರ ಮತ್ತು ಪಿತೂರಿ ನಡೆದಿದೆ ಎನ್ನುವ ವಾದ ಮಾಡುತ್ತಿದ್ದಾರೆ. ಪಾರದರ್ಶಕವಾದ ತನಿಖೆಯನ್ನು ಪೊಲೀಸರು ಮಾಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿದ್ಧಾರೆ. ಇದಕ್ಕೆ ಪೂರಕವಾಗಿ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿಗಳನ್ನು ನೀಡಲಾಗಿದೆ. ಸ್ಥಳ ಮಹಜರು ವೇಳೆ ಪೊಲೀಸರಿಂದ ಪ್ರಮಾದವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಕೂಡ ಆಗಿದೆ.
ಇದರ ನಡುವೆ ಇದೀಗ ಎಸಿಪಿ ಚಂದನ್ ಮತ್ತು ಇನ್ಸ್ಪೆಕ್ಟರ್ ಗಿರೀಶ್ ನಾಯಕ್ ಅವರು ನಟ ದರ್ಶನ್ ವಿರುದ್ಧ ತನಿಖೆಯ ಹೆಸರಿನಲ್ಲಿ 'ನಕಲಿ ದಾಖಲೆ'ಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ ಮಾಡಿದೆ. ಇಷ್ಟೇ ಅಲ್ಲ ಇದೇ ಮಾರ್ಚ್ ಹನ್ನೊಂದರಂದು ಪ್ರತಿಭಟನೆ ಕೂಡ ಮಾಡಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ಪ್ರಮುಖರಾದ ನಟರಾಜ್ ಬೊಮ್ಮಸಂದ್ರ ನ್ಯಾಯ ಸಮ್ಮತವಾಗಿ ತನಿಖೆ ನಡೆಯಬೇಕೇ ಹೊರತು ಸುಳ್ಳು ದಾಖಲೆಗಳ ಮೂಲಕ ಯಾರನ್ನೂ ಸಿಲುಕಿಸಬಾರದು ಎಂದು ಕಿಡಿಕಾರಿದ್ದಾರೆ.

ಎಸಿಪಿ ಚಂದನ್ ಕುಮಾರ್ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯಕ್, ದರ್ಶನ್ ವಿರುದ್ಧ ತನಿಖೆಯ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಇದರ ಹಿಂದೆ ಉದ್ದೇಶ ಏನೇ ಇರಬಹುದು ಆದರೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಒಬ್ಬ ನಾಯಕನನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಿರುವ ನಟರಾಜ್ ಬೊಮ್ಮಸಂದ್ರ ಎಸಿಪಿ ಚಂದನ್ ಕುಮಾರ್ ಮತ್ತು ಗಿರೀಶ್ ನಾಯಕ್ ಅವರನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕೆಂದು ಕೇಳಿದರೆ ಐಆರು ನಮಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿರುವ ನಟರಾಜ್ ಬೊಮ್ಮಸಂದ್ರ, ಈ ಭಾರಿ ಕೊಡ್ತಾರಾ ಇಲ್ವಾ ನೋಡೋಣ ಎಂದು ಹೇಳಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರ ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೆ ಕರೆಯನ್ನು ಕೂಡ ನೀಡಿದ್ದಾರೆ.


Click it and Unblock the Notifications










