ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು
ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ಬಿಡುಗಡೆಗೆ ಮೊದಲೇ ಇಂದು 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರವನ್ನು ಇಂದು(ಏಪ್ರಿಲ್ 7) ದೇಶದಾದ್ಯಂತ 800 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ 'ಬಾಹುಬಲಿ' ಚಿತ್ರ ಪ್ರದರ್ಶನಕ್ಕೆ ಕನ್ನಡ ಪರ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ 'ಬಾಹುಬಲಿ' ಮರು ಬಿಡುಗಡೆಗೆ ಕನ್ನಡ ಪರ ಸಂಘಟನೆಗಳ ವಿರೋಧ ಇದೆ ಎಂದು ಗೊತ್ತಿದ್ದರೂ ಸಹ ಬೆಂಗಳೂರು ಎಲಿಮೆಂಟ್ಸ್ ಮಾಲ್ ಮತ್ತು ಒರಾಯನ್ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ಮಾಡಲಾಗಿತ್ತು. ಈ ಬಗ್ಗೆ ತಿಳಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಕರವೇ ಕಾರ್ಯಕರ್ತರು ಮಾಲ್ ಗಳಿಗೆ ಮುತ್ತಿಗೆ ಹಾಕಿ ಪ್ರದರ್ಶನ ರದ್ದುಗೊಳಿಸಿದರು. ಅಲ್ಲದೇ ಮಾಲ್ ಗಳ ಮ್ಯಾನೇಜರ್ ಗಳಿಗೆ 'ಬಾಹುಬಲಿ' ಚಿತ್ರ ಪ್ರದರ್ಶನ ಮಾಡದಂತೆ ಎಚ್ಚರಿಕೆ ನೀಡಿದರು.

'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿದ್ದ ಸತ್ಯರಾಜ್, ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂಬ ಕಾರಣಕ್ಕೆ ಸಿನಿಮಾ ಪ್ರದರ್ಶನ ರದ್ದುಗೊಳಿಸಿದ ಕರವೇ ಕಾರ್ಯಕರ್ತರು, "ಧಿಕ್ಕಾರ ಧಿಕ್ಕಾರ ಕಾವೇರಿ ವಿರೋಧಿ ಸತ್ಯರಾಜ್ ಗೆ ಧಿಕ್ಕಾರ, ಕನ್ನಡ ವಿರೋಧಿ ಸತ್ಯರಾಜ್ ಗೆ ಧಿಕ್ಕಾರ" ಎಂದು ಘೋಷಣೆ ಕೂಗಿದರು.
ಎಲಿಮೆಂಟ್ಸ್ ಮಾಲ್ ನಲ್ಲಿ 'ಬಾಹುಬಲಿ' ಚಿತ್ರ ಪ್ರದರ್ಶನ ರದ್ದುಪಡಿಸಿದ ನಂತರ ಮಾತನಾಡಿದ ವಾಟಾಳ್ ನಾಗರಾಜ್, "ಸತ್ಯರಾಜ್ ಕನ್ನಡ ವಿರೋಧಿ. ಅತ್ಯಂತ ಅವಿವೇಕಿ. ಸತ್ಯರಾಜ್ ನಟಿಸಿರುವ ಯಾವುದೇ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲೇಬಾರದು. 'ಬಾಹುಬಲಿ- ದಿ ಬಿಗಿನ್ನಿಂಗ್' ಆಗಲಿ 'ಬಾಹುಬಲಿ 2' ಆಗಲಿ ಯಾವುದನ್ನು ಬಿಡುಗಡೆ ಮಾಡುವಂತಿಲ್ಲ. ಈಗಾಗಲೇ ದಾವಣಗೆರೆಯಲ್ಲಿಯೂ ತೀವ್ರವಾಗಿ ಪ್ರತಿಭಟನೆ ನಡೆಸಿದ್ದೇವೆ." ಎಂದು ಕಿಡಿಕಾರಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಮಾತನಾಡಿ, "ನಾನು ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಅಲ್ಲದೇ ಕನ್ನಡ ಪರ ಹೋರಾಟಗಾರನಾಗಿ, ನನ್ನ ವಿರೋಧ 'ಬಾಹುಬಲಿ' ಚಿತ್ರದ ವಿರುದ್ಧವಲ್ಲ. 'ಬಾಹುಬಲಿ' ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿರುವ ಸತ್ಯರಾಜ್ ವಿರುದ್ಧ. ಕಾವೇರಿ ಹೋರಾಟ ಸಂದರ್ಭದಲ್ಲಿ ಒಬ್ಬ ಕಲಾವಿದನಾಗಿ ವಿವೇಚನೆ ಇಲ್ಲದೇ ನಡೆದುಕೊಂಡಿದ್ದಾರೆ. ಅವರು ಕನ್ನಡಿಗರ ಮುಂದೆ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೆ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ"ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಇದೇ ವಿಚಾರವಾಗಿ ನಿನ್ನೆ(ಏಪ್ರಿಲ್ 6) ಸಹ ಕನ್ನಡ ಪರ ಸಂಘಟನೆಗಳು ಕಟ್ಟಪ್ಪನ ಪ್ರತಿಕೃತಿಯನ್ನು ದಹನ ಮಾಡಿ 'ಬಾಹುಬಲಿ' ಮರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರು.


Click it and Unblock the Notifications











