ಜೈಲಿನಲ್ಲಿ ದರ್ಶನ್ ವೈಭೋಗ ; ''ಎರಡು ಬಾರಿ ನಾನು ಜೈಲಿಗೆ ಹೋಗಿದ್ದೇ ಒಬ್ಬರಿಗೂ ಸಿಗರೇಟ್ ಸಿಗಲಿಲ್ಲ''-ಚೇತನ್ ಅಹಿಂಸಾ..!
ಜೈಲಿನಲ್ಲಿದ್ದರು ಕೂಡ ದರ್ಶನ್ ನೆಮ್ಮದಿಯಿಂದ ಇದ್ದರು. ಆದರೆ ಆ ನೆಮ್ಮದಿಗೆ ಮೊನ್ನೆ ಕೊಳ್ಳಿ ಬಿತ್ತು. ಕೈಯಲ್ಲಿದ್ದ ಸಿಗರೇಟ್ ಮತ್ತು ಕಾಫಿ ಮಗ್ ಇರೋ ಬರೋ ಚೂರು ಮನಶಾಂತಿಯನ್ನು ಕಿತ್ತುಕೊಂಡಿತು. ಸದ್ಯಕ್ಕೆ ಪರಪ್ಪನ ಅಗ್ರಹಾರದ ಪಾಲಾಗಿದ್ದ ದರ್ಶನ್, ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಖುದ್ದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೇರೆ ಜೈಲಿಗೆ ದರ್ಶನ್ ಅವರನ್ನು ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇದರ ನಡುವೆ ಕನ್ನಡದ ನಟ, ಪ್ರಗತಿಪರ ಚಿಂತಕ ಚೇತನ್ ಅಹಿಂಸಾ, ದರ್ಶನ್ ಅವರ ಮೋಜು -ಮಸ್ತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚೇತನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಇತ್ತೀಚಿನ ಚಿತ್ರವೊಂದು ತೋರಿಸುತ್ತದೆ. ನನ್ನ 2 ಬಾರಿ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನು ನೋಡಿದ 1,000ಕ್ಕೂ ಹೆಚ್ಚು ಕೈದಿಗಳಲ್ಲಿ, ಈ ಫೋಟೋದಲ್ಲಿ ದರ್ಶನ್ ರಂತೆ ಒಬ್ಬರಿಗೂ ಕುರ್ಚಿ, ಟೇಬಲ್, ಮಗ್, ಚಹಾ/ಕಾಫಿ, ಕರವಸ್ತ್ರ ಅಥವಾ ಸಿಗರೇಟ್ ಸಿಗಲಿಲ್ಲ. ಈ ಚಿತ್ರವು ನಿಜವಾಗಿದ್ದರೆ, ಹಣ ಮತ್ತು ಪ್ರಭಾವವು ಅದ್ಭುತಗಳನ್ನು ಮಾಡುತ್ತವೆ" ಎಂದಿದ್ದಾರೆ.

ಮುಂದುವರೆದು ದರ್ಶನ್ ಪಕ್ಕ ಇರುವ ವಿಲ್ಸನ್ ಗಾರ್ಡನ್ ನಾಗನ ಕುರಿತು ಕೂಡ ಆಕ್ಷೇಪ ವ್ಯಕ್ತಪಡಿಸಿರುವ ಚೇತನ್, ವೈರಲ್ ಆಗಿರುವ ಫೋಟೋದಲ್ಲಿ ನಟ ದರ್ಶನ್ರ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಭೂಗತ ವ್ಯಕ್ತಿಯು ಚಿತ್ರವನ್ನು ಸೋರಿಕೆ ಮಾಡಿದ ಕೈದಿಯನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೈಲಿನಲ್ಲಿ ವಿಶೇಷ ವಿಐಪಿ ಸವಲತ್ತುಗಳನ್ನು ಪಡೆಯುವುದಲ್ಲದೆ, ಜೈಲನ್ನು ತನ್ನ ಆಸ್ತಿಯಂತೆ ನಡೆಸುತ್ತಿರುವ ಈ ರೌಡಿಗಳು ಯಾರು? ಗೃಹ ಸಚಿವ ಪರಮೇಶ್ವರ್ ಅವರು ನಮ್ಮ ದೋಷಪೂರಿತ ಕರ್ನಾಟಕ ಜೈಲು ವ್ಯವಸ್ಥೆಯನ್ನು ಸಕ್ರಿಯವಾಗಿ ಸುಧಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಂದ್ಹಾಗೇ ಚೇತನ್ ಈ ಹಿಂದೆ ಎರಡೆರಡು ಬಾರಿ ಜೈಲಿಗೆ ಹೋಗಿದ್ದರು. ಹಿಂದುತ್ವದ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಚೇತನ್ ಹಿಂದೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆದು ಬಂದಿದ್ದರು. ಹೀಗಾಗಿ ತಮ್ಮ ಅನುಭವದ ಆಧಾರದ ಮೇಲೆ ಚೇತನ್ ಅಹಿಂಸಾ ಸದ್ಯಕ್ಕೆ ದರ್ಶನ್ಗೆ ಜೈಲಿನಲ್ಲಿ ಸಿಕ್ಕ ಐಶಾರಾಮಿ ಸೌಲಭ್ಯದ ಕುರಿತು ಪ್ರಶ್ನೆ ಮಾಡಿದ್ದಾರೆ.
ಉಳಿದಂತೆ ಕೆಲ ದಿನಗಳ ಹಿಂದೆ ಕೂಡ ಚೇತನ್ ಅಹಿಂಸಾ, ದರ್ಶನ್ ಪ್ರಕರಣದ ಕುರಿತು ಮಾತನಾಡಿದ್ದರು. ತಾವು ಜೈಲಿನಲ್ಲಿ ಕಳೆದ 'ಆ ದಿನಗಳನ್ನು' ನೆನಪಿಸಿಕೊಂಡಿದ್ದರು. ಸೆಲ್ ಅಲ್ಲಿ ಇರ್ಬೋದು ಆದ್ರೆ ಬ್ಯಾರೆಕ್ಸ್ ಅಲ್ಲಿ ಇರುವುದು ಕಷ್ಟ ಎಂದಿದ್ದ ಚೇತನ್, ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ರು ಎಂದು ಹೇಳಿದ್ದರು. ಜೈಲಿನ ಊಟ ನನಗೆ ಯಾವತ್ತು ಸಮಸ್ಯೆಯಾಗಲಿಲ್ಲ ಬದಲಿಗೆ ಜೈಲೂಟ ನನಗೆ ಸಖತ್ ಇಷ್ಟವಾಯಿತು ಎಂದು ಕೂಡ ಹೇಳಿದ್ದರು ಚೇತನ್ ಅಹಿಂಸಾ.


Click it and Unblock the Notifications











